ಚಿಕ್ಕನಾಯಕನಹಳ್ಳಿ
ರಾಜಕಾರಣದಲ್ಲಿ 48ಗಂಟೆಯಲ್ಲಿ ಏನು ಬೇಕಾದರೂ ಆಗಬಹುದು ಹಾಗಾಗಿ ಎರಡೂ ಪಕ್ಷದ ನಾಯಕರಲ್ಲಿ ಕಳಕಳಿಯ ಮನವಿ ಮಾಡುತ್ತಾ ಚುನಾವಣೆಗೆ ಸ್ಪರ್ಧಿಸಲು ನನಗೆ ಅವಕಾಶ ಕೊಡಿ, ಜಿಲ್ಲೆಯಲ್ಲಿಯೂ ನನ್ನ ಸ್ಪರ್ಧೆಗೆ ಜನರಿಂದ ಒತ್ತಡವಿದೆ ಎಂದು ಸಂಸದ ಎಸ್.ಪಿ.ಮುದ್ದಹನುಮೇಗೌಡ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಡೀ ಜಿಲ್ಲೆಯ ಜನರಿಂದ ಲೋಕಸಭಾ ಚುನಾವಣೆಗೆ ನಾನು ಸ್ಪರ್ಧೆ ಮಾಡಲೇಬೇಕೆಂದು ಒತ್ತಾಯವಿದೆ ಹಾಗೂ ಸಂಸದರಾಗಿ ಕ್ಷೇತ್ರದಲ್ಲಿ ಮಾಡಿದ ಕೆಲಸಗಳಿಂದಲೇ ಜನರು ಪುನಃ ನನ್ನ ಸೇವೆ ಬಯಸಿದ್ದಾರೆ ಹಾಗಾಗಿ ಸೋಮವಾರ ಬೆಳಗ್ಗೆ 11ಗಂಟೆಗೆ ತುಮಕೂರು ಟೌನ್ ಹಾಲ್ ಸರ್ಕಲ್ನಿಂದ ಮೆರವಣಿಗೆ ಮೂಲಕ ಸಂಚರಿಸಿ ನಾಮಪತ್ರ ಸಲ್ಲಿಸುತ್ತಿದ್ದೇನೆ.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿಯೇ ಸ್ಪರ್ಧೆ : ರಾಜ್ಯದ ಹಾಗೂ ಜಿಲ್ಲೆಯ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಿ ಸಂಸತ್ನಲ್ಲಿ ಹೋರಾಡಿದ್ದೇನೆ, ಜಿಲ್ಲೆಯ ಪ್ರತಿಯೊಂದು ಹಳ್ಳಿಗಳಿಗೂ ಸಂಚರಿಸಿ ಸಮಸ್ಯೆಗಳನ್ನು ಪರಿಹರಿಸಿದ್ದೇನೆ ಇಂತಹ ಅನೇಕ ಕಾರಣಗಳಿಂದ, ಜನರು ನನ್ನ ಸೇವೆ ಪರಿಗಣಿಸಿ ಚುನಾವಣೆಗೆ ಸ್ಪರ್ಧಿಸುವಂತೆ ಒತ್ತಡ ಹೇರಿದ್ದಾರೆ, ಅವರ ಅಭಿಮಾನಕ್ಕೆ ಮಣಿದು ಸೋಮವಾರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತಿದ್ದೇನೆ ಎಂದರು.
ಕಣದಿಂದ ದೂರವಿಡಲು ಕಾರಣವೇನು : ಯಾವುದೇ ಸಕಾರಣವಿಲ್ಲದೆ ನನ್ನ ಸ್ಪರ್ಧೆಗೆ ಟಿಕೆಟ್ ತಪ್ಪಿಸಲಾಗಿದೆ, ಚುನಾವಣೆಯಿಂದ ನನ್ನ ದೂರವಿಡಲು ಕಾರಣವೇನು ಎಂದು ಕೇಳಿದ ಅವರು, ಎರಡೂ ಪಕ್ಷದ ನಾಯಕರು ತಮ್ಮ ನಿರ್ಧಾರವನ್ನು ಬದಲಿಸಿ, ಪುನಹ ನನಗೆ ಜನರ ಸೇವೆ ಮಾಡಲು ಅವಕಾಶ ನೀಡಬೇಕು, ಇನ್ನೂ ಎರಡು ದಿನಗಳ ಕಾಲ, ಕಾಲಾವಕಾಶವಿದೆ, ನಾಯಕರು ಜಿಲ್ಲೆಯ ಜನರ ಭಾವನೆಗಳಿಗೆ ಸ್ಪಂದಿಸಬೇಕು ಎಂದು ಆಗ್ರಹಿಸಿದರು.
ಪಕ್ಷದಲ್ಲಿ ಸಕ್ರಿಯ ಕಾರ್ಯಕರ್ತನಾಗಿದ್ದೆ : ದೇಶದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ 44ಮಂದಿ ಲೋಕಸಭಾ ಸಂಸದರು ಗೆಲುವು ಕಂಡಿದ್ದರು, ರಾಜ್ಯದಲ್ಲಿ 10ಮಂದಿ ಸಂಸದರಾಗಿ ಆಯ್ಕೆಯಾಗಿದ್ದರು, ಇವರಲ್ಲಿ ಎಲ್ಲಾ 9 ಸಂಸದರಿಗೂ ಟಿಕೆಟ್ ನೀಡಿ ನನಗೆ ಟಿಕೆಟ್ ನೀಡದಿರುವುದಕ್ಕೆ ಕಾರಣವೇನು, ನಾನು ಕಾಂಗ್ರೆಸ್ ಪಕ್ಷದ ಎಲ್ಲಾ ಕಾರ್ಯಕ್ರಮಗಳಿಗೂ ಸಕ್ರಿಯವಾಗಿ ಪಾಲ್ಗೊಂಡು ನಿಷ್ಠಾವಂತ ಕಾರ್ಯಕರ್ತನಾಗಿರುವೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಎಸ್.ಪಿ.ಮುದ್ದಹನುಮೇಗೌಡರ ಅಭಿಮಾನಿಗಳಾದ ಸಾಸಲು ಸತೀಶ್, ಜಿ.ರಘುನಾಥ್, ಹೊಸಳ್ಳಿ ಅಶೋಕ್, ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
