ಬರದ ತಾಲ್ಲೂಕಿನಲ್ಲಿ ಕಬ್ಬು ಬೆಳೆದು ಬೆಲ್ಲ ತಯಾರಿಸುತ್ತಿರುವ ಏಕೈಕ ರೈತ

ಐ.ಡಿ.ಹಳ್ಳಿ:

      ಮಧುಗಿರಿ ತಾಲ್ಲೂಕಿನಲ್ಲಿ ಸತತವಾಗಿ ಬರಗಾಲವಿದ್ದು, ಕುಡಿಯುವುದಕ್ಕೆ ನೀರು ಸಹ ಸಿಗದ ಪರಿಸ್ಥಿತಿಯಿರುವಾಗ, ಐ.ಡಿ.ಹಳ್ಳಿ ಹೋಬಳಿಯ ದೊಡ್ಡಯಲ್ಕೂರು ಮಧು ಅವರ ಜಮೀನಿನಲ್ಲಿ 12 ಕೊಳವೆ ಬಾವಿಗಳು ವಿಫಲವಾದರೂ ಸಹ ಛಲ ಬಿಡದೆ, ಕಬ್ಬು ಬೆಳೆದು ಸುಮಾರು 18 ವರ್ಷಗಳಿಂದ ಪ್ರತಿವರ್ಷವೂ ಸತತವಾಗಿ ಅಲೆಮನೆ ಮಾಡಿ, ಬೆಲ್ಲ ತಯಾರಿಸುತ್ತಿರುವುದು ದೊಡ್ಡ ಸಾಧನೆ ಎಂದು ಹೇಳಬಹುದಾಗಿದೆ.

      ಇವರಿಗಿರುವ ಒಟ್ಟು ಎಂಟು ಎಕರೆ ಜಮೀನಿನಲ್ಲಿ ಹಿಂದೆ ಮೂರು ನಾಲ್ಕು ಎಕರೆಯಲ್ಲಿ ಕಬ್ಬು ಬೆಳೆಯುತ್ತಿದ್ದು, ಈಗ ನೀರಿನ ಸಮಸ್ಯೆಯಿಂದ ಕೇವಲ ಈ ವರ್ಷ ಅರ್ಧ ಎಕರೆಯಲ್ಲಿ ಮಾತ್ರ ಕಬ್ಬು ಬೆಳೆದು ತಾಲ್ಲೂಕಿನಲ್ಲಿ ಆಲೆಮನೆ ಮಾಡಿ ಬೆಲ್ಲ ತಯಾರಿಸುತ್ತಿರುವುದು ಇವರು ಒಬ್ಬರೆ. ಎಂಟು ಎಕರೆ ಜಮೀನಿನಲ್ಲಿ ಒಟ್ಟು 12 ಕೊಳವೆಬಾವಿಯನ್ನು ಕೊರೆಸಿದ್ದು, ಅದರಲ್ಲಿ ಒಂದು ಕೊಳವೆಬಾವಿಯಲ್ಲಿ ಮಾತ್ರ ಕೇವಲ ಒಂದು ಇಂಚು ನೀರು ಬರುತ್ತಿದೆ. ಇದರಲ್ಲಿ ಮಾವು, ಅಡಕೆ, ತೆಂಗಿನೊಂದಿಗೆ ಕಬ್ಬನ್ನು ಸಹ ಬೆಳೆಯುತ್ತಿದ್ದಾರೆ. ಜೊತೆಯಲ್ಲಿ ಇಪ್ಪತ್ತು ಕುರಿ ಹಾಗೂ ಎರಡು ಹಸುಗಳನ್ನು ಸಾಕಿ, ಈ ಬರಗಾಲದಲ್ಲೂ ಯಶಸ್ವಿ ಮಧು ರೈತರಾಗಿ, ವ್ಯವಸಾಯದಲ್ಲಿ ಮುನ್ನಡೆಯುತ್ತಿರುವುದು ತಾಲ್ಲೂಕಿಗೆ ಹೆಮ್ಮೆ ಎನಿಸಿದೆ.

       ಪ್ರಗತಿಪರ ರೈತ ಮಧು ಮಾತನಾಡಿ, ನನಗೆ ಬೇಸಾಯ ಮಾಡುವುದಕ್ಕೆ ಇಷ್ಟ ಇದ್ದು, ನಮ್ಮ ಜಮೀನಿನಲ್ಲಿ ದೇವರು ಕೊಟ್ಟಷ್ಟು ನೀರಿನಲ್ಲಿ ಸತತವಾಗಿ ನಾಲ್ಕೈದು ಬೆಳೆಯನ್ನು ಬೆಳೆಯುತ್ತಿದ್ದೇವೆ. ಬೆಳೆಯುವ ಬೆಳೆಯಿಂದ ಒಂದು ಬಾರಿ ನಷ್ಟ ಮತ್ತೊಂದು ಬಾರಿ ಲಾಭ ಮಾಡುತ್ತಿದ್ದೇನೆ. ನೀರಿಲ್ಲದೆ ಈ ಬಾರಿ ಬೆಳೆ ಕಮ್ಮಿಯಾಗಿದ್ದು. ಬೆಳೆದಿರುವ ಕಬ್ಬಿನಿಂದ ಬೆಲ್ಲದ ಉಂಡೆಗಳನ್ನು ಮಾಡುತ್ತಿದ್ದೇನೆ. ಇದೇ ಬೆಲ್ಲ ಮಾರುಕಟ್ಟೆಯಲ್ಲಿ 40 ರೂಪಾಯಿಗಳಿಗೆ ಮಾರಾಟವಾಗುತ್ತಿದೆ. ಅಷ್ಟೇ ಬೆಲೆ ನಮಗೆ ಸಿಕ್ಕಿದರೆ ಸ್ವಲ್ಪ ನಿರಾಳವಾಗಿರಬಹುದು ಎಂದರು.

        ನೂರಾರು ಎಕರೆಯಲ್ಲಿ ತೋಟಗಾರಿಕೆ ಮಾಡುವ ನೆರೆಯ ಪಂಜಾಬಿನ ನಾಮಧಾರಿ ಸಂಸ್ಥೆಯವರು ಸಹ ಇತ್ತೀಚೆಗೆ ಕಬ್ಬು ಬೆಳೆಯುತ್ತಿದ್ದು, ಅಲೆ ಮನೆ ಇಲ್ಲದ ಕಾರಣ ಅವರು ಸಹ ಕಬ್ಬನ್ನು ನಮ್ಮಲ್ಲಿಯೇ ತಂದು ಬೆಲ್ಲದ ಪುಡಿಯನ್ನು ಮಾಡಿಕೊಂಡು ಹೋಗುತ್ತಿದ್ದಾರೆ. ಆದ್ದರಿಂದ ತಾಲ್ಲೂಕಿನಲ್ಲಿ ಈಗಿರುವುದು ಏಕೈಕ ಕಬ್ಬು ಬೆಳೆಯುವ ಅಲೆಮನೆ ನಮ್ಮದಾಗಿದ್ದು, ನಮಗೆ ಹೆಮ್ಮೆ ಎನಿಸುತ್ತಿದೆ ಎಂದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link