ಶಿರಾ ನಗರದ ಜನತೆಗೆ ಕುಡಿಯಲು ನೀರು ಪೂರೈಸುವ ದೊಡ್ಡ ಕೆರೆಯ ಜಲ ಸಂಗ್ರಹಾಗಾರದ ಹೇಮಾವತಿಯ ನೀರು ಇನ್ನೇನು 20 ದಿನದೊಳಗೆ ಖಾಲಿಯಾಗಲಿದೆ. ಈವರೆಗೆ ನೀರಿನ ಸಮಸ್ಯೆ ಇಲ್ಲದೆ 8-10 ದಿನಗಳಿಗೆಲ್ಲಾ ನೀರಿನ ರುಚಿ ನೋಡುತ್ತಿದ್ದ ಜನತೆಗೆ ಇನ್ನೇನು ಕೆಲವೇ ದಿನಗಳಲ್ಲಿ ನೀರಿನ ಭೀಕರ ಸಮಸ್ಯೆ ಎದುರಾಗಲಿದೆ.
ಕೆರೆಯಲ್ಲಿ ಹೇಮಾವತಿಯ ನೀರಿದ್ದಾಗ ಸದರಿ ನೀರನ್ನು ಹಿತ-ಮಿತವಾಗಿ ಬಳಸುವ ಮುಂಜಾಗ್ರತಾ ಕ್ರಮಗಳನ್ನು ನಗರಸಭೆ ಕೈಗೊಳ್ಳದ ಪರಿಣಾಮ ಮುಂದಿನ 2 ತಿಂಗಳವರೆಗೂ ಅನುಸರಿಸಬಹುದಿದ್ದ ಕೆರೆಯ ನೀರು ಇನ್ನು ಕೆಲ ದಿನಗಳಲ್ಲಿಯೇ ಸಂಪೂರ್ಣ ಖಾಲಿಯಾಗಲಿದೆ.
ಇದೀಗ ಎರಡನೆಯ ಹಂತದಲ್ಲಿ ಶಿರಾ ಹಾಗೂ ಕಳ್ಳಂಬೆಳ್ಳ ಕೆರೆಗೆ ಮಾನವೀಯತೆಯ ದೃಷ್ಟಿಯಿಂದ ಹೇಮಾವತಿ ನೀರನ್ನು ಹರಿಸುವ ಕೆಲಸವನ್ನು ಜಿಲ್ಲಾಡಳಿತ ಮಾಡಬೇಕಿದ್ದು, ಈಗಾಗಲೇ ಸಂಪೂರ್ಣವಾಗಿ ಖಾಲಿಯಾದ ಕಳ್ಳಂಬೆಳ್ಳ ಕೆರೆಗಾದರೂ ಹೇಮಾವತಿ ನೀರು ತಲುಪಬಲ್ಲದೇ ಎಂಬ ಅನುಮಾನವೂ ಇದೆ.
ಜಿಲ್ಲಾ ಸಚಿವರೇ ಹೇಳಿರುವಂತೆ 13-6-2020 ರಿಂದ 24-6-2020ರವರೆಗೆ ಅಂದರೆ 12 ದಿನಗಳವರೆಗೆ 900 ಎಂ.ಸಿ.ಎಫ್.ಟಿ. ಹೇಮಾವತಿ ನೀರನ್ನು ಶಿರಾ ಕೆರೆಗೆ ಹರಿಸಲಾಗುವುದು ಎಂದಿದ್ದಾರೆ. ಈ ನಡುವೆ ಕಳ್ಳಂಬೆಳ್ಳ ಕೆರೆಯಲ್ಲಿ ಒಂದು ಹನಿ ನೀರೂ ಕೂಡ ಇಲ್ಲವಾಗಿದ್ದು, ಸದರಿ ಕೆರೆಗೆ ನೀರು ಹರಿದ ನಂತರವೆ ಶಿರಾ ಕೆರೆಗೆ ಹರಿಸಿಕೊಳ್ಳಬೇಕಾದ್ದರಿಂದ ಎರಡನೇ ಹಂತದಲ್ಲಿ ಶಿರಾ ಕೆರೆಗೆ ನೀರು ಹರಿಯುವುದೇ ಎಂಬ ಆತಂಕವೂ ಜನರಲ್ಲಿದೆ.
ಇಂತಹ ಸಂದಿಗ್ಧತೆಯ ನಡುವೆಯೂ ಶಿರಾ ನಗರದ ಅಂತರ್ಜಲವನ್ನು ವೃದ್ಧಿಸುವ ಜಾಜಮ್ಮನಕಟ್ಟೆಯ ಅಭಿವೃದ್ಧಿ ಕೆಲಸ ನಡೆದಿದೆ. ಆದರೂ ಕೂಸು ಹುಟ್ಟುವ ಮುನ್ನ ಕುಲಾವಿ ಹೊಲಿಸಿದರು ಎಂಬಂತೆ ಲಕ್ಷ ಲಕ್ಷ ಹಣ ಖರ್ಚು ಮಾಡಿ ಕಾಮಗಾರಿ ಕೈಗೊಂಡಿದ್ದರೂ, ಮಳೆ ಬಂದರೂ ಕೂಡ ಜಾಜಮ್ಮನಕಟ್ಟೆ ತುಂಬುವುದೇ ಕಷ್ಟ ಅನ್ನುವಂತಾಗಿದೆ.
ಶಿರಾ ನಗರದ ಜನತೆಗೆ ಜಾಜಮ್ಮನಕಟ್ಟೆ ಅಂತರ್ಜಲ ವೃದ್ಧಿಸುವ ತಾಯಿ ಜೇನು ಇದ್ದಂತೆ. ನಗರದ ಹೃದಯ ಭಾಗದಲ್ಲಿಯೇ ಇರುವ ಈ ಕಟ್ಟೆಯಲ್ಲಿ ಮಳೆಯ ನೀರು ನಿಂತರೆ ಇಡೀ ನಗರದ ಸಾರ್ವಜನಿಕರ ಮನೆಗಳಲ್ಲಿನ ಎಲ್ಲಾ ಕೊಳವೆ ಬಾವಿಗಳ ಅಂತರ್ಜಲ ಹೆಚ್ಚುತ್ತದೆ. ಇದು ಸತ್ಯವೂ ಕೂಡ. ಇಂದು ಬಹುತೇಕ ಮನೆಗಳ ಹಾಗೂ ನಗರಸಭಾ ವ್ಯಾಪ್ತಿಯ ಕೊಳವೆ ಬಾವಿಗಳಲ್ಲಿ ನೀರು ಬತ್ತಿದೆ ಎಂದರೆ ಅದಕ್ಕೆ ಜಾಜಮ್ಮನಕಟ್ಟೆಯಲ್ಲಿ ನೀರಿಲ್ಲದ್ದೆ ಪ್ರಮುಖ ಕಾರಣವೂ ಹೌದು.
ಕ್ಷೇತ್ರದ ಶಾಸಕರು ಸದರಿ ಕಟ್ಟೆಯ ಅಭಿವೃದ್ಧಿಗೆ ವಿಶೇಷ ಒತ್ತು ನೀಡಿದ್ದು ಕೆರೆಯ ಏರಿ ಭದ್ರಪಡಿಸುವ, ಏರಿಯ ಮೇಲೆ ನೆಲಹಾಸು ಹಾಕುವ ಹಾಗೂ ಇನ್ನಿತರ ಕಾಮಗಾರಿಗಳ ಕೆಲಸ ನಡೆದಿದೆ. ಇಷ್ಟೆಲ್ಲಾ ಖರ್ಚು ಮಾಡಿದರೂ ಕೆರೆಯೊಳಗೆ ಮಳೆಯ ನೀರು ಬಾರದಿದ್ದರೆ ಪ್ರಯೋಜನವೇ ಇಲ್ಲದಂತಾಗುತ್ತದೆ.
ಜಾಜಮ್ಮನಕಟ್ಟೆಗೆ ಹೊಂದಿಕೊಂಡಂತೆ ಬಾಲಾಜಿ ನಗರ ಹಾಗೂ ವಿದ್ಯಾ ನಗರ ಬಡಾವಣೆಗಳಿದ್ದು ಕೊಳದಪ್ಪಲೇಶ್ವರಸ್ವಾಮಿ ದೇವಸ್ಥಾನದ ಸಮೀಪದ ಹೆದ್ದಾರಿ ಮೂಲಕ ವಿದ್ಯಾನಗರದೊಳಗಿನಿಂದ ಈ ಹಿಂದೆ ಹಾದು ಬರುತ್ತಿದ್ದ ರಾಜಕಾಲುವೆ ಇದೀಗ ಸಂಪೂರ್ಣ ಮುಚ್ಚಿ ಹೋಗಿದೆ. ಸದರಿ ರಾಜಕಾಲುವೆ ಒತ್ತುವರಿಯಾಗದೆ ಉಳಿದಿದ್ದಾಗ. ಸಣ್ಣದೊಂದು ಮಳೆ ಬಂದರೂ ಸಾಕು ಮಳೆಯ ನೀರು ಜಾಜಮ್ಮನ ಕಟ್ಟೆಯನ್ನು ಸೇರಿ ಕಟ್ಟೆ ತುಂಬಿ ತುಳುಕುತ್ತಿತ್ತು. ಇದೀಗ ಈ ಕಟ್ಟೆಗೆ ಒಂದು ಹನಿ ನೀರೂ ಕೂಡ ಬಾರದಂತಾಗಿದೆ. ಕಳೆದ ನಾಲ್ಕು ವರ್ಷಗಳ ಹಿಂದೆ ಜಾಜಮ್ಮನಕಟ್ಟೆಯ ರಾಜಕಾಲುವೆಯನ್ನು ತೆರೆಯುವ ಕೆಲಸವನ್ನು ನಗರಸಭೆ ಕೈಗೊಂಡಾಗ ಸಾಕಷ್ಟು ಅಡಚಣೆಗಳೂ ಸಂಭವಿಸಿದವು. ಒತ್ತುವರಿ ಮಾಡಿದವರೂ ಕೂಡ ರಾಜಕೀಯ ಮೇಲಾಟ ನಡೆಸಿದಾಗ ನಿಯಮಾನುಸಾರ ಕಾಲುವೆಯನ್ನು ಅಗಲೀಕರಣಗೊಳಿಸುವ ಕೆಲಸ ಆಗಲೆ ಇಲ್ಲ.
ಈ ನಡುವೆ ಇದೇ ನಗರಸಭೆ ತನ್ನ ಅನುದಾನದಲ್ಲಿ ಮನಸೋ ಇಚ್ಛೆ ಕಾಲುವೆ ಕಾಮಗಾರಿ ಕೈಗೊಂಡಾಗ ನಗರಸಭೆಯ ನಿಯಮಗಳನ್ನೇ ಗಾಳಿಗೆ ತೂರಲಾಯಿತು. ಒತ್ತುವರಿಯಾದ ಮನೆಗಳನ್ನು ಕೈ ಬಿಟ್ಟು ಕಾಟಾಚಾರಕ್ಕೆ ಕಾಲುವೆಯ ಕಾಮಗಾರಿ ಮಾಡಲಾಯಿತು. ಈ ಕಾರಣದಿಂದಾಗಿ ಕಳಪೆ ಗುಣಮಟ್ಟದ ಕಾಮಗಾರಿ, ಅದರ ಜೊತೆಗೆ ನೀರು ಬಸಿಯುವಂತೆ ಕಾಮಗಾರಿ ಕೈಗೊಳ್ಳದ ಪರಿಣಾಮ ಒಂದು ಹನಿ ನೀರೂ ಕೂಡ ಕಾಲುವೆಯಿಂದ ಜಾಜಮ್ಮನಕಟ್ಟೆಯನ್ನು ಸೇರದಂತಾಯಿತು.
ಇದೆಲ್ಲಕ್ಕೂ ಮಿಗಿಲಾಗಿ ಕೊಳದಪ್ಪಲೇಶ್ವರಸ್ವಾಮಿ ದೇವಾಲಯದ ಸಮೀಪದಲ್ಲಿ ಬೈಪಾಸ್ ಮೂಲಕ ಬರುತ್ತಿದ್ದ ರಾಜಕಾಲುವೆಯನ್ನೇ ಕಳೆದ ನಾಲ್ಕು ವರ್ಷಗಳ ಹಿಂದೆ ಸಂಪೂರ್ಣವಾಗಿ ಮುಚ್ಚಿ ಹಾಕಲಾಗಿದ್ದು, ಮಳೆಯ ನೀರು ಬರುವ ತಾಣವನ್ನೇ ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಸದರಿ ರಾಜಕಾಲುವೆಯ ಮುಖ್ಯ ದ್ವಾರವನ್ನು ತೆರವುಗೊಳಿಸದ ನಗರಸಭೆಯ ನಿರ್ಲಕ್ಷ್ಯದಿಂದಾಗಿ ಜಾಜಮ್ಮನಕಟ್ಟೆ ಒಣಗಿ ಬಿರುಕು ಬಿಟ್ಟಿದ್ದು ನಗರದ ಜನತೆಯ ಹಿಡಿ ಶಾಪಕ್ಕೆ ನಗರಸಭೆ ತುತ್ತಾಗಿದೆ.
ಅದರಲ್ಲೂ ಬಾಲಾಜಿ ನಗರ, ಕೇಶವ ನಗರ ಹಾಗೂ ವಿದ್ಯಾ ನಗರ ಬಡಾವಣೆಗಳನ್ನಂತೂ ನಗರಸಭೆ ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ ಎಂಬ ಆರೋಪಗಳು ಸಾರ್ವಜನಿಕರಿಂದ ವ್ಯಕ್ತಗೊಳ್ಳತೊಡಗಿದೆ. ಈ ಮೂರೂ ಬಡಾವಣೆಗಳಲ್ಲಿರುವ ಬಹುತೇಕ ಮಂದಿ ಸರ್ಕಾರಿ ನೌಕರರರೆ ಆಗಿದ್ದಾರೆ. ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲಾಗದೆ ಈ ಸರ್ಕಾರಿ ನೌಕರರು ಕೈ ಕೈ ಇಸುಕಿಕೊಳ್ಳುವಂತಾಗಿದೆ. ಈ ಮೂರೂ ಬಡಾವಣೆಗಳಿಗೆ ನಗರಸಭೆಯ ಸಿಬ್ಬಂದಿ ಕನಿಷ್ಠ ಪಕ್ಷ ಕಸವನ್ನು ತೆರವುಗೊಳಿಸಲು ಕೂಡಾ ಬರುತ್ತಿಲ್ಲವೆಂಬ ಆರೋಪ ಇಲ್ಲಿನ ಜನರದ್ದು. ಕೆಲವೇ ಕೆಲವು ರಸ್ತೆಗಳು ಡಾಂಬರ್ ಕಂಡಿರುವುದನ್ನು
ಬಿಟ್ಟರೆ ಈ ಬಡಾವಣೆಯ ಬಹುತೇಕ ರಸ್ತೆಗಳು ಕನಿಷ್ಟ ಪಕ್ಷ ಸಿ.ಸಿ. ರಸ್ತೆಯನ್ನೂ ಕಂಡಿಲ್ಲ. ಕೇವಲ ಈ ಮೂರು ಬಡಾವಣೆಗಳಷ್ಟೇ ಅಲ್ಲದೆ ಜ್ಯೋತಿ ನಗರ, ಸಪ್ತಗಿರಿ ಬಡಾವಣೆ ಸೇರಿದಂತೆ ನಗರ ವ್ಯಾಪ್ತಿಯ ಬಹುತೇಕ ರಸ್ತೆ ಕಾಮಗಾರಿಗಳು ನೆನೆಗುದಿಗೆ ಬಿದ್ದಿವೆ.ವಿದ್ಯಾನಗರದ ಬಡಾವಣೆಯಲ್ಲಿನ ಬಹುತೇಕ ಚರಂಡಿಯ ಡೆಕ್ಸ್ಲ್ಯಾಬ್ಗಳು ಕಳಚಿ ಬೀಳುವಂತಿದ್ದು ಕಳಪೆ ಕಾಮಗಾರಿಯಿಂದ ಡೆಕ್ಸ್ಲ್ಯಾಬ್ಗಳ ಕಬ್ಬಿಣದ ಸರಳುಗಳು ಕೂಡಾ ಹೊರ ಬಂದು ಸಾವು-ನೋವುಗಳಾಗುತ್ತಿದ್ದರೂ ಇಲ್ಲಿನ ನಗರಸಭೆ ಮಾತ್ರಾ ಕಣ್ಮುಚ್ಚಿ ಕೂತಿದೆ.
ನಗರದ ವಿವಿಧ ಬಡಾವಣೆಗಳ ಬೆಟ್ಟದಷ್ಟು ಸಮಸ್ಯೆಗಳಿಗೆ ನಗರಸಭೆ ಸ್ಪಂಧಿಸದೇ ಇದ್ದಲ್ಲಿ ಜನತೆ ಪ್ರತಿಭಟನೆಗೂ ಮುಂದಾಗುವುದರಲ್ಲಿ ಅಚ್ಚರಿಯೇನೂ ಇಲ್ಲ.ಇನ್ನೇನು ಮಳೆಗಾಲ ಆರಂಭಗೊಂಡಿದೆ. ನಗರದ ಕೊಳವೆ ಬಾವಿಗಳ ಅಂತರ್ಜಲ ವೃದ್ಧಿಸುವ ಜಾಜಮ್ಮನಕಟ್ಟೆಯ ರಾಜಕಾಲುವೆಯನ್ನು ಕ್ಷೇತ್ರದ ಶಾಸಕರು ಈ ಕೂಡಲೇ ತೆರವುಗೊಳಿಸುವ ಕೆಲಸ ಮಾಡಬೇಕಿದೆ. ರಾಜಕಾಲುವೆಯನ್ನು ತೆರೆಸಿ ಮಳೆಯ ನೀರು ಬರುವಂತೆ ಮಾಡದಿದ್ದಲ್ಲಿ ಸದರಿ ಕಟ್ಟೆಯ ಅಭಿವೃದ್ಧಿಗೆ ಲಕ್ಷ ಲಕ್ಷ ರೂಪಾಯಿಗಳನ್ನು ಸುರಿದು ಅಭಿವೃದ್ಧಿಗೊಳಿಸಿದರೂ ಪ್ರಯೋಜನವಿಲ್ಲದಂತಾಗುತ್ತದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
