ಶಿರಾ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವ ಈಶ್ವರಪ್ಪ ಅವರು ಮಂಗಳವಾರ ಶಿರಾ ತಾಲ್ಲೂಕಿನ ನರೇಗಾ ಕಾಮಗಾರಿಗಳನ್ನು ವೀಕ್ಷಿಸಿದರು. ಕಳ್ಳಂಬೆಳ್ಳ ಹೋಬಳಿಯ ಶೀಬಿ ಅಗ್ರಹಾರ ಗ್ರಾಮ ಪಂಚಾಯ್ತಿಯ ಉಮೇಶ್ ಅವರ ಜಮೀನಿನಲ್ಲಿ ನಿರ್ಮಾಣಗೊಂಡ ಕೃಷಿ ಹೊಂಡ, ಅಜ್ಜೇನಹಳ್ಳಿ ಗ್ರಾಮದ ಕೆರೆಯ ಹೂಳೆತ್ತುವ ಕಾಮಗಾರಿ, ಹಾಲೇನಹಳ್ಳಿ ಗ್ರಾಮ ಪಂಚಾಯ್ತಿಯ ಫಲಾನುಭವಿ ವೀರಣ್ಣನ ಜಮೀನಿನಲ್ಲಿ ನಿರ್ಮಾಣಗೊಂಡ ಕೃಷಿ ಹೊಂಡ ಹಾಗೂ ಬದು ನಿರ್ಮಾಣ ಕಾಮಗಾರಿಗಳನ್ನು ಸಚಿವರು ವೀಕ್ಷಣೆ ಮಾಡಿದರು.
ಶಿರಾ ನಗರದ ಪ್ರವಾಸಿ ಮಂದಿರಕ್ಕೂ ಭೇಟಿ ನೀಡಿದ ಸಚಿವರು ಪತ್ರಕರ್ತರೊಂದಿಗೆ ಮಾತನಾಡಿ, ಶಿರಾ ಭಾಗದಲ್ಲಿ ಕಳೆದ 20 ವರ್ಷಗಳಿಂದಲೂ ಸರಿಯಾಗಿ ಮಳೆ-ಬೆಳೆಯಾಗದೆ ರೈತರು ಸಂಕಷ್ಟದಲ್ಲಿದ್ದಾರೆ. ಕಳೆದ ವರ್ಷವೂ ಮಳೆ ಕೈಕೊಟ್ಟಿದೆಯಾದರೂ ಇಡೀ ಜಿಲ್ಲೆಯ ಎಲ್ಲಾ ತಾಲ್ಲೂಕುಗಳನ್ನು ಬರಪೀಡಿತವೆಂದು ಘೋಷಿಸಿ ಶಿರಾ ತಾಲ್ಲೂಕನ್ನು ಮಾತ್ರ ಪಟ್ಟಿಯಿಂದ ಕೈಬಿಡಲಾಗಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಬಗ್ಗೆ ಶಿರಾ ಶಾಸಕರು ನನ್ನ ಗಮನ ಸೆಳೆದಿದ್ದಾರೆ ಎಂದರು.
ಶಿರಾ ತಾಲ್ಲೂಕು ಡಾ.ನಂಜುಂಡಪ್ಪ ವರದಿಯಂತೆ ಅತ್ಯಂತ ಹಿಂದುಳಿದ ತಾಲ್ಲೂಕಾಗಿದ್ದು, ಬರ ಪೀಡಿತ ಪ್ರದೇಶವೂ ಆಗಿದೆ. ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೂ ಪರಿತಪಿಸುವಂತಾಗಿದೆ. ಕೂಡಲೆ ಈ ತಾಲ್ಲೂಕನ್ನು ಬರ ಪೀಡಿತ ಪ್ರದೇಶದ ಪಟ್ಟಿಗೆ ಸೇರಿಸುವಂತೆ ಶಾಸಕ ಬಿ.ಸತ್ಯನಾರಾಯಣ್ ಜಿಲ್ಲಾ ಸಚಿವರಿಗೆ ಈ ಹಿಂದೆ ಪತ್ರ ಬರೆದು ಮನವಿ ಮಾಡಿದ್ದು, ಇದೀಗ ನನಗೂ ಪತ್ರ ನೀಡಿದ್ದಾರೆ ಎಂದರು.
ಶಿರಾ ಶಾಸಕರ ಮನವಿಯಂತೆ ಈ ಸಂಬಂಧ ಸರ್ಕಾರದ ಗಮನ ಸೆಳೆಯಲಾಗುವುದಲ್ಲದೆ, ಶಿರಾ ಭಾಗದ ಕುಡಿಯುವ ನೀರಿನ ಸಮಸ್ಯೆಯನ್ನು ನಿವಾರಿಸುವ ಸಲುವಾಗಿ ವಿಶೇಷ ಅನುದಾನವಾಗಿ ಶಾಸಕ ಸತ್ಯನಾರಾಯಣ್ ಅವರು 100 ಲಕ್ಷ ರೂ.ಗಳನ್ನು ನೀಡುವಂತೆ ಮನವಿ ಕೂಡ ಮಾಡಿದ್ದು ಮೊದಲ ಕಂತಿನ ಅನುದಾನವಾದ 50,000 ಲಕ್ಷ ರೂ.ಗಳನ್ನು ಶಿರಾ ತಾಲ್ಲೂಕಿಗೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಈಶ್ವರಪ್ಪ ಹೇಳಿದರು.
ರಾಜ್ಯದಲ್ಲಿನ ನರೇಗಾ ಯೋಜನೆಯ ಎಲ್ಲಾ ಕಾಮಗಾರಿಗಳನ್ನು ತ್ವರಿತ ಗತಿಯಲ್ಲಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ. ನರೇಗಾ ಕಾಮಗಾರಿಯಿಂದ ಅತ್ಯಂತ ಕಡು ಬಡ ಕೂಲಿ ಕಾರ್ಮಿಕರಿಗೆ ಅನುಕೂಲವಾಗಲಿದೆ. ಯಾವುದೇ ವ್ಯತ್ಯಾಸಗಳಾದರೂ ಅದಕ್ಕೆ ಅಧಿಕಾರಿಗಳೆ ಹೊಣೆಯಾಗುತ್ತಾರೆ ಎಂದು ಸಚಿವರು ಹೇಳಿದರು.
ಶಾಸಕ ಬಿ.ಸತ್ಯನಾರಾಯಣ್, ಗ್ರಾಮೀಣಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅತೀಕ್, ಜಿ.ಪಂ. ಸಿ.ಇ.ಓ. ಶುಭಾ ಕಲ್ಯಾಣ್, ತಾಲ್ಲೂಕು ದಂಡಾಧಿಕಾರಿ ನಾಹಿದಾ ಜಮ್ ಜಮ್, ಎನ್.ಮುನಿರಾಜು, ತಾ.ಪಂ. ಇ.ಓ. ಮೋಹನ್ಕುಮಾರ್ ಸೇರಿದಂತೆ ಬಿ.ಜೆ.ಪಿ. ಪಕ್ಷದ ಅನೇಕ ಪ್ರಮುಖರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
