ಸಫಾಯಿ ಕರ್ಮಚಾರಿಗಳು, ಪೌರ ಕಾರ್ಮಿಕರ ವೇತನ ಹೆಚ್ಚಿಸಿ : ವಿಧಾನಪರಿಷತ್ ಸದಸ್ಯೆ ಜಯಮ್ಮ ಬಾಲರಾಜ್

ಚಿತ್ರದುರ್ಗ:

  ಸಫಾಯಿ ಕರ್ಮಚಾರಿಗಳು ಬರಿ ಕೈಯಲ್ಲಿ ಸ್ವಚ್ಛತೆ ಕೆಲಸ ಮಾಡದೆ, ಕೈಗವಚ, ಶೂ, ಮಾಸ್ಕ್ ಸೇರಿದಂತೆ ಸುರಕ್ಷಾ ಕ್ರಮಗಳನ್ನು ಅಳವಡಿಸಿಕೊಂಡು ಕೆಲಸ ಮಾಡಬೇಕೆಂದು ವಿಧಾನ ಪರಿಷತ್ ಸದಸ್ಯೆ ಜಯಮ್ಮ ಬಾಲರಾಜ್ ಹೇಳಿದರು.

  ನಗರದ ತ.ರಾ.ಸು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಹಾಗೂ ನಗರಸಭೆ ಸಹಯೋಗದೊಂದಿಗೆ ಶುಕ್ರವಾರ ಆಯೋಜಿಸಿದ್ದ “ ಮ್ಯಾನ್ಯುಯಲ್ ಸ್ಕ್ಯಾವೆಂಜರ್ ನೇಮಕಾತಿ ನಿಷೇಧ ಮತ್ತು ಅವರ ಪುನರ್ವಸತಿ ಅಧಿನಿಯಮ 2013ರ ಬಗ್ಗೆ ಅರಿವು ಮೂಡಿಸುವ ಒಂದು ದಿನದ ಕಾರ್ಯಗಾರ” ದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

  ಪ್ರಸ್ತುತ ಹಲವಾರು ರೋಗಗಳು ಮಾನವನ ದೇಹಕ್ಕೆ ಮಾಲಿನ್ಯ ಮತ್ತು ಕಲುಷಿತ ವಸ್ತುಗಳಿಂದಲೇ ಹರಡುತ್ತವೆ. ಹಿಂದಿನ ಕಾಲದಲ್ಲಿ ಮಾನವನ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚು ಇರುತ್ತಿತ್ತು, ಅದರೆ ಪ್ರಸ್ತುತ ದಿನಗಳಲ್ಲಿ ರೋಗ ನಿರೋಧಕ ಶಕ್ತಿ ಮಾನವನಲ್ಲಿಲ್ಲ ಇದರಿಂದ ಹಲವಾರು ರೋಗಗಳು ಬರುತ್ತಿವೆ. ಆರೋಗ್ಯದ ಹಿತದೃಷ್ಟಿಯಿಂದ ಸಫಾಯಿ ಕರ್ಮಚಾರಿಗಳು ಬರಿ ಕೈಯಲ್ಲಿ ಕೆಲಸ ಮಾಡದೆ, ಕೈಗೆ ಗ್ಲೌಸ್, ಮುಖಕ್ಕೆ ಮಾಸ್ಕ್, ಶೂ ಧರಿಸಿ ಕೆಲಸ ಮಾಡಬೇಕೆಂದರು.

   ಜಿಲ್ಲೆಯ ಎಲ್ಲಾ ನಗರಸಭೆಗಳು, ಪುರಸಭೆ, ಪಟ್ಟಣ ಪಂಚಾಯತಗಳಲ್ಲಿ ಖಾಸಗಿಯಾಗಿ ಕೆಲಸ ಮಾಡುವ ಸಫಾಯಿ ಕರ್ಮಚಾರಿಗಳು ಹಾಗೂ ಪೌರ ಕಾರ್ಮಿಕರು ಹೆಚ್ಚು ಇದ್ದು, ಪ್ರತಿ ದಿನ ಕಡಿಮೆ ವೇತನ ಕೆಲಸ ಮಾಡುತ್ತಾರೆ, ಅಲ್ಪ ವೇತನ ಮಕ್ಕಳ ವಿದ್ಯಾಬ್ಯಾಸಕ್ಕೆ ಹಾಗೂ ಕುಟುಂಬ ಖರ್ಚು ವೆಚ್ಚಗಳಿಗೆ ಸಾಕಾಗುವುದಿಲ್ಲ, ಆದ್ದರಿಂದ ಆಯಾ ಸ್ಥಳೀಯ ಸಂಸ್ಥೆ ಅಧಿಕಾರಿಗಳು ಖಾಸಗಿಯಾಗಿ ಕೆಲಸ ಮಾಡುವ ಸಫಾಯಿ ಕರ್ಮಚಾರಿಗಳು ಹಾಗೂ ಪೌರ ಕಾರ್ಮಿಕರ ವೇತನ ಹೆಚ್ಚಿಸಬೇಕು ಹಾಗೂ ನಗರದಲ್ಲಿ ಕೆಲವು ಕಡೆ ಕಸವು ಸರಿಯಾಗಿ ಸ್ವಚ್ಛತೆಯಾಗಿಲ್ಲ ನಗರಸಭೆ ಪೌರಾಯುಕ್ತರು ಅಂತಹ ಕಡೆ ಗಮನಿಸಿ ಸ್ವಚ್ಛತೆ ಮಾಡಿಸಬೇಕೆಂದು ಜಯಮ್ಮ ಬಾಲರಾಜ್ ಮನವಿ ಮಾಡಿದರು.

   ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಮಾತನಾಡಿ, ಸಫಾಯಿ ಕರ್ಮಚಾರಿಗಳು ಮನೆಗಳಿಂದ ನೀಡುವ ಕಸಗಳಲ್ಲಿ ಅಪಾಯಕಾರಿ ವಸ್ತುಗಳಾದ ಗಾಜು ವಸ್ತುಗಳನ್ನು ಮುಟ್ಟುವಂತಿಲ್ಲ. ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಯಾರು ಕಸ ಉತ್ಪಾದಿಸುತ್ತಾರೆ, ಅವರೆ ಕಸವನ್ನು ಜವಾಬ್ದಾರಿಯಿಂದ ಒಣ ಮತ್ತು ಹಸಿ ಕಸಗಳನ್ನಾಗಿ ಅವರೇ ಮನೆಯಲ್ಲಿ ವಿಂಗಡಿಸಿ ಕಸ ವಿಲೇವಾರಿ ವಾಹನಗಳಿಗೆ ತಂದು ಹಾಕಬೇಕು, ಈ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತದೆ.

   ಜಿಲ್ಲೆಯು ಸ್ವಚ್ಛವಾಗಬೇಕೆಂದರೆ ನಗರಸಭೆ ಪೌರಾಯುಕ್ತರ ಶ್ರಮ ಹಾಗೂ ಸಫಾಯಿ ಕರ್ಮಚಾರಿಗಳ ಕೆಲಸ ಪ್ರಮುಖವಾಗಿದೆ. ಮ್ಯಾನ್ಯುಯಲ್ ಸ್ಕ್ಯಾವೆಂಜರ್ ನಿಷೇಧ ಮತ್ತು ಪುನರ್ವಸತಿ ಅಧಿನಿಯಮ 2013 ದಡಿ ಸಂವಿಧಾನ ಪ್ರಸ್ತಾವನೆಯಲ್ಲಿ ಪ್ರತಿಯೊಬ್ಬ ಸಫಾಯಿ ಕರ್ಮಚಾರಿ ವ್ಯಕ್ತಿಯ ಗೌರವವನ್ನು ಕಾಪಾಡುವುದು ಕಾಯ್ದೆಯ ಉದ್ದೇಶವಾಗಿದೆ. ಸಫಾಯಿ ಕರ್ಮಚಾರಿಗಳು ಅಸುರಕ್ಷಿತ (ಇನ್‍ಸ್ಯಾನಿಟರಿ ಲೆಟ್ರಿನ್ಸ್) ಕಾರ್ಯವನ್ನು ನಿರ್ವಹಿಸುವಂತಿಲ್ಲ.

  ಯಾರಾದರು ಅಸುರಕ್ಷಿತ ಕೆಲಸಗಳಲ್ಲಿ ಸಫಾರಿ ಕರ್ಮಚಾರಿಗಳನ್ನು ಮಾಲೀಕರು ಬಳಸಿಕೊಂಡರೆ, ಸ್ಥಳೀಯ ಸಂಸ್ಥೆಗಳು ಕಟ್ಟಡದ ಮಾಲೀಕರಿಗೆ ನೋಟೀಸ್ ನೀಡಬೇಕಾಗುತ್ತದೆ ಎಂದರು.ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ 22, ನಗರ- 79 ಸೇರಿದಂತೆ ಒಟ್ಟು 101 ಸಫಾಯಿ ಕರ್ಮಚಾರಿಗಳನ್ನು ಗುರುತಿಸಲಾಗಿದೆ. ವಿವಿಧ ಇಲಾಖೆಗಳಿಂದ ವಸತಿ ಸೌಕರ್ಯ, ಸಾಲ ಸೌಲಭ್ಯ, ಮಕ್ಕಳಿಗೆ ವಿದ್ಯಾರ್ಥಿವೇತನ, ಪ್ರೋತ್ಸಾಹ ಧನ, ಪ್ರತಿಷ್ಠತ ಶಾಲೆಗಳಲ್ಲಿ ಪ್ರವೇಶವಕಾಶ, ಮೊರಾರ್ಜಿ ಮಾದರಿ ವಸತಿ ಶಾಲೆಗಳಲ್ಲಿ ಪ್ರವೇಶ ಅವಕಾಶ ಹಾಗೂ ಇನ್ನಿತರ ಸೌಲಭ್ಯಗಳನ್ನು ನೀಡಲಾಗುತ್ತದೆ ಎಲ್ಲಾ ಸಫಾಯಿ ಕರ್ಮಚಾರಿಗಳು ಸದುಪಯೋಗ ಪಡಿಸಿಕೊಳ್ಳಬೇಕೆಂದು ಹೇಳಿದರು.

   ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ರಾಜಶೇಖರ ಮಾತನಾಡಿ, ಸಫಾಯಿ ಕರ್ಮಚಾರಿಗಳ ಕೆಲಸ ಶ್ರೇಷ್ಠ ಕಾರ್ಯವಾಗಿದ್ದು, ನೀವುಗಳು ದೇವರ ಮಕ್ಕಳಿದ್ದಂತೆ. ಪೌರಕಾರ್ಮಿಕರ ಮಕ್ಕಳು, ಪೌರಕಾರ್ಮಿಕರು ಆಗುವುದು ಬೇಡ, ನಿಮ್ಮ ಮಕ್ಕಳಿಗೆ ಉನ್ನತವಾದ ಶಿಕ್ಷಣವನ್ನು ನೀಡಿ ಉನ್ನತವಾದ ಸ್ಥಾನಕ್ಕೆ ಏರುವಂತೆ ಮಾರ್ಗದರ್ಶನ ನೀಡಬೇಕು, ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸಲು ಮುಂದಾಗಬೇಕು ಎಂದು ಹೇಳಿದರು.

    ಕಾರ್ಯಗಾರದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನಾಗರಾಜ ಪ್ರಾಸ್ತಾವಿಕವಾಗಿ ಮಾತನಾಡಿದರು. ನಗರಸಭೆ ಪೌರಾಯುಕ್ತ ಚಂದ್ರಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಪಾಲಾಕ್ಷ, ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಜಯಪ್ರಕಾಶ್ ಹಾಗೂ ಜಿಲ್ಲೆಯ ಎಲ್ಲಾ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್‍ಗಳ ಮುಖ್ಯಾಧಿಕಾರಿಗಳು ಉಪಸ್ಥಿತರಿದ್ದರು. ಜಿಲ್ಲೆಯ ಎಲ್ಲ ಸಫಾಯಿ ಕರ್ಮಚಾರಿಗಳು ಕಾರ್ಯಗಾರದಲ್ಲಿ ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link