ಬೆಂಗಳೂರು
ಸಮ್ಮಿಶ್ರ ಸರ್ಕಾರದ ಬಹು ನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆಯಲ್ಲಿ ಒಕ್ಕಲಿಗ ಸಮುದಾಯಕ್ಕೆ ಪ್ರಾತಿನಿಧ್ಯತೆ ಕೊಟ್ಟಿಲ್ಲ ಎಂದು ಚಿಕ್ಕಬಳ್ಳಾಪುರ ಶಾಸಕ ಡಾ. ಕೆ. ಸುದಾಕರ್ ತೀವ್ರ ಅಸಮಾದಾನ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ ಸಮ್ಮಿಶ್ರ ಸರ್ಕಾರದಲ್ಲಿ ಡಿ.ಕೆ. ಶಿವಕುಮಾರ್ ಹಾಗೂ ಕೃಷ್ಣ ಬೈರೇಗೌಡ ಸೇರಿ ಇಬ್ಬರು ಮಾತ್ರ ಒಕ್ಕಲಿಗ ಸಮುದಾಯದ ಸಚಿವರಿದ್ದಾರೆ. ಇನ್ನೂ, ಒಂದು ಸ್ಥಾನ ಒಕ್ಕಲಿಗರಿಗೆ ನೀಡಬೇಕಿತ್ತು. ತಮಗೆ ನೀಡದಿದ್ದರೂ, ಕೃಷ್ಣಪ್ಪ ಅಥವಾ ಎಸ್.ಟಿ. ಸೋಮಶೇಖರ್ ಅವರಲ್ಲಿ ಒಬ್ಬರಿಗೆ ಕೊಡಬಹುದಿತ್ತು. ಆದರೆ, ಕಾಂಗ್ರೆಸ್ ನೀಡುವ ಮನಸ್ಸು ಮಾಡಲಿಲ್ಲ. ಒಕ್ಕಲಿಗರೇ ಆಗಿರುವ ಡಿ.ಕೆ. ಶಿವಕುಮಾರ್ ಕೂಡ ಈ ಕುರಿತು ಮೌನವಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಜೆಡಿಎಸ್ ಪಕ್ಷದಲ್ಲಿ ಹೆಚ್ಚು ಒಕ್ಕಲಿಗ ಸಚಿವರಿದ್ದಾರೆ. ಆದರೆ, ಕಾಂಗ್ರೆಸ್ನಲ್ಲಿ ಹೆಚ್ಚು ಒಕ್ಕಲಿಗ ಶಾಸಕರಿಲ್ಲ. ಈ ಕುರಿತು ಸಮುದಾಯದ ಶಾಸಕರೆಲ್ಲ ಸೇರಿ ಸಭೆ ನಡೆಸುತ್ತೇವೆ. ಮುಂದಿನ ದಿನಗಳಲ್ಲಿ ಈ ವಿಚಾರ ಹೈಕಮಾಂಡ್ ಜೊತೆ ಚರ್ಚಿಸುತ್ತೇವೆ ಎಂದು ಸುಧಾಕರ್ ತಮಗೆ ಸಚಿವ ಸ್ಥಾನ ನೀಡಿಲ್ಲ ಎಂಬ ಅಸಮಾಧಾನವನ್ನು ಪರೋಕ್ಷವಾಗಿ ಹೊರ ಹಾಕಿದರು.
ಕೇವಲ ಆರೇ ತಿಂಗಳಿಗೆ ರಮೇಶ್ ಜಾರಕಿಹೊಳಿಯವರನ್ನು ಸಚಿವ ಸ್ಥಾನದಿಂದ ಇಳಿಸಿದ್ದು ಸರಿಯಲ್ಲ. ಹೋಸಕೋಟೆ ಶಾಸಕ ಎಂ.ಟಿ.ಬಿ ನಾಗರಾಜ್ ಅವರಿಗೆ ಸಚಿವ ಸ್ಥಾನ ನೀಡಿರುವುದು ಖುಷಿ ತಂದಿದೆ. ನಾಗರಾಜ್ ಅವರು ಹಿರಿಯರು. ಸಂಪುಟ ರಚನೆ ಆದಾಗಲೇ ಅವರಿಗೆ ಸಚಿವ ಸ್ಥಾನ ಸಿಗಬೇಕಿತ್ತು. ಆದರೆ, ತಡವಾಗಿ ಸಿಕ್ಕಿದೆ ಎಂದು ಹೇಳಿದರು.
ಶಂಕರ್ ಅವರನ್ನು ಸಚಿವ ಸ್ಥಾನದಿಂದ ಕೆಳಗಿಳಿಸಿದ್ದು ಕೂಡ ಸರಿಯಲ್ಲ. ಶಂಕರ್ ಮತ್ತು ನಾಗೇಶ್ ಇಬ್ಬರೂ ಪಕ್ಷೇತರರು. ಇವಬ್ಬರಿಗೂ ಮೊದಲೇ ನಿಗಮ ಮಂಡಳಿ ಸ್ಥಾನ ಕೊಡಬೇಕಿತ್ತು. ಏಕೆಂದರೆ ಕಾಂಗ್ರೆಸ್ ಶಾಸಕರ ಸಂಖ್ಯೆ ಮೈತ್ರಿ ಸರಕಾರ ರಚನೆಗೆ ಸಾಕಷ್ಟಿತ್ತು. ಜತೆಗೆ, ಸಂಪುಟ ವಿಸ್ತರಣೆಯಲ್ಲಿ ಸಮಾತೋಲನ ಇಲ್ಲ. ಒಂದು ಜಿಲ್ಲೆಗೆ ಮೂರು ಜನರಿಗೆ ಸಚಿವ ಸ್ಥಾನ ಕೊಟ್ಟಿದ್ದಾರೆ. ಬಿಜಾಪುರ ಜಿಲ್ಲೆಯಲ್ಲಿ ಮೂವರು ಶಾಸಕರಿಗೆ ಸಚಿವ ಸ್ಥಾನ ನೀಡಲಾಗಿದೆ. ಈ ಜಿಲ್ಲೆಗೆ ಕೊಡುವ ಬದಲು ಹಾವೇರಿ, ದಾವಣಗೆರೆಗೆ ಒಂದೊಂದು ಸ್ಥಾನ ನೀಡಬಹುದಿತ್ತು ಎಂದು ಅವರು ಹೇಳಿದ್ದಾರೆ.
ಬಿಸಿ ಪಾಟೀಲ್ ಗೆ ಸಚಿವ ಸ್ಥಾನ ಕೊಡುವ ಬದಲು ಎಂ.ಬಿ ಪಾಟೀಲ್ ಗೆ ಸಚಿವ ಸ್ಥಾನ ನೀಡಿದ್ದೇಕೆ ಎಂದು ಪರೋಕ್ಷವಾಗಿ ಅವರ ಹೆಸರನ್ನು ಪ್ರಸ್ತಾಪಿಸದೆ ಸುಧಾಕರ್ ಪ್ರಶ್ನಿಸಿದ್ದಾರೆ.
ಅತೃಪ್ತ ಶಾಸಕರನ್ನು ಬಿಜೆಪಿಯವರು ಸಂಪರ್ಕ ಮಾಡುವ ವಿಚಾರದ ಬಗ್ಗೆ ಮಾತನಾಡಿದ ಅವರು, ಒಬ್ಬ ಮಾಜಿ ಮುಖ್ಯ ಮಂತ್ರಿಯಾದವರು ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ಮಾಡುವುದು ಸರಿಯಲ್ಲ. ನನಗೆ ಸಚಿವ ಸ್ಥಾನ ಸಿಗದೆ ಇರುವುದಕ್ಕೆ ಅಸಮಾಧಾನ ಆಗಿರುವುದು ನಿಜ. ಹಾಗಂತ ಬಿಜೆಪಿಗೆ ಹೋಗುವುದಿಲ್ಲ. ನಾನು ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ. ಹೀಗಾಗಿ, ಕಾಂಗ್ರೆಸ್ ತೊರೆಯುವ ಪ್ರಶ್ನೆಯೇ ಇಲ್ಲ. ನನಗೆ ಆದ ಅನ್ಯಾಯದ ಬಗ್ಗೆ ಪಕ್ಷದ ಮಟ್ಟದಲ್ಲಿ ಚರ್ಚೆ ಮಾಡುತ್ತೇನೆ ಎಂದು ಸುಧಾಕರ್ ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
