ಶಿರಾ: ಕೇಂದ್ರ ಸರ್ಕಾರವು ಜಾರಿಗೆ ತರಲು ಹೊರಟಿರುವ ಪೌರತ್ವ ಕಾಯಿದೆಯನ್ನು ಜಾರಿಗೆ ತರಕೂಡದು ಎಂದು ಒತ್ತಾಯಿಸಿ ಶಿರಾ ನಗರದ ಜಾಮೀಯ ಮಸೀದ್(ವಕ್ಫ್) ಹಾಗೂ ಅಲ್ಪಸಂಖ್ಯಾತ ಸಮುದಾಯದ ಅನೇಕ ಮುಖಂಡರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಶಿರಾ ನಗರದ ಮಲ್ಲಿಕ್ ರೆಹಾನ್ ಧರ್ಗಾ ವೃತ್ತದಲ್ಲಿ ಬೆಳಿಗ್ಗೆ 10.30ಕ್ಕೆ ಆರಂಭಗೊಂಡ ಪ್ರತಿಭಟನೆಯು ಮಧ್ಯಾನ್ಹ 12.30ರವರೆಗೂ ನಡೆಸಲಾಯಿತು. ಪ್ರಗತಿ ಪರ ಚಿಂತಕ ಕೆ.ದೊರೈರಾಜ್ ಮಾತನಾಡಿ ಇಡೀ ದೇಶದಲ್ಲಿ ಹಿಂದೂ ಮತ್ತು ಮುಸ್ಲೀಂ ಬಾಂಧವರು ಯಾವುದೇ ಜಾತಿ ತಾರತಮ್ಯವಿಲ್ಲದೆ ಅಣ್ಣ-ತಮ್ಮಂದಿರಂತೆ ಬದುಕುತ್ತಿದ್ದೇವೆ. ದೇಶವನ್ನು ಚಿದ್ರ ಮಾಡಿ ವೈಷಮ್ಯಗಳನ್ನು ಬಿತ್ತುವಂತಹ ಕೇಂದ್ರ ಸರ್ಕಾರದ ಈ ಪೌರತ್ವ ಕಾಯಿದೆ ಅಸ್ತಿತ್ವಕ್ಕೆ ತಂದಲ್ಲಿ ವ್ಯಾಪಕ ಪ್ರತಿಭಟನೆಗಳು ಮತ್ತಷ್ಟು ನಡೆಯಲಿವೆ ಎಂದು ಎಚ್ಚರಿಸಿದರು.
ತುಮಕೂರು ಮಹಾನಗರ ಪಾಲಿಕೆಯ ಸದಸ್ಯರಾದ ಫರೀದಾಬೇಗಂ ಮಾತನಾಡಿ ಪೌರತ್ವ ಕಾಯಿದೆಯ ಸಂಬಂಧ ಇಡಿ ದೇಶವೆ ವಿರೋಧವಾಗಿ ಪ್ರತಿಭಟಿಸುತ್ತಿದ್ದರೂ ಕೇಂದ್ರ ಸರ್ಕಾರ ಮಸೂದೆ ಜಾರಿಗೆ ಕ್ರಮ ಕೈಗೊಳ್ಳುತ್ತಿರುವುದು ದೇಶದ ದೊಡ್ಡ ದುರಂತವಾಗಿದೆ. ಶಾಂತಿ ಹಾಗೂ ನೆಮ್ಮದಿಯಿಂದ ಇದ್ದ ದೇಶದಲ್ಲಿ ಕೋಮು ಭಾವನೆಗಳನ್ನು ಕೆರಳಿಸುವಂತಹ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದರು.
ಆರ್.ನಾಗರಾಜು ಮಾತನಾಡಿ ಪೌರತ್ವ ಕಾಯಿದೆಯ ಬಗ್ಗೆ ಯಾರಲ್ಲೂ ಲವಿಲ್ಲದೇ ಇದ್ದಾಗ ಇಂತಹ ಕಾಯಿದೆಯನ್ನು ಜಾರಿಗೊಳಿಸಲು ಹೊರಟಿರುವುದು ಕೇಂದ್ರ ಸರ್ಕಾರದ ಏಕಮುಖ ನಿರ್ಧಾರವೇ ಆಗಿದೆ. ರಾಜ್ಯದಲ್ಲಿ ಕೋಮುಭಾವನೆಗೆ ಅವಕಾಶ ನೀಡುವಂತಹ ಕಾಯಿದೆ ನಮಗೆ ಅಗತ್ಯವಿಲ್ಲ ಎಂದರು.
ಜಾಮೀಯ ಮಸೀದ್ನ ಅಧ್ಯಕ್ಷ ಅಲ್ ಹಜ್ ಚಾಂದ್ಪಾಷಾ, ಸಮಾಜ ಸೇವಕ ರವಿಕುಮಾರ್ ಕಲ್ಕೆರೆ, ಅಲ್ಲಾಭಕಾಸ್ ಕೆ.ಪ್ಯಾರು, ನಗರಸಭೆಯ ಮಾಜಿ ಅಧ್ಯಕ್ಷ ಅಮಾನುಲ್ಲಾಖಾನ್, ರಾಜ್ಯ ಕೆ.ಪಿ.ಸಿ.ಸಿ. ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ಅಬ್ದುಲ್ಲಾಖಾನ್, ನಗರಸಭೆಯ ಮಾಜಿ ಸದಸ್ಯರಾದ ಏಜಾಜ್ಬೇಗ್, ಹಬೀಬ್ಖಾನ್, ಅಬ್ದುಲ್ ಖಾದಿರ್, ಇಸ್ಮಾಯಿಲ್ ಬೇಗ್, ಎಕ್ಬಾಲ್, ಜಾಫರ್, ಡಿ.ಎಸ್.ಎಸ್. ಸಂಚಾಲಕ ಲಕ್ಷ್ಮೀಕಾಂತ್, ಮುಖಂಡರಾದ ಫಯಾಜ್ಸಾಬ್, ನೂರುದ್ಧೀನ್ ಸೇರಿದಂತೆ ಅನೇಕ ಪ್ರಮುಖರು ಹಾಜರಿದ್ದರು.
![](https://prajapragathi.com/wp-content/uploads/2019/12/sira-photo-number-127.gif)