ಬೆಂಗಳೂರು
ಹೈದರಾಬಾದ್ ನಲ್ಲಿ ಎಚ್1ಎನ್1 ಸೋಂಕಿನಿಂದ ಮೃತಪಟ್ಟ ಐಪಿಎಸ್ ಅಧಿಕಾರಿ ಮಧುಕರ ಶೆಟ್ಟಿ ಅವರಿಗೆ ಚಿಕಿತ್ಸೆ ನೀಡುವಲ್ಲಿ ಲೋಪವಾಗಿದ್ದರೆ ವರದಿ ತರಿಸಿಕೊಂಡು ಅಗತ್ಯ ಕಂಡುಬಂದಿಲ್ಲಿ ತನಿಖೆ ನಡೆಸುವುದಾಗಿ ಗೃಹ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಧುಕರ ಶೆಟ್ಟಿ ಅವರ ಸಾವಿನ ಕುರಿತು ತನಿಖೆ ನಡೆಸಬೇಕೆಂದು ಹಿರಿಯ ಸಚಿವ ಡಿ.ಕೆ. ಶಿವಕುಮಾರ್ ಮತ್ತಿತರರು ಮಾಡಿರುವ ಒತ್ತಾಯ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಚಿಕಿತ್ಸೆಯಲ್ಲಿ ಏನಾದರೂ ಲೋಪವಾಗಿದೆಯೇ ಎನ್ನುವ ಕುರಿತು ಹಿರಿಯ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ. ಚಿಕಿತ್ಸೆ ನೀಡಿದ ಆಸ್ಪತ್ರೆಯಲ್ಲಿನ ಅಧಿಕಾರಿಗಳಿಂದ ವರದಿ ಪಡೆದು ಸಂಶಯ ಕಂಡುಬಂದಲ್ಲಿ ತನಿಖೆಗೆ ಆದೇಶಿಸಲಾಗುವುದು ಎಂದರು
ಹೆಮ್ಮೆಯ, ದಕ್ಷ ಪ್ರಾಮಾಣಿಕ ಅಧಿಕಾರಿ ಮಧುಕರ್ ಶೆಟ್ಟಿ ನಮ್ಮನ್ನು ಅಗಲಿದ್ದು ಅತ್ಯಂತ ದುಖಃದ ಸಂಗತಿ. ಪೊಲೀಸ್ ಇಲಾಖೆಯಲ್ಲಿ ತಮ್ಮದೇ ಆದ ಹೆಜ್ಜೆ ಗುರುತುಗಳನ್ನು ಅವರು ಮೂಡಿಸಿದ್ದಾರೆ. ನಕ್ಸಲ್ ನಿಗ್ರಹ ದಳ, ಲೋಕಾಯುಕ್ತ ಸೇರಿ ತಾವು ಸೇವೆ ಸಲ್ಲಿಸಿದ ಎಲ್ಲಾ ಕಡೆಗಳಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದಾರೆ. ಯುವ ಅಧಿಕಾರಿಗಳಿಗೆ ಮಾದರಿಯಾಗಿದ್ದ ಅವರ ನಿಧನದಿಂದ ಉತ್ತಮ ಪೊಲೀಸ್ ಅಧಿಕಾರಿಯನ್ನು ಕಳೆದುಕೊಂಡಂತಾಗಿದೆ ಎಂದು ಸಚಿವರು ಶೋಕಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
