ಬೆಂಗಳೂರು
ರಣಂ ಸಿನೆಮಾ ಚಿತ್ರೀಕರಣದ ವೇಳೆ ಏರ್ ಕಂಪ್ರೆಸರ್ನ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ತಾಯಿ, ಮಗಳು ಮೃತಪಟ್ಟ ಪ್ರಕರಣದಲ್ಲಿ ತಲೆ ಮರೆಸಿಕೊಂಡಿದ್ದ ಪ್ರಮುಖ ಆರೋಪಿ ನಿರ್ಮಾಪಕ ಕನಕಪುರ ಶ್ರೀನಿವಾಸ್ನನ್ನು ಬಾಗಲೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದುರಂತಕ್ಕೆ ಕಾರಣರಾದ ಪ್ರಮಖ ಆರೋಪಿ ನಿರ್ಮಾಪಕ ಕನಕಪುರ ಶ್ರೀನಿವಾಸ್(6)ರನ್ನು ಇಂದು ಮುಂಜಾನೆ ನಗರದಲ್ಲಿ ಬಂಧಿಸಿ ತೀವ್ರ ವಿಚಾರಣೆ ನಡೆಸಲಾಗಿದೆ
ಈಗಾಗಲೇ ಪ್ರಕರಣದ ಸಂಬಂಧ ಸ್ಟಂಟ್ ಮಾಸ್ಟರ್ ಸುಭಾಷ್(55)ನನ್ನು ಬಂಧಿಸಿ ವಿಚಾರಣೆ ನಡೆಸಲಾಗಿದ್ದು ನಿರ್ದೇಶಕ ವಿ. ಸಮುದ್ರಂ ಸೇರಿ ಇನ್ನೂ ತಲೆಮರೆಸಿಕೊಂಡಿರುವ ಮೂವರು ಆರೋಪಿಗಳಿಗೆ ಬಾಗಲೂರು ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ ಎಂದು ಡಿಸಿಪಿ ಕಲಾ ಕೃಷ್ಣಸ್ವಾಮಿ ಅವರು ತಿಳಿಸಿದ್ದಾರೆ.
ದುರಂತ ನಡೆದ ನಂತರ ಪರಾರಿಯಾಗಿದ್ದ ಕನಕಪುರ ಶ್ರೀನಿವಾಸ್ ನಗರದ ಮನೆಯ ಬಳಿ ಮುಂಜಾನೆ 3ರ ವೇಳೆ ಬಂದಿರುವ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿ ಬಂಧಿಸಿ ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಗಿದೆ ಎಂದು ತಿಳಿಸಿದರು.
ಆರೋಪಿಗಳ ಪತ್ತೆಗಾಗಿ ಮೂರು ವಿಶೇಷ ತಂಡಗಳು ರಚಿಸಿದ್ದು ತಂಡಗಳು ಕಾರ್ಯಾಚರಣೆ ನಡೆಸುತ್ತಿದ್ದು, ತನಿಖೆ ಚುರುಕುಗೊಳಿಸಲಾಗಿದೆ.ಪೊಲೀಸರ ಎರಡು ತಂಡಗಳು ಹುಡುಕಾಟ ನಡೆಸುತ್ತಿವೆ. ಯಾವುದೇ ಅನುಮತಿ ಪಡೆಯದೆ ಸಿನಿಮಾ ತಂಡದವರು ಸಾಹಸ ದೃಶ್ಯ ಚಿತ್ರೀಕರಿಸಿದ ಹಿನ್ನೆಲೆಯಲ್ಲಿ ದುರ್ಘಟನೆ ನಡೆದ ಸ್ಥಳದಲ್ಲಿದ್ದ ಸಿನಿಮಾ ತಂಡದ ಎಲ್ಲ ವಾಹನಗಳನ್ನೂ ಜಪ್ತಿ ಮಾಡಲಾಗಿದೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
