ಬೆಂಗಳೂರು
ಕರ್ನಾಟಕದಲ್ಲಿ ಮಧ್ಯಂತರ ಚುನಾವಣೆಗೆ ಹೋಗಬೇಕು ಎಂಬ ಕನಸನ್ನು ಕೈ ಬಿಟ್ಟಿರುವ ಬಿಜೆಪಿ ವರಿಷ್ಟರು ಇದೀಗ ನಾಯಕತ್ವ ಬದಲಾವಣೆಗೆ ಸಜ್ಜಾಗಿದ್ದು ಮಾರ್ಚ್ ವೇಳೆಗೆ ದಲಿತ ನಾಯಕ ಗೋವಿಂದ ಕಾರಜೋಳ್ ಅವರನ್ನು ಸಿಎಂ ಹುದ್ದೆಗೆ ತರಲು ತಯಾರಿ ಆರಂಭಿಸಿದ್ದಾರೆ.
ಈ ಸ್ಪೋಟಕ ಮಾಹಿತಿಯನ್ನು ಉನ್ನತ ಮೂಲಗಳು ನೀಡಿದ್ದು ಖುದ್ದು ಪ್ರಧಾನಿ ನರೇಂದ್ರಮೋದಿ ಅವರ ಇಂಗಿತವನ್ನು ಪಕ್ಷದ ವರಿಷ್ಟರಲ್ಲೊಬ್ಬರಾದ ಜೆ.ಪಿ.ನಡ್ಡಾ ಅವರು ರಾಜ್ಯದ ಹಾಲಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರಿಗೆ ತಿಳಿಸಿದ್ದಾರೆ.
ಮಹಾರಾಷ್ಟ್ರ ಹಾಗೂ ಹರಿಯಾಣ ವಿಧಾನಸಭಾ ಚುನಾವಣೆಯ ನಂತರ ರಾಷ್ಟ್ರ ಮಟ್ಟದಲ್ಲಿ ಬಿಜೆಪಿಯ ಕಾರ್ಯತಂತ್ರ ಬದಲಾಗಬೇಕಿದ್ದು ಅದರ ಭಾಗವಾಗಿ ದೇಶದ ಮೂರು ಅಥವಾ ನಾಲ್ಕು ರಾಜ್ಯಗಳಲ್ಲಿ ದಲಿತರನ್ನು ಸಿಎಂ ಹುದ್ದೆಗೆ ತರಬೇಕು ಎಂದು ಪ್ರಧಾನಿ ನರೇಂದ್ರಮೋದಿ ಬಯಸಿದ್ದಾರೆ.
ಕರ್ನಾಟಕದ ಮುಖ್ಯಮಂತ್ರಿ ಹುದ್ದೆಗೂ ದಲಿತ ನಾಯಕರೊಬ್ಬರನ್ನು ತರಲು ಮೋದಿ ಬಯಸಿದ್ದು ಆ ಮೂಲಕ ಇದೇ ಮೊಟ್ಟ ಮೊದಲ ಬಾರಿ ರಾಜ್ಯ ದಲಿತ ಸಿಎಂ ಅನ್ನು ಕಂಡಂತಾಗುತ್ತದೆ.ಆ ಮೂಲಕ ಕಾಂಗ್ರೆಸ್ ಬೆಚ್ಚಿ ಬೀಳುವಂತಾಗುತ್ತದೆ ಎಂದು ಲೆಕ್ಕ ಹಾಕಿದ್ದಾರೆ.ದೇಶದ ಆಡಳಿತ ಸೂತ್ರವನ್ನು ಬಹುಕಾಲ ಹಿಡಿದಿದ್ದರೂ ದಲಿತರಿಗೆ ಸಿಎಂ ಹುದ್ದೆ ನೀಡುವ ವಿಷಯದಲ್ಲಿ ಕಾಂಗ್ರೆಸ್ ಕೂಡಾ ಮಡಿವಂತಿಕೆ ತೋರಿಸಿದ್ದು ಮಹಾರಾಷ್ಟç ಸೇರಿದಂತೆ ಕೆಲವೆಡೆ ಅದು ದಲಿತರನ್ನು ಸಿಎಂ ಮಾಡಿದ್ದರೂ,ಒಟ್ಟಾರೆಯಾಗಿ ಒಂದೇ ಸಲ ದೇಶದ ರಾಜಕೀಯ ಭೂಪಟವೇ ಅಲುಗಾಡಿಸುವಂತೆ ಆ ಕೆಲಸ ಮಾಡಿಲ್ಲ.
ಹೀಗಾಗಿ ಕರ್ನಾಟಕ ಸೇರಿದಂತೆ ಮೂರು ಅಥವಾ ನಾಲ್ಕು ರಾಜ್ಯಗಳಲ್ಲಿ ದಲಿತರನ್ನು ಸಿಎಂ ಹುದ್ದೆಯ ಮೇಲೆ ತಂದು ಕೂರಿಸೋಣ ಎಂದು ನರೇಂದ್ರಮೋದಿ ಹೇಳಿದ್ದು ಈ ಬೆಳವಣಿಗೆ ರಾಜಕೀಯ ವಲಯಗಳಲ್ಲಿ ಕುತೂಹಲ ಸೃಷ್ಟಿಸಿದೆ.ಇದೇ ಮೂಲಗಳ ಪ್ರಕಾರ ಹಾಲಿ ಸಿಎಂ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಪದಚ್ಯುತಗೊಳಿಸಿ ಯಾವುದಾದರೂ ರಾಜ್ಯದ ರಾಜ್ಯಪಾಲ ಹುದ್ದೆ ನೀಡಲು ಹೈಕಮಾಂಡ್ ಆಫರ್ ನೀಡಲಿದೆ.
ಒಂದು ವೇಳೆ ಯಡಿಯೂರಪ್ಪ ಅವರು ಇದನ್ನು ಒಪ್ಪದಿದ್ದರೆ ಬಲವಂತವಾಗಿಯಾದರೂ ಅವರನ್ನು ಪದಚ್ಯುತಗೊಳಿಸಿ ದಲಿತ ನಾಯಕ ಗೋವಿಂದ ಕಾರಜೋಳ ಅವರನ್ನು ಆ ಹುದ್ದೆಗೆ ತರಲಿದೆ.ಸಧ್ಯಕ್ಕೆ ಸಿಎಂ ಆಗಿರುವ ಯಡಿಯೂರಪ್ಪ ಅವರನ್ನು ಬದಲಿಸಬೇಕೆಂದರೆ ದಲಿತ ನಾಯಕರೊಬ್ಬರನ್ನು ಆ ಜಾಗಕ್ಕೆ ತರಬೇಕು.ಆ ಮೂಲಕ ಯಡಿಯೂರಪ್ಪ ಅವರ ಪದಚ್ಯುತಿಯಿಂದ ಕೆರಳುವ ಲಿಂಗಾಯತ ಸಮುದಾಯದ ಜಾಗಕ್ಕೆ ಒಟ್ಟಾರೆ ದಲಿತ ಸಮುದಾಯ ಬಿಜೆಪಿಯ ಕಡೆ ಬರುವಂತೆ ಮಾಡಬೇಕು.
ಆಗ ಲಿಂಗಾಯತ ಸಮುದಾಯ ಕಾಂಗ್ರೆಸ್ ಕಡೆ ಹೋದರೂ ಜನಸಂಖ್ಯೆಯಲ್ಲಿ ರಾಜ್ಯದ ನಂಬರ್ ಒನ್ ಆಗಿರುವ ಪರಿಶಿಷ್ಟ ಜಾತಿ,ಪಂಗಡಗಳು ಬಿಜೆಪಿಯ ಬೆನ್ನಿಗೆ ನಿಲ್ಲುತ್ತವೆ ಎಂಬುದು ಈ ಮಾಸ್ಟರ್ ಪ್ಲಾನಿನ ಭಾಗ.ನೂರು ದಿನಗಳ ಆಡಳಿತ ನೀಡಿದರೂ ಮುಖ್ಯಮಂತ್ರಿ ಯಡಿಯೂರಪ್ಪ ಗೊಂದಲಗಳ ಮೇಲೆ ಗೊಂದಲ ಸೃಷ್ಟಿಸಿಕೊಳ್ಳುತ್ತಿದ್ದಾರೆ.ಆಡಳಿತ ಯಂತ್ರದಲ್ಲಿ ಅವರ ಕುಟುಂಬದ ಕೆಲ ಸದಸ್ಯರ ಹಸ್ತಕ್ಷೇಪ ಮಿತಿ ಮೀರಿದೆ.ಪದೇ ಪದೇ ಎಚ್ಚರಿಕೆ ನೀಡಿದರೂ ಅದನ್ನು ತಿದ್ದಿಕೊಳ್ಳುವ ಕೆಲಸವಾಗಿಲ್ಲ ಎಂದು ಸಂಘಪರಿವಾರದ ಕೆಲ ನಾಯಕರು ಕೂಡಾ ವರಿಷ್ಟರಿಗೆ ಈಗಾಗಲೇ ದೂರು ನೀಡಿದ್ದಾರೆ ಎಂಬುದು ಮೂಲಗಳ ಹೇಳಿಕೆ.
ಯಡಿಯೂರಪ್ಪ ಅವರನ್ನು ಪದಚ್ಯುತಗೊಳಿಸಿದರೆ ಪ್ರಬಲ ಲಿಂಗಾಯತ ಸಮುದಾಯ ತಿರುಗಿ ಬೀಳಬಹುದು.ಆದರೆ ಜನಸಂಖ್ಯೆಯಲ್ಲಿ ಒಂದೂ ಕಾಲು ಕೋಟಿಯಷ್ಟಿರುವ ಪರಿಶಿಷ್ಟ ಜಾತಿ ಹಾಗೂ ಪಂಗಡದವರು ದಲಿತರೊಬ್ಬರು ಸಿಎಂ ಆದರೆ ಬಿಜೆಪಿಯ ಕಡೆ ನಿಲ್ಲುತ್ತಾರೆ.ಹೀಗಾಗಿ ಹಿಂದ ಸಮುದಾಯಗಳ ಗಣನೀಯ ಮತಗಳನ್ನು ಪಡೆಯಬೇಕು.ಅಗತ್ಯ ಬಿದ್ದರೆ ಜೆಡಿಎಸ್ ಜತೆ ಸಂಬಂಧ ವೃದ್ಧಿಸಿಕೊಂಡು ಒಕ್ಕಲಿಗ ಸಮುದಾಯದ ಬೆಂಬಲ ಜತೆಗೂಡುವಂತೆ ಮಾಡಬೇಕು.
ಈ ದಾರಿ ಹೊರತುಪಡಿಸಿದರೆ ಯಡಿಯೂರಪ್ಪ ಅವರನ್ನು ಪದಚ್ಯುತಗೊಳಿಸಬಹುದು.ಒಂದು ವೇಳೆ ಹಿಂಜರಿದರೆ ಯಥಾ ಪ್ರಕಾರ ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಯಾವ ರೀತಿ ಹೊಡೆತ ತಿನ್ನಬೇಕಾಯಿತೋ?ಹಾಗೆ ಹೊಡೆತ ತಿನ್ನುವ ಸ್ಥಿತಿ ಬರುತ್ತದೆ ಎಂದು ಈ ನಾಯಕರು ವರಿಷ್ಟರಿಗೆ ವಿವರ ನೀಡಿದ್ದಾರೆ.
ಇದನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ ಹೈಕಮಾಂಡ್ ವರಿಷ್ಟರು ಯಡಿಯೂರಪ್ಪ ಅವರನ್ನು ಸಿಎಂ ಹುದ್ದೆಯಿಂದ ಬದಲಿಸಲು ಸ್ಕೆಚ್ ಹಾಕಿದ್ದು ಇದು ಹಂತ ಹಂತವಾಗಿ ಜಾರಿಗೆ ಬರಲಿದೆ ಎಂದು ಮೂಲಗಳು ವಿವರ ನೀಡಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
