ಚಿತ್ರದುರ್ಗ;
ಕಲೆ, ಸಂಗೀತ ಮತ್ತು ಕ್ರೀಡೆಗೆ ಜಾತಿ ಮತ ಪಂಥವಿಲ್ಲವೆಂದು ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಹೇಳಿದರು.
ಮುರುಘಾಮಠದಲ್ಲಿ ಶರಣ ಸಂಸ್ಕತಿ ಅಂಗವಾಗಿ ಆಯೋಜಿಸಲಾಗಿದ್ದ ಜಮುರಾ ಕಪ್ ಸಮಾರೋಪ ಸಮಾರಂಭದದಲ್ಲಿ ಭಾಗವಹಿಸಿ ಅವರು ಮಾತನಾಡಿದರು
ಕ್ರೀಡೆ ಬದುಕಿನ ಅವಿಭಾಜ್ಯ ಅಂಗವಾಗಬೇಕು. ಕ್ರೀಡೆ ಸಮಾಜದ ಅಂಕುಡೊಂಕು ತಿದ್ದಿ ಮಕ್ಕಳ ಭವಿಷ್ಯವನ್ನು ನಿರೂಪಿಸುವಲ್ಲಿ ಸಹಾಯಕವಾಗುತ್ತದೆ. ಮುರುಘಾಶರಣರು ಮೌಢ್ಯ ನಿವಾರಣೆಗೆ, ವೈಜ್ಞಾನಿಕತೆಗೆ , ಕ್ರೀಡೆಗಳಿಗೆ ಹೆಚ್ಚಿನ ಮಾನ್ಯತೆ ನೀಡಿದ್ದಾರೆ. ಸಬ್ ಸಾತ್ ಸಬ್ ಕ ವಿಕಾಸ್ ಮೋದಿ ಮಂತ್ರವಾದರೆ, ಮುರುಘಾಶರಣರು ಅದನ್ನು ಕಾರ್ಯರೂಪಕ್ಕೆ ತಂದಿದ್ದಾರೆ. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಶರಣರು ಪ್ರತಿನಿಧಿಸಿದ ಕ್ಷೇತ್ರವಿಲ್ಲ ಎಂದು ಅವರು ಬಣ್ಣಿಸಿದರು.
ರಾಜಕೀಯದಿಂದ ಕ್ರೀಡೆಯನ್ನು ದೂರವಿಡಬೇಕು. ಚೀನಾದಂತಹ ರಾಷ್ಟ್ರಗಳಲ್ಲಿ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದಾರೆ. ಆದರೆ ನಮ್ಮ ದೇಶದಲ್ಲಿ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹವನ್ನು ನೀಡುತ್ತಿಲ್ಲ. ತ್ರಿವಿಧ ದಾಸೋಹಗಳಾದ ಅನ್ನ, ಅಕ್ಷರ, ಆರೋಗ್ಯ ಹಾಗು ಸಮಾಜದ ನವನಿರ್ಮಾಣಕ್ಕಾಗಿ ಶರಣರು ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.
ಸಮಾರಂಭದ ಸಮ್ಮುಖ ವಹಿಸಿ ಮಾತನಾಡಿದ ಹಿರಿಯೂರಿನ ಆದಿಜಾಂಬವ ಗುರುಪೀಠದ ಶ್ರೀ.ಷಡಾಕ್ಷರಿ ಮುನಿಸ್ವಾಮಿಗಳು, ಕ್ರೀಡಾಪಟುಗಳು ತಮ್ಮ ಸಾಮಥ್ರ್ಯ ಮತ್ತು ದಕ್ಷತೆ ಪ್ರದರ್ಶಿಸಲು ಕ್ರೀಡಾಕೂಟ ಒಂದು ಸೂಕ್ತ ವೇದಿಕೆ. ಮುರುಘಾಶರಣರು ಸರ್ಕಾರದ ಯಾವುದೇ ಅನುದಾನವಿಲ್ಲದೆ ಕ್ರೀಡಾಕೂಟವನ್ನು ಆಯೋಜಿಸುತ್ತಿದ್ದಾರೆ. ಇಂತಹ ಉತ್ತಮ ಕಾರ್ಯಕ್ಕೆ ಸರ್ಕಾರವು ಅನುದಾನ ನೀಡಬೇಕು ಮತ್ತು ಸಾರ್ವಜನಿಕರು ಪೂರಕವಾಗಿ ಸ್ಪಂದಿಸಬೇಕು ಎಂದು ನುಡಿದರು.
ಮಹಿಳಾ ಕ್ರೀಡಾಕೂಟದಲ್ಲಿ 18-30 ವರ್ಷ ವಯೋಮಾನದ ವಿಭಾಗದಲ್ಲಿ ಲಕ್ಷ್ಮೀ.ಎಂ. ಶರಣೆ ಅಕ್ಕನಾಗಮ್ಮ ಕ್ರೀಡಾಪಟು ಪ್ರಶಸ್ತಿ, 30-50ವರ್ಷ ವಯೋಮಾನದ ವಿಭಾಗದಲ್ಲಿ ಶರಣೆ ಒನಕೆ ಒಬವ್ವ ಪ್ರಶಸ್ತಿಯನ್ನು ಶಿಲ್ಪಾ.ಕೆ.ಆರ್ ಪಡೆದರೆ, 50ವರ್ಷ ಮೇಲ್ಪಟ್ಟ ವಿಭಾಗದಲ್ಲಿ ಲೀಲಾವತಿ.ಜಿ.ಕೆ. ಶರಣೆ ಅಕ್ಕಮಹಾದೇವಿ ಪ್ರಶಸ್ತಿಯನ್ನು ಪಡೆದರು.
ಈ ಸಂಧರ್ಭದಲ್ಲಿ ಕಾರ್ಯಕ್ರಮದಲ್ಲಿ ಶರಣ ಸಂಸ್ಕತಿ ಉತ್ಸವ 2018ರ ಗೌರಾವಧ್ಯಕ್ಷರಾದ ಮಧುರೆ ಹೊಸದುರ್ಗದ ಶ್ರೀಭಗೀರಥ ಪೀಠದ ಜ.ಶ್ರೀ.ಪುರುಷೋತ್ತಮನಂದಪುರಿ ಮಹಾಸ್ವಾಮಿಗಳು, ಚನ್ನಗಿರಿ ಹಾಲಸ್ವಾಮಿ ವಿರಕ್ತಮಠದ ಶ್ರೀ.ಮ.ನಿ.ಪ್ರ.ಜಯದೇವ ಸ್ವಾಮಿಗಳು, ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯಸ್ವಾಮಿಗಳು, ಹರಚರಗುರುಮೂರ್ತಿಗಳು, ಕಾಂಗ್ರೆಸ್ ಮುಖಂಡ ಹನುಮಲಿ ಷಣ್ಮುಖಪ್ಪ, ಕರ್ನಾಟಕ ವಾಲಿಬಾಲ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಕೆ.ನಂದಕುಮಾರ್, ಉತ್ಸವ ಸಮಿತಿ ಕಾರ್ಯಧ್ಯಕ್ಷರಾದ ಪಟೇಲ್ ಶಿವಕುಮಾರ್, ಆಡಳಿತ ಮಂಡಳಿ ಸದಸ್ಯರುಗಳಾದ ಶ್ರೀಮತಿ.ಗಾಯತ್ರಿ ಶಿವರಾಂ, ರುದ್ರಾಣಿ ಗಂಗಾಧರ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಜಮುರಾ ಕಲಾವಿದರಿಂದ ಪ್ರಾರ್ಥನೆ, ಕೆ.ಎನ್.ವಿಶ್ವನಾಥ್ ಸ್ವಾಗತಿಸಿ, ಆಕಾಶವಾಣಿಯ ಮಧುಸೂದನ್ ನಿರೂಪಿಸಿ ವಂದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
