ಸಾವಯವ ಸಂತೆಗೆ ಚಾಲನೆ

ಚಿತ್ರದುರ್ಗ:

        ಸಾವಯವ ಗೊಬ್ಬರಗಳನ್ನು ಬಳಸಿ ಆಹಾರ ಧಾನ್ಯಗಳನ್ನು ಬೆಳೆಯಬೇಕಾದರೆ ಮೊದಲು ಗೋವುಗಳನ್ನು ರಕ್ಷಿಸಬೇಕೆಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.

       ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶ, ಸ್ವದೇಶಿ ಜಾಗರಣ ಮಂಚ್ ಇವರುಗಳ ಸಹಯೋಗದೊಂದಿಗೆ ಜೆ.ಸಿ.ಆರ್. ಬಡಾವಣೆಯ ಗಣೇಶ ದೇವಸ್ಥಾನ ಸಮೀಪ ಭಾನುವಾರ ಏರ್ಪಡಿಸಲಾಗಿದ್ದ ಸಾವಯವ ಸಂತೆ ಉದ್ಘಾಟಿಸಿ ಮಾತನಾಡಿದರು.
ಹಿಂದಿನ ಕಾಲದಲ್ಲಿ ಕೊಟ್ಟಿಗೆ ಗೊಬ್ಬರಗಳನ್ನು ಹಾಕಿ ಗುಣಮಟ್ಟದ ಆಹಾರ ಧಾನ್ಯ, ಸೊಪ್ಪು, ತರಕಾರಿ, ಹಣ್ಣು ಹಂಪಲುಗಳನ್ನು ಬೆಳೆಯುತ್ತಿದ್ದರು. ಈಗ ದನ ಕರುಗಳನ್ನು ಸಾಕುವವರೆ ಇಲ್ಲದಿರುವಾಗ ಕೊಟ್ಟಿಗೆ ಗೊಬ್ಬರ ಬಳಸಿ ಸಾವಯವ ಕೃಷಿ ಮಾಡುವುದಾದರೂ ಹೇಗೆ ಎಂದು ಪ್ರಶ್ನಿಸಿದರು.

        ಆಯಾ ಕಾಲದಲ್ಲಿ ಸಿಗುವ ಹಣ್ಣು, ತರಕಾರಿ, ಸೊಪ್ಪು, ಆಹಾರ ಧಾನ್ಯಗಳನ್ನು ತಿನ್ನಬೇಕು. ಸಿರಿ ಧಾನ್ಯಗಳಿಗೆ ಹೆಚ್ಚಿನ ಪ್ರಚಾರ ಬೇಕಿದೆ. ತಿನ್ನುವವರಿಗೆ ದುಬಾರಿ ಎನ್ನುವ ಭಾವನೆ ಬರಬಾರದು. ರೈತರಿಗೆ ಕೈಗೆಟುವ ಬೆಲೆ ಸಿಗಬೇಕು. ದೇಶದ ಪ್ರಧಾನಿ ನರೇಂದ್ರಮೋದಿರವರು ಹದಿನೆಂಟು ಬಗೆಯ ಬೆಳೆಗಳಿಗೆ ಬೆಂಬಲ ಬೆಲೆ ನಿಗಧಿಪಡಿಸಿದ್ದಾರೆ. ಸ್ವಾಮಿನಾಥನ್ ಆಯೋಗದ ವರದಿ ಅನ್ವಯ ರೈತರಿಗೆ ಲಾಭ ಸಿಗಬೇಕು. ಸಾವಯವ ಸಂತೆ ನಿಜಕ್ಕೂ ಒಳ್ಳೆಯ ಬೆಳವಣಿಗೆ ಇದು ಇನ್ನು ಹೆಚ್ಚು ಜನರ ಬಳಿ ತಲುಪಬೇಕು ಎಂದು ಸಲಹೆ ನೀಡಿದರು.

         ಸ್ವದೇಶಿ ಜಾಗರಣ ಮಂಚ್ ಕರ್ನಾಟಕ ಮತ್ತು ತೆಲಂಗಾಣ ರಾಜ್ಯದ ಪ್ರಮುಖರಾದ ಜಗದೀಶ್ ಮಾತನಾಡುತ್ತ ಕೃಷಿಯನ್ನು ನಿರ್ಲಕ್ಷಿಸುತ್ತಿರುವುದರಿಂದ ದೇಶ ನಾಶವಾಗುತ್ತಿದೆ. ಬೆಳೆ ಹಾನಿಯಿಂದ ಇದುವರೆವಿಗೂ ದೇಶದಲ್ಲಿ ಮೂರು ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಸರ್ಕಾರ ಕಣ್ಣುಮುಚ್ಚಿ ಜಾಗತೀಕರಣಕ್ಕೆ ಸಹಿ ಹಾಕಿರುವುದರಿಂದ ಕೃಷಿ ವಿನಾಶದತ್ತ ತಲುಪಿದೆ. ರಾಸಾಯನಿಕ ಕೃಷಿಯಿಂದ ಮಣ್ಣು, ಬೀಜದ ಸತ್ವ ನಾಶವಾಗಿದೆ. ಸಾವೆ, ನವಣೆ, ಆರ್ಕ, ಸಜ್ಜೆ ಬೆಳೆಯುವ ಭೂಮಿಯಲ್ಲಿ ಜಗಿದು ಉಗಿಯುವ ಅಡಿಕೆ ಬೆಳೆಯುತ್ತಿರುವುದೇ ಕೃಷಿಗೆ ಮಾರಕವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

         ನಗರಸಭೆ ಸದಸ್ಯೆ ರೋಹಿಣಿ ನವೀನ್ ಮಾತನಾಡಿ ಸಿರಿಧಾನ್ಯಗಳು ನಿಜಕ್ಕೂ ಆರೋಗ್ಯಕ್ಕೆ ಅತ್ಯುತ್ತಮವಾದುದು. ಆದರೆ ಕೆಲವೊಮ್ಮೆ ಸೋಮಾರಿತನ ಮಾಡಿಕೊಂಡು ಹೊರಗಿನ ತಿಂಡಿ ತಿನಿಸುಗಳನ್ನು ತಿನ್ನುವ ರೂಢಿ ಜಾಸ್ತಿಯಾಗಿದೆ. ಇದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ಸೊಪ್ಪಿನಲ್ಲಿಯೇ ನಾನಾ ಬಗೆಯ ತಿಂಡಿ ತಿನಿಸುಗಳನ್ನು ಮನೆಯಲ್ಲಿಯೇ ಮಾಡಬಹುದು ಎನ್ನುವುದನ್ನು ಮೊದಲು ಮಹಿಳೆಯರು ತಿಳಿದುಕೊಂಡು ಸಿರಿಧಾನ್ಯಗಳ ಬಳಕೆಗೆ ಹೆಚ್ಚಿನ ಒತ್ತು ಕೊಡಲಿ ಎಂದು ವಿನಂತಿಸಿದರು.

         ಕೃಷಿ ಇಲಾಖೆ ಜಂಟಿ ನಿರ್ದೇಶಕ ಲಕ್ಷ್ಮಣ್ ಎಸ್.ಕಳ್ಳೆನ್ನವರ, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ದೇವರಾಜ್, ಭಾರತೀಯ ಕಿಸಾನ್ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಪುಟ್ಟಸ್ವಾಮಿ, ನವೀನ್ ಚಾಲುಕ್ಯ ವೇದಿಕೆಯಲ್ಲಿದ್ದರು.ವಕೀಲರ ಸಂಘದ ಅಧ್ಯಕ್ಷ ಎನ್.ಬಿ.ವಿಶ್ವನಾಥ್, ನಗರಸಭೆ ಸದಸ್ಯ ಹರೀಶ್ ಸೇರಿದಂತೆ ಜೆ.ಸಿ.ಆರ್.ಬಡಾವಣೆಯ ನಿವಾಸಿಗಳು ಸಾವಯವ ಸಂತೆಯನ್ನು ಕುತೂಹಲದಿಂದ ವೀಕ್ಷಿಸಿದರು.ಬಾಳೆ, ಪಪ್ಪಾಯಿ, ಕುಂಬಳಕಾಯಿ, ಸೊಪ್ಪು, ಮೊಳಕೆಕಾಳು ಪಲ್ಯ, ಕಡಲೆಗಿಡ, ಶೇಂಗಾ ಸಾವಯವ ಸಂತೆಯಲ್ಲಿ ಮಾರಾಟವಾಯಿತು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link