ಬೆಂಗಳೂರು
ಜಯನಗರ ವಿಧಾನಸಭಾ ಕ್ಷೇತ್ರದ ಭೈರಸಂದ್ರ ವಾರ್ಡ್ನಲ್ಲಿ ನಿರ್ಮಾಣವಾಗುತ್ತಿರುವ ಜಾಗತಿಕ ಮಟ್ಟದ “ಜಯನಗರ ಈಜು ಕೊಳ” ಬರುವ ಫೆಬ್ರವರಿ ಮೊದಲ ವಾರದ ವೇಳೆಗೆ ಉದ್ಘಾಟನೆಗೆ ಸಿದ್ಧಪಡಿಸುವಂತೆ ಕಾಂಗ್ರೆಸ್ ಶಾಸಕರಾದ ಪಿ. ಸೌಮ್ಯ ರೆಡ್ಡಿ ಇಂದಿಲ್ಲಿ ಗುತ್ತಿಗೆದಾರರಿಗೆ ನಿರ್ದೇಶನ ನೀಡಿದ್ದಾರೆ.
ಈಜುಕೊಳ ಕಾಮಗಾರಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸೌಮ್ಯ ರೆಡ್ಡಿ, ಈ ಬಾರಿಯ ಬೇಸಿಗೆ ವೇಳೆಗೆ ಮಕ್ಕಳು ಸೇರಿದಂತೆ ಎಲ್ಲಾ ವಯೋಮಾನದವರಿಗೂ ಈಜುಕೊಳ ಲಭ್ಯವಾಗಬೇಕು. ಹಗಲು – ರಾತ್ರಿ ಕೆಲಸ ಮಾಡಿ ಕಾಮಗಾರಿ ಪೂರ್ಣಗೊಳಿಸುವಂತೆ ತಾಕೀತು ಮಾಡಿದರು.
ಜಯನಗರ ಈಜು ಕೋಳ ಇಡೀ ಕರ್ನಾಟಕದಲ್ಲಿಯೇ ಮಾದರಿಯಾಗಲಿದ್ದು, ಇಲ್ಲಿ ಮಕ್ಕಳು, ವಯಸ್ಕರು ಮತ್ತು ಹಿರಿಯರಿಗಾಗಿಯೇ ಪ್ರತ್ಯೇಕ ಈಜುಕೊಳಗಳನ್ನು ನಿರ್ಮಿಸಲಾಗುತ್ತಿದೆ. ಇದೇ ಮೊದಲ ಬಾರಿಗೆ ಬಿಸಿ ನೀರು ಈಜುಕೊಳ ನಿರ್ಮಿಸುತ್ತಿರುವುದು ವಿಶೇಷವಾಗಿದೆ. ಇಂತಹ ಈಜುಕೊಳದಲ್ಲಿ ಎಲ್ಲಾ ವಯಸ್ಸಿನವರು ಮಳೆ, ಚಳಿ, ಗಾಳಿ ಎನ್ನದೇ ವರ್ಷ ಪೂರ್ತಿ ಈಜಲು ಸಹಕಾರಿಯಾಗಲಿದೆ.
ಅಂತಾರಾಷ್ಟ್ರೀಯ ಮಟ್ಟದ ಈಜು ಸ್ಪರ್ಧೆಗಳನ್ನು ಆಯೋಜಿಸುವುದು, ಉತ್ತಮ ಈಜುಪಟುಗಳನ್ನು ತಯಾರು ಮಾಡುವ ಮಹತ್ವಾಕಾಂಕ್ಷೆಯಿಂದ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ.
ಆದರೆ ಕಳೆದ ಎರಡು ವರ್ಷಗಳಿಂದ ಈ ಕಾಮಗಾರಿ ಪ್ರಗತಿಯಾಗಿಲ್ಲ. ಶೇ 70 ರಷ್ಟು ಮಾತ್ರ ಪೂರ್ಣಗೊಂಡಿದೆ. ಇದರ ಜತೆಗೆ ಈಜುಕೊಳದ ಬಳಿ ಮಾದರಿ ಉದ್ಯಾನವವನ್ನು ಸಹ ನಿರ್ಮಾಣ ಮಾಡಲಾಗುತ್ತಿದೆ.
ನಂತರ ಸುದ್ದಿಗಾರರ ಜತೆ ಮಾತನಾಡಿದ ಸೌಮ್ಯ ರೆಡ್ಡಿ, ಬೇಸಿಗೆಯಲ್ಲಿ ಮಕ್ಕಳಿಗಾಗಿ ಬೇಸಿಗೆ ಶಿಬಿರ, ಈಜು ತರಬೇತಿ ಮತ್ತಿತರ ಚಟುವಟಿಕೆಗಳನ್ನು ಆರಂಭಿಸಲಾಗುವುದು. ಮಕ್ಕಳ ಕನಸು ಭಗ್ನಗೊಳ್ಳಲು ಅವಕಾಶ ನೀಡುವುದಿಲ್ಲ. ಕಾಮಗಾರಿ ಪೂರ್ಣಗೊಳಿಸಲು ಆದ್ಯತೆ ನೀಡುವುದಾಗಿ ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಎನ್. ನಾಗರಾಜು, ಬಿಬಿಎಂಪಿ ಜಂಟಿ ಆಯುಕ್ತ ವಿಶ್ವನಾಥ್, ಮುಖ್ಯ ಇಂಜಿನಿಯರ್ ಪ್ರಭಾಕರನ್ ಮತ್ತಿತರರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ