ಆಂಗ್ಲ ವ್ಯಾಮೋಹದಿಂದ ಕನ್ನಡ ಶಾಲೆಗಳು ಬಂದ್

ದಾವಣಗೆರೆ

   ಮಕ್ಕಳ ಉದ್ಯೋಗವನ್ನು ದೃಷ್ಟಿಯಲ್ಲಿರಿಸಿಕೊಂಡು ಪೋಷಕರು ಆಂಗ್ಲ ಮಾಧ್ಯಮದ ಶಿಕ್ಷಣಕ್ಕೆ ಶರಣಾಗುತ್ತಿರುವ ಪರಿಣಾಮ ನಾಡಿನೆಲ್ಲೆಡೆ ಸಾವಿರಾರು ಕನ್ನಡ ಶಾಲೆಗಳು ಮುಚ್ಚಿತ್ತಿವೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಆತಂಕ ವ್ಯಕ್ತಪಡಿಸಿದರು.ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತದ ವತಿಯಿಂದ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ, ರಾಜ್ಯೋತ್ಸವ ಸಂದೇಶ ನೀಡಿದ ಅವರು, ಪೋಷಕರ ಆಂಗ್ಲ ವ್ಯಾಮೋಹದಿಂದಾಗಿ ಕನ್ನಡ ಶಾಲೆಗಳಿಗೆ ಬರುವ ಮಕ್ಕಳ ಸಂಖ್ಯೆ ಕಡಿಮೆಯಾಗಿ ಅವುಗಳು ಮುಚ್ಚುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು.

    ಆಂಗ್ಲ ಭಾಷೆ ನಮಗೆ ಬೇಕು. ಆದರೆ, ನಮ್ಮ ಭಾಷೆಯ ಬದಲಲ್ಲ. ಆಂಗ್ಲಭಾಷೆಯ ವ್ಯಾಮೋಹದ ಸೆಳೆತಕ್ಕೆ ಸಿಲುಕಿ ನಾವು ನಮ್ಮ ಸಂಸ್ಕøತಿಯನ್ನು ನಾಶಗೊಳಿಸಿಕೊಳ್ಳುತ್ತಿದ್ದೇವೆ. ಕನ್ನಡ ಭಾಷೆಗೆ ಬಂದೊದಗಿದ ಸಾಂಸ್ಕøತಿಕ ದುಸ್ಥಿತಿಯನ್ನು ಬದಲಿಸಬೇಕಾದ ಜವಾಬ್ದಾರಿ ನಮ್ಮಗಳ ಮೇಲಿದೆ ಎಂದರು.

     ಕನ್ನಡಿಗಾರದ ನಾವು ಅನ್ಯಭಾಷೆಗಳನ್ನು ಕಲಿಯುತ್ತಾ ಕನ್ನಡ ಭಾಷೆಯನ್ನು ಪ್ರೀತಿಸಿ ಪ್ರೋತ್ಸಾಹಿಸಬೇಕು. ಇಂತಹ ಕನ್ನಡ ಕನ್ನಡಿಗರ ಬದುಕಿನಲ್ಲಿ, ಭಾವನೆಯಲ್ಲಿ ಬೆರೆತಿದೆ. ಅದು ಅವರ ಉಸಿರಿನ ಉಸಿರು, ಜೀವದ ಜೀವ, ಕನ್ನಡ ಜೀವವಾಹಿನಿಯಾಗಿ ಕಂಗೊಳಿಸುತ್ತಿದೆ ಎಂದ ಅವರು, ಕರ್ನಾಟಕ ಬಹುಸಂಖ್ಯಾತ ಜನರ ಭಾಷೆ ಕನ್ನಡವೇ ಆಗಿದ್ದರೂ, ಅದು ರಾಜ್ಯ ಸರ್ಕಾರದ ಅಧಿಕೃತ ಭಾಷೆಯೂ ಆಗಿದೆ ಎಂದು ಹೇಳಿದರು.

     ಕನ್ನಡಿಗರು ಅತ್ಯಂತ ಉದಾರ ಮನಸ್ಸಿನವರು ಮತ್ತು ವಿಶಾಲ ಹೃದಯವಂತರಾಗಿದ್ದು ಎಲ್ಲರನ್ನೂ ಸ್ವೀಕರಿಸುವ ಮನೋಭಾವ ಹೊಂದಿದ್ದೇವೆ. ಭಾಷಾಭಿಮಾನ ಕೊರತೆಯೊಂದಿಗೆ ಭಾಷಾ ದುರಭಿಮಾನವೂ ನಮ್ಮಲ್ಲಿಲ್ಲ ಎಂದ ಅವರು, ಕನ್ನಡಿಗರ ಬದುಕಿನಲ್ಲಿ, ಭಾವನೆಯಲ್ಲಿ ಬೆರೆತಿರುವ, ಉಸಿರಿನ ಉಸಿರು, ಜೀವದ ಜೀವವಾಗಿರುವ ಕನ್ನಡ ಭಾಷೆ, ಸಾಹಿತ್ಯದ ಅಭಿವೃದ್ಧಿ ಹಾಗೂ ಕನ್ನಡ ನಾಡಿನ ಸರ್ವಾಂಗೀಣ ಬೆಳವಣಿಗೆಗಾಗಿ ನಾವೆಲ್ಲರೂ ಕಂಕಣಬದ್ದರಾಗಬೇಕೆಂದು ಕರೆ ನೀಡಿದರು.

     ಕನ್ನಡ ಭಾಷೆಯನ್ನು ಬೆಳೆಸಬೇಕಾದರೆ ಅದರ ಮಹತ್ವವನ್ನು ಶಾಲಾ-ಕಾಲೇಜುಗಳಲ್ಲಿ ಮಕ್ಕಳಿಗೆ ತಿಳಿಸಿಕೊಡಬೇಕು. ಪುಸ್ತಕ ಓದುವ, ಚರ್ಚಿಸುವ, ವಿಮರ್ಶಿಸುವ ಕೆಲಸಕ್ಕೆ ತೊಡಗಿಸಬೇಕು. ಕನ್ನಡದಲ್ಲಿ ಮಾತನಾಡುವುದರಿಂದ ಆಗುವ ಲಾಭಗಳ ಬಗ್ಗೆ ಜಾಗೃತಿ ಮೂಡಿಸಬೇಕು. ಕರ್ನಾಟಕದಲ್ಲಿ ಕನ್ನಡ ಭಾಷೆ, ಕನ್ನಡ ಪುಸ್ತಕ, ಕನ್ನಡ ಕವಿಗಳು, ಲೇಖಕರನ್ನು ಗೌರವಿಸುವ ಕೆಲಸ ಆಗಬೇಕು ಎಂದು ಆಶಿಸಿದರು.

     ಬ್ರಿಟ್ರಿಷರ ಅಧಿಕಾರವಧಿಯಲ್ಲಿ ಹರಿದು ಹಂಚಿ ಹೋಗಿದ್ದ ಕರ್ನಾಟಕದ ಏಕೀಕರಣ ಕನಸನ್ನು ಡಿಪ್ಯೂಟಿ ಚನ್ನಬಸಪ್ಪ ಅವರು ಕಂಡಿದ್ದರು. 1856ರಲ್ಲಿ ಚಾಲನೆ ನೀಡಿದ ಬೀಜ ರೂಪದ ಚಳುವಳಿ 100 ವರ್ಷಗಳವರೆಗೆ ನಿರಂತರ ಹೋರಾಟ ನೆಡೆಸಿದ ಫÀಲ ಸ್ವರೂಪ 1956ರ ನವೆಂಬರ್ 01 ರಂದು ವಿಶಾಲ ಮೈಸೂರು ರಾಜ್ಯವಾಯಿತು.

     ಇದಕ್ಕಾಗಿ ಹೋರಾಡಿದ ಕನ್ನಡ ಕುಲಪುರೋಹಿತ ಆಲೂರು ವೆಂಕಟರಾಯರು ಆಚಾರ್ಯ ರಾ.ಹ.ದೇಶಪಾಂಡೆ, ರೊದ್ದಂ ಶ್ರೀನಿವಾಸ ರಾವ್, ಬಿ.ಎಂ.ಶ್ರೀಕಂಠಯ್ಯ, ಆ.ನ.ಕೃಷ್ಣರಾಯರು, ಹರ್ಡೇಕರ್ ಮಂಜಪ್ಪ ಯು.ರಾಮರಾವ್, ಬೆನಗಲ್ ಶಿವರಾಮ್, ಬೆನಗಲ್ ರಾಮರಾವ್, ಮುದವೀಡು ಕೃಷ್ಣರಾವ್ ಕಾರ್ನಾಡ್ ರಾಘವೇಂದ್ರರಾವ್, ದೇಶಪಾಂಡೆ, ಗಂಗಾಧರ್ ರಾವ್, ಹುಯಿಲಗೋಳ ನಾರಾಯಣರಾವ್, ಕಾರ್ನಾಡ್ ಸದಾಶಿವ ರಾವ್, ಕೆ.ಆರ್.ಕಾರಂತ್, ಆರ್.ಆರ್ ದಿವಾಕರ್, ಅಂದಾನಪ್ಪ ದೊಡ್ಡಮೇಟಿ, ಎಸ್ ನಿಜಲಿಂಗಪ್ಪ, ಗೊರುರು ರಾಮಸ್ವಾಮಿ, ಕಡಿದಾಳ್ ಮಂಜಪ್ಪ, ಕುವೆಂಪು, ಕೆಂಗಲ್ ಹನುಮಂತಯ್ಯ, ಹೆಸ್ ಎಸ್ ದೊರೆಸ್ವಾಮಿ, ಬಳ್ಳಾರಿ ಸಿದ್ದಮ್ಮ, ಪಾಟೀಲ್ ಪುಟ್ಟಪ್ಪ, ಮುಂತಾದ ಅಸಂಖ್ಯಾತ ಲೇಖಕ, ಲೇಖಕಿಯರನ್ನು ಸಂಘಸಂಸ್ಥೆಗಳನ್ನು ಪತ್ರಿಕೋದ್ಯಮಿಗಳನ್ನು ಸ್ಮರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.

     ಏಕೀಕರಣ ಚಳವಳಿ ಸಮಯದಲ್ಲಿ ಕನ್ನಡ ಹೋರಾಟಗಾರ ಹರ್ಡೇಕರ್ ಮಂಜಪ್ಪ ದಾವಣಗೆರೆಗೆ ಆಗಮಿಸಿದ್ದರು. ದಾವಣಗೆರೆಯವರೇ ಆದ ಎ.ಹೆಚ್.ಶಿವಾನಂದಸ್ವಾಮಿ ಏಕೀಕರಣ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಮೈಸೂರು ಚಲೋ ಚಳವಳಿಯಲ್ಲಿ ಹರಿಹರದ ಚಂದ್ರಪ್ಪ ಮತ್ತು ವಿನಾಯಕ್ ಸಾ ಭಾಗವಹಿಸಿದ್ದರು ಎಂದು ಸ್ಮರಿಸಿದರು.

     ಗೌರವ ರಕ್ಷೆ ಕಾರ್ಯಕ್ರಮದ ನಂತರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ ಇವರ ಮಾರ್ಗದರ್ಶನದಲ್ಲಿ ಶಿಸ್ತುಬದ್ಧ ಪಥಸಂಚಲನ ನಡೆಯಿತು. ಮೀಸಲು ಸಶಸ್ತ್ರ ಪಡೆಯ ಮುಖ್ಯ ಸಮಾದೇಷ್ಟ ಎಸ್.ಎನ್.ಕಿರಣ್‍ಕುಮಾರ್ ಕನ್ನಡದಲ್ಲಿ ಕನ್ನಡದಲ್ಲಿ ಆಜ್ಞೆ ನೀಡಿದರು.

      ಕಾರ್ಯಕ್ರಮದಲ್ಲಿ ಡೊಳ್ಳುಕುಣಿತ, ಗಾರುಡಿ ಗೊಂಬೆ, ವೀರಗಾಸೆ, ಕರಡಿ ಮಜಲು ಮತ್ತು ಕಹಳೆ ವಾದನ ಕಲಾ ತಂಡದವರು ಹಾಗೂ ಕನ್ನಡ ತಾಯಿ ಭುವನೇಶ್ವರಿ ಸ್ತಬ್ಧಚಿತ್ರ ಪ್ರದರ್ಶನ ನಡೆಸಲಾಯಿತು.ಕಾರ್ಯಕ್ರಮದಲ್ಲಿ ಜಿ.ಪಂ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಪದ್ಮಾ ಬಸವಂತಪ್ಪ, ಪ್ರಭಾರ ಅಪರ ಜಿಲ್ಲಾಧಿಕಾರಿ ನಜ್ಮಾ, ತಹಶೀಲ್ದಾರ್ ಸಂತೋಷ್‍ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link