ತುಮಕೂರು
ಜಿಲ್ಲಾಡಳಿತ ಹಾಗೂ ವಿವಿಧ ಇಲಾಖೆಗಳ ಸಹಕಾರದಲ್ಲಿ ಫೆಬ್ರುವರಿ 16 ಮತ್ತು 17ರಂದು ನಗರದಲ್ಲಿ ನಡೆಯಲಿರುವ ಉದ್ಯೋಗ ಮೇಳದಲ್ಲಿ ತಪ್ಪದೇ ಭಾಗವಹಿಸಿ ಉದ್ಯೋಗಾವಕಾಶ ಪಡೆಯಬೇಕೆಂದು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಉದ್ಯೋಗ ಮೇಳದಲ್ಲಿ ಭಾಗವಹಿಸಲಿಚ್ಚಿಸುವ ಉದ್ಯೋಗಾಕಾಂಕ್ಷಿ ಯುವಕ/ ಯುವತಿಯರಿಗಾಗಿ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿಂದು ಏರ್ಪಡಿಸಿದ್ದ ನೋಂದಣಿ ಮತ್ತು ತರಬೇತಿ ಕಾರ್ಯಕ್ರಮದಲ್ಲಿ ನೋಂದಣಿ ಕಾರ್ಯಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಿ ಮಾತನಾಡಿದ ಅವರು, ನಿರುದ್ಯೋಗ ಸಮಸ್ಯೆಯನ್ನು ನಿವಾರಿಸುವ ಸಲುವಾಗಿ ಸರ್ಕಾರವು ಕೌಶಲ್ಯಾಭಿವೃದ್ಧಿ ಯೋಜನೆಯಡಿ ಈ ಮೇಳವನ್ನು ಆಯೋಜಿಸಿದ್ದು, ನಿರುದ್ಯೋಗಿ ಯುವಕ/ಯುವತಿಯರು ಸಮಯವನ್ನು ವ್ಯರ್ಥ ಮಾಡದೆ ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಉದ್ಯೋಗವಂತರಾಗಬೇಕು ಎಂದು ಕಿವಿಮಾತು ಹೇಳಿದರು.
ಉಪವಿಭಾಗಾಧಿಕಾರಿ ಶಿವಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ವಿದ್ಯಾಭ್ಯಾಸ ಮುಗಿದ ನಂತರ ಪ್ರತಿಯೊಬ್ಬರಿಗೂ ಉದ್ಯೋಗದ ಸಮಸ್ಯೆ ಕಾಡುತ್ತದೆ. ನಿರುದ್ಯೋಗಿಗಳಿಗೆಲ್ಲಾ ಸರ್ಕಾರದ ಉದ್ಯೋಗ ದೊರೆಯುವುದಿಲ್ಲ. ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗಾವಕಾಶ ಕಲ್ಪಿಸಿಕೊಡುವ ದೃಷ್ಟಿಯಿಂದ ಸರ್ಕಾರವು ಕೌಶಲ್ಯಾಭಿವೃದ್ಧಿ ಇಲಾಖೆಯನ್ನು ಸೃಷ್ಟಿಸಿದೆ ಎಂದು ತಿಳಿಸಿದರಲ್ಲದೆ, ಅಭ್ಯರ್ಥಿಗಳು ಉದ್ಯೋಗಮೇಳದಲ್ಲಿ ಆಸಕ್ತಿಯಿಂದ ಭಾಗವಹಿಸಿ ಆನ್ಲೈನ್ ಮೂಲಕ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕೆಂದು ತಿಳಿಸಿದರು.
ಕೌಶಲ್ಯಾಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ಪ್ರಾಸ್ತಾವಿಕವಾಗಿ ಮಾತನಾಡಿ ಉದ್ಯೋಗಕಾಂಕ್ಷಿಗಳಿಗೆ ಫೆ.16 ಹಾಗೂ 17ರಂದು ಉದ್ಯೋಗ ಮೇಳದ ವೇದಿಕೆ ಸಿದ್ಧವಾಗಿದ್ದು, ಈ ಮೇಳದಲ್ಲಿ ಪ್ರತಿಷ್ಠಿತ ಕಂಪನಿಗಳು ಸೇರಿ ಸುಮಾರು 100ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಲಿವೆ. ಉದ್ಯೋಗ ಮೇಳದಲ್ಲಿ ಭಾಗವಹಿಸುವವರಿಗೆ ಅನುಕೂಲವಾಗುವಂತೆ ನೋಂದಣಿ ಮತ್ತು ತರಬೇತಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು, ತರಬೇತಿಯಲ್ಲಿ ಉದ್ಯೋಗಕಾಂಕ್ಷಿಗಳಿಗೆ ಸಾಮಾನ್ಯ ಜ್ಞಾನ, ಮಾತನಾಡುವ ಕೌಶಲ್ಯತೆ, ಸಂದರ್ಶನಗಳನ್ನು ಎದುರಿಸುವ, ಡ್ರೆಸ್ಕೋಡ್, ರೆಸ್ಯೂಮ್ ತಯಾರಿಕೆ, ವೆಬ್ಸೈಟ್ ನೋಂದಣಿ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಜಗಧೀಶ್ ಅವರು ಮೇಳದ ಬಗ್ಗೆ ಅಸಡ್ಡೆ ಭಾವನೆ ತೋರಬೇಡಿ. ಭಾಗವಹಿಸಿದವರಿಗೆಲ್ಲರಿಗೂ ಉದ್ಯೋಗ ದೊರೆಯುವುದಿಲ್ಲ. ಇಂತಹ ಮೇಳಗಳಿಗೆ ಹೆಸರನ್ನು ನೋಂದಾಯಿಸಿಕೊಳ್ಳುವುದರಿಂದ ಒಂದಲ್ಲಾ ಒಂದು ದಿನ ಉದ್ಯೋಗ ಪಡೆಯಬಹುದಾಗಿದೆ. ಜಿಲ್ಲೆಯ ನಿರುದ್ಯೋಗಿಗಳು ತಪ್ಪದೆ ನೋಂದಾಯಿಸಿಕೊಂಡು ಉದ್ಯೋಗಾವಕಾಶ ಪಡೆಯಬೇಕು.
ಉದ್ಯೋಗ ಪಡೆದುಕೊಂಡರೆ ಮಾತ್ರ ಆರ್ಥಿಕ ಶಕ್ತಿ ಸಾಧ್ಯವೆಂದು ತಿಳಿಸಿದರು.ಜಿಲ್ಲಾ ಪಂಚಾಯತ್ ಸದಸ್ಯ ಹುಚ್ಚಯ್ಯ ಮಾತನಾಡಿದರು. ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವೆಂಕಟೇಶ್, ತಹಶೀಲ್ದಾರ್ ಕೆ.ಆರ್ ನಾಗರಾಜ್, ಕೌಶಲ್ಯಾಭಿವೃದ್ಧಿ ಇಲಾಖೆಯ ಸಹಾಯಕ ನಿರ್ದೇಶಕ ವಿಶ್ವೇಶ್ವರಯ್ಯ, ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಿನ್ಸಿಪಾಲ್ ಗಂಗಾಧರಯ್ಯ, ಪ್ಲೇಸ್ಮೆಂಟ್ ಅಧಿಕಾರಿ ಮಂಜುನಾಥ್, ಉದ್ಯೋಗ ವಿನಿಮಯ ಕಛೇರಿಯ ನಾಗರಾಜ್ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
