ಪಾರಂಪರಿಕ ತಾಣ, ಐತಿಹಾಸಿಕ ಸ್ಮಾರಕ ನಾಶ

ದಾವಣಗೆರೆ:

      ಅಭಿವೃದ್ಧಿಯ ನೆಪದಲ್ಲಿ ಪಾರಂಪರಿಕ ತಾಣಗಳು ಹಾಗೂ ಐತಿಹಾಸಿಕ ಸ್ಮಾರಕಗಳು ನಾಶವಾಗುತ್ತಿವೆ ಎಂದು ಎವಿಕೆ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಬಿ.ಪಿ.ಕುಮಾರ್ ವಿಷಾದ ವ್ಯಕ್ತಪಡಿಸಿದರು.

      ನಗರದ ಮಾ.ಸ.ಬ. ಕಾಲೇಜಿನಲ್ಲಿ ಶನಿವಾರ ಮೈಸೂರಿನ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಹಾಗೂ ಕಾಲೇಜಿನ ಇತಿಹಾಸ ವಿಭಾಗ ಇವುಗಳ ಸಹಯೋಗದಲ್ಲಿ ಏರ್ಪಡಿಸಿದ್ದ ‘ಐತಿಹಾಸಿಕ ಪರಂಪರೆ ಉಳಿಸಿ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅಭಿವೃದ್ಧಿಯ ನೆಪದಲ್ಲಿ ಅದೆಷ್ಟೋ ಪಾರಂಪರಿಕ ತಾಣಗಳು ಹಾಗೂ ಐತಿಹಾಸಿಕ ಸ್ಮಾರಕಗಳು ಕಣ್ಮರೆಯಾಗಿವೆ ಎಂದರು.

       ರಾಜ್ಯದಲ್ಲಿ 36,672 ಕೆರೆಗಳಿದ್ದು, ಇವುಗಳ ಸಂರಕ್ಷಣೆ ಆಗದ ಕಾರಣಕ್ಕೆ ಇಂದು ದುಃಸ್ಥಿತಿ ತಲುಪಿವೆ. ಕೆರೆಗಳಿಗೆ ನೀರು ಹರಿದು ಬರುವ ಮೂಲಗಳು, ನಾಲೆಗಳು ಮುಚ್ಚಿ ಹೋಗುತ್ತಿವೆ. ಇದರಿಂದ ನೀರಿಲ್ಲದೆ ಕೆರೆಗಳೇ ಮುಚ್ಚು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

      ನಮ್ಮ ಸುತ್ತಲಿರುವ ಐತಿಹಾತಿಕ ಸ್ಮಾರಕಗಳು ಹಾಗೂ ಪಾರಂಪರಿಕ ತಾಣಗಳನ್ನು ಉಳಿಸಿಕೊಂಡು ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡಬೇಕಾದ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದರು.

      ಹಿಂದೆ ಅಶೋಕ ಮಹಾರಾಜರು ಸಾಲು ಗಿಡಗಳನ್ನು ನೆಟ್ಟು ನಮಗೆ ಆದರ್ಶರಾಗಿದ್ದರೆ, ಇಂದು ನಾವು ಅಭಿವೃದ್ಧಿ ನೆಪದಲ್ಲಿ ಗಿಡ-ಮರಗಳ ಹನನ ಮಾಡುವ ಮೂಲಕ ಪರಿಸರಕ್ಕೆ ಮಾರಕರಾಗಿದ್ದೇವೆ. ಉತ್ತಮ ಪರಿಸರದ ಕಾರಣಕ್ಕಾಗಿ ಹಿಂದೆ ಆಸ್ಪತ್ರೆಗಳ ಸಂಖ್ಯೆ ಕಡಿಮೆ ಇದ್ದವು. ಆದರೆ, ಪರಿಸರ ಕಲುಷಿತವಾಗಿರುವುದರಿಂದ ಇಂದು ಆಸ್ಪತ್ರೆಗಳಿಗೆ ಹೋಗದೆ ಇರುವವರ ಸಂಖ್ಯೆ ಕಡಿಮೆ ಇದೆ. ಹಿಂದೆ ಹಣ್ಣಿನ ರಸಗಳನ್ನು ಸೇವನೆ ಮಾಡುತ್ತಿದ್ದರು. ಆದರೆ, ಇಂದು ಅದೇ ಮದ್ಯಪಾನವಾಗಿ ಮಾರ್ಪಟ್ಟು ಸಮಾಜಕ್ಕೆ ಒಂದು ಶಾಪವಾಗಿ ಪರಿಣಮಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು.

         ಪರಿಸರ ನಾಶ ಮಾಡಿದಂತೆ, ಪ್ರಕೃತಿಯಲ್ಲಿರುವ ಸಂಪತ್ತು ಸಹ ನಾಶವಾಗುತ್ತಿದೆ. ಇಂದು ಮನುಷ್ಯ ಪ್ರಗತಿ ಸಾಧಿಸುತ್ತಿದ್ದೇನೆಂದು ತಿಳಿದುಕೊಂಡಿದ್ದಾನೆ. ಆದರೆ, ಅಧೋಗತಿಗೆ ತಲುಪಿರುವುದರ ಪರಿವೇ ಇಲ್ಲವಾಗಿದೆ. ಹಿಂದೆ ಪತ್ರದ ಮೂಲಕ ಯೋಗಕ್ಷೇಮ ವಿಚಾರಿಸುತ್ತಿದ್ದರು. ಆದರೆ ಇಂದಿನ ಕಾಲದಲ್ಲಿ ಮೊಬೈಲ್ ಜೀವನವಾಗಿದೆ. ಕಣ್ಮುಂದೆ ಇರುವಂತ ತಂದೆ ತಾಯಿಯರಿಗೆ ಯೋಗ ಕ್ಷೇಮ ವಿಚಾರಿಸುವುದಿಲ್ಲ, ದೂರದಲ್ಲಿರುವಂತವರ ಬಗ್ಗೆ ಯೋಗಕ್ಷೇಮ ವಿಚಾರಿಸುತ್ತೇವೆ ಇಂತಹ ಪರಿಸ್ಥಿತಿ ತಲುಪಿದ್ದೇವೆ. ಮೊಬೈಲ್ ಒಳ್ಳೆಯದಕ್ಕೆ ಬಳಸುವ ಸಂಖ್ಯೆ ಕಡಿಮೆಯಾಗುತ್ತಿದೆ ಎಂದರು.

      ಎಲ್ಲಿ ನೋಡಿದರು ಮೆಡಿಕಲ್ ಶಾಪ್ ಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಆರೋಗ್ಯ ಹದಗೆಟ್ಟಿರುವುದೇ ಕಾರಣವಾಗುತ್ತಿದೆ. ಪ್ರತಿಯೊಬ್ಬರು ಶಾಸನ, ಪರಂಪರೆಯನ್ನು ಅಧ್ಯಯನ ಮಾಡಬೇಕು. ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕಾಗಿದೆ. ಆದರೆ, ಬಹುತೇಕರಿಗೆ ಸಾಮಾನ್ಯ ಜ್ಞಾನವು ಇಲ್ಲವಾಗಿದೆ. ಪ್ರಸ್ತುತ ಆಸ್ತಿಯ ಬೆಲೆ ಏನೋ ಹೆಚ್ಚಾಗುತ್ತಿದೆ. ಆದರೆ, ಜೀವನದ ಮೌಲ್ಯಗಳು ಇಲ್ಲವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

      ಶ್ರೀ ಮಂಜುನಾಥ ಸ್ವಾಮಿ ಪದವಿ ಕಾಲೇಜಿನ ಪ್ರಾಚಾರ್ಯ ಡಾ.ಎಂ.ಎಚ್.ವಿಜಯಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಇಂದು ಪಠ್ಯ ಪುಸ್ತಕದಲ್ಲಿರುವುದನ್ನು ಮಾತ್ರ ಓದುತ್ತಿದ್ದಾರೆ. ನಮ್ಮ ಸುತ್ತಲಿನ ಪದನಾಮ, ಸ್ಥಳನಾಮಗಳನ್ನು ಅಧ್ಯಯನಕ್ಕೆ ಆಸಕ್ತಿ ತೋರುತ್ತಿಲ್ಲ. ಹೀಗಾಗಿ ನಮ್ಮ ಪರಂಪರೆ, ಇತಿಹಾಸದ ಅರಿವು ಇಲ್ಲವಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ಕೇವಲ ಪಠ್ಯದ ಹುಳುಗಳಾಗದೇ, ಪಠ್ಯವನ್ನು ಬಿಟ್ಟು ಇತರೆ ಸಾಹಿತ್ಯವನ್ನು ಅಧ್ಯಯನ ಮಾಡಬೇಕೆಂದು ಸಲಹೆ ನೀಡಿದರು.ಕಾಲೇಜಿನ ಪ್ರಾಂಶುಪಾಲ ಡಾ.ಹನುಮಂತಪ್ಪ ಅಧ್ಯಕ್ಷತೆ ವಹಿಸಿದ್ದು. ಕಾರ್ಯಕ್ರಮದಲ್ಲಿ ಉಪನ್ಯಾಸಕರುಗಳಾದ ಡಾ.ಎಸ್.ಪರಮೇಶಿ, ರಾಘವೇಂದ್ರ, ವಿರೂಪಾಕ್ಷಪ್ಪ ಮತ್ತಿತರರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link