ದಾವಣಗೆರೆ:
ಸಮೀಪದ ಹಳೇ ಕುಂದುವಾಡದಲ್ಲಿ ದಿನದ 24 ಗಂಟೆ ನೀರು ಪೂರೈಸುವ ಜಲಸಿರಿ ಯೋಜನೆಯ ಕಾಮಗಾರಿಗೆ ಪಾಲಿಕೆ ಸದಸ್ಯ ಹೆಚ್ ತಿಪ್ಪಣ್ಣ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹೆಚ್.ತಿಪ್ಪಣ್ಣ, ಜಲಸಿರಿ ಅನುಷ್ಠಾನದ ಬಳಿಕ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ. ಈಗ ಪೈಪ್ ಲೈನ್ ಅಳವಡಿಕೆಗೆ ಚಾಲನೆ ನೀಡಲಾಗಿದ್ದು, ಓವರ್ ಹೆಡ್ ಟ್ಯಾಂಕ್ ಮೂಲಕ ಪ್ರತಿ ಮನೆಗಳಿಗೆ ನೀರು ಪೂರೈಕೆಯಾಗಲಿದೆ. ಇದಕ್ಕೆ ಮೀಟರ್ ಅಳವಡಿಕೆ ಮಾಡಲಾಗುತ್ತದೆ. ಆ ಮೀಟರ್ ಮೂಲಕ ಸಾರ್ವಜನಿಕರು ಬಳಸುವ ನೀರಿನ ಆಧಾರದ ಮೇಲೆ ಬಿಲ್ ಬರಲಿದೆ ಎಂದರು.
ಗ್ರಾಮದ ಮುಖಂಡ ಹಂಚಿನಮನೆ ಮಂಜಪ್ಪ ಮಾತನಾಡಿ, ಈ ಹಿಂದೆ ಕುಡಿಯುವ ನೀರಿನ ಸಮಸ್ಯೆ ತಲೆದೋರುತ್ತಿತ್ತು. ಇದನ್ನು ಗಮನಿಸಿದ್ದ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಸಚಿವರಾಗಿದ್ದ ಸಂದರ್ಭದಲ್ಲಿ ಜಲಸಿರಿ ಯೋಜನೆ ಜಾರಿಗೆ ತರುವ ಮೂಲಕ ನೀರಿನ ಸಮಸ್ಯೆಗೆ ಪರಿಹಾರ ಕಂಡುಹಿಡಿದಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡ ಹೆಚ್.ಜಿ.ದೊಡ್ಡಪ್ಪ, ಮಿಟ್ಲಕಟ್ಟೆ ಚಂದ್ರಪ್ಪ, ಜೆ ಮಾರುತಿ, ಷಣ್ಮುಖಪ್ಪ, ಮಂಜುನಾಥ್, ನಿಂಗಪ್ಪ, ಪ್ರಕಾಶ್, ಮಾಲತೇಶ್, ರಾಜೂ ಕರೂರು, ಮಧುನಾಗರಾಜ್, ಪ್ರಭು, ಸುಯೋಜ್ ಕಂಪನಿಯ ನರಸಿಂಹಮೂರ್ತಿ, ಸೋಮಶೇಖರ್ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
