ಚಳ್ಳಕೆರೆ
ಸಂವಿಧಾನ ಬದ್ದವಾಗಿ ರೂಪಿತವಾದ ಎಲ್ಲಾ ಕಾನೂನುಗಳು ಸಮಾಜದ ಹಿತಕ್ಕಾಗಿ ಬಳಕೆಯಾಗುತ್ತಿದ್ದು, ಅನಗತ್ಯವಾಗಿ ಕಾನೂನನ್ನು ವಿರೋಧಿಸುವವರಿಗೆ ಮಾತ್ರ ಶಿಕ್ಷಕೆಯಾಗುತ್ತದೆ. ಕಾನೂನನ್ನು ಗೌರವಿಸುವವನ್ನು ಸದಾ ಸುಖಿಯಾಗಿರುತ್ತಾನೆಂದು ಕರ್ನಾಟಕ ರಾಜ್ಯ ವಕೀಲರ ಪರಿಷತ್ನ ರಾಜ್ಯ ಉಪಾಧ್ಯಕ್ಷ ಬಿ.ವಿ.ಶ್ರೀನಿವಾಸ್ ತಿಳಿಸಿದರು.
ಅವರು, ಶುಕ್ರವಾರ ಇಲ್ಲಿನ ನ್ಯಾಯಾಲಯದ ಆವರಣದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ ಮತ್ತು ವಕೀಲರ ಸಂಘ ಹಮ್ಮಿಕೊಂಡಿದ್ದ ಕಾನೂನು ಕಾರ್ಯಗಾರ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ರಾಜಕೀಯ ಕ್ಷೇತ್ರವೂ ಸೇರಿದಂತೆ ಎಲ್ಲಾ ಕ್ಷೇತ್ರಗಳು ಕಾನೂನಿನ ಸಲಹೆಯನ್ನು ಪಡೆಯಲು ಮುಂದಾಗಿರುವುದು ಕಾನೂನಿಗೆ ಇರುವ ಶಕ್ತಿಯನ್ನು ತೋರಿಸುತ್ತದೆ ಎಂದರು. ನ್ಯಾಯವಾದಿಗಳು ಸದಾಕಾಲ ನ್ಯಾಯಾಂಗ ಇಲಾಖೆಯ ಗೌರವಕ್ಕೆ ಚ್ಯುತಿಬಾರದಂತೆ ಎಚ್ಚರಿಕೆ ಕಾರ್ಯನಿರ್ವಹಿಸಬೇಕೆಂದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಜಿಲ್ಲಾ ಸತ್ರ ನ್ಯಾಯಾಧೀಶ ಎಸ್.ಬಿ.ವಸ್ತ್ರಮಠ ಮಾತನಾಡಿ, ಕಾನೂನಿನ ಎಲ್ಲಾ ಜಾಗೃತಿ ಕಾರ್ಯಗಾರಗಳು ಸಾರ್ವಜನಿಕರ ಮೇಲೆ ಹೆಚ್ಚು ಪರಿಣಾಮವನ್ನು ಬೀರುತ್ತಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯಗಳಲ್ಲಿ ದಾಖಲಾಗುವ ಪ್ರಕರಣ ಸಂಖ್ಯೆ ಕಡಿಮೆಯಾಗುತ್ತಿದ್ದು, ಆರೋಗ್ಯಕರ ಬೆಳವಣಿಗೆಯಾಗಿದೆ. ಯಾವ ವ್ಯಕ್ತಿ ಕಾನೂನಿನ ಬಗ್ಗೆ ಹೆಚ್ಚು ವಿಶ್ವಾಸ ಗೌರವಹೊಂದಿರುತ್ತಾನೋ ಅಂತಹ ವ್ಯಕ್ತಿ ಸಮಾಜದ ಮುಂಚೂಣಿ ನಾಯಕನಾಗುತ್ತಾನೆಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ಕೆ.ಎಂ.ನಾಗರಾಜು ಮಾತನಾಡಿ, ನ್ಯಾಯಂಗ ಮತ್ತು ಕಕ್ಷಿದಾರರ ನಡುವೆ ನ್ಯಾಯವಾದಿಗಳು ಕಾರ್ಯನಿರ್ವಹಿಸಬೇಕಿದ್ದು, ಕಕ್ಷಿದಾರರ ಹಿತವನ್ನಲ್ಲದೆ ಕಾನೂನಿನ ಮೌಲ್ಯವನ್ನು ಸಹ ಕಾಪಾಡಬೇಕಿದೆ. ನಮ್ಮಲ್ಲಿ ರೂಪಿತವಾದ ಕಾನೂನು ಎಲ್ಲಾ ರೀತಿಯಿಂದಲೂ ಉತ್ತಮ ಮಟ್ಟದಲ್ಲಿದ್ದು, ಯಾವುದೇ ವ್ಯಕ್ತಿ ಇದನ್ನು ಮೀರುವ ಹಂತ ತಲುಪಲಾರ. ಇಂದು ಕಾನೂನು ಸರ್ವವ್ಯಾಪಿಯಾಗಿದ್ದು, ಎಲ್ಲರೂ ಇದರ ಸದುಪಯೋಗವನ್ನು ಪಡೆದುಕೊಳ್ಳುವಲ್ಲಿ ಮುಂದಾಗಬೇಕೆಂದರು.
ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ದೇವೇಂದ್ರ ಪಂಡಿತ್, ಅಪರ ನ್ಯಾಯಾಧೀಶ ಕೋಟೆಪ್ಪ ಕಾಂಭ್ಳೆ, ನ್ಯಾಯಮೂರ್ತಿ ಜನಾರ್ಧನ್, ಜಗದೀಶ್ ಮುಂಬರಗಿ, ಶರಣಪ್ಪಯ್ಯ, ಉಪಾಧ್ಯಕ್ಷ ಡಿ.ವಿ.ಬೋರಯ್ಯ, ಬಿ.ಟಿ.ಶ್ಯಾಮಲ, ಕೆ.ಹನುಮಂತಪ್ಪ, ಡಿ.ಜಯಶೀಲರೆಡ್ಡಿ, ಹಿರೇಮಧುರೆ ಆನಂದಪ್ಪ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
