ಬೆಂಗಳೂರು:
ರವಿ ಪೂಜಾರಿಯನ್ನು ಹೇಗಾದ್ರು ಮಾಡಿ ಕರ್ನಾಟಕಕ್ಕೆ ಕರೆತರಲು ರಾಜ್ಯ ಪೊಲೀಸರು ಪಣ ತೊಟ್ಟಿದ್ದಾರೆ. ಈ ಹಿನ್ನೆಲೆ ರಾಜ್ಯ ಪೊಲೀಸರು ರವಿ ಪೂಜಾರಿಯನ್ನು ಕರ್ನಾಟಕಕ್ಕೆ ತರಲು ಸಿಬಿಐ ಮೊರೆ ಹೋಗಿದ್ದಾರೆ.
ರವಿ ಪೂಜಾರಿಯನ್ನು ಭಾರತಕ್ಕೆ ಕರೆತರಲು ಇರುವ ಏಕೈಕ ಮಾರ್ಗ ಗಡಿಪಾರು ಮನವಿ. ಹೀಗಾಗಿ ರವಿ ಗಡಿಪಾರಿಗೆ ಸೆನೆಗಲ್ ಕೋರ್ಟ್ಗೆ ಭಾರತ ಗೃಹ ಸಚಿವಾಲಯದ ಮೂಲಕ ಮನವಿ ಸಲ್ಲಿಸಲು ಮುಂದಾಗಿದ್ದಾರೆ.
ಈ ಹಿನ್ನೆಲೆ ಅವಶ್ಯ ದಾಖಲೆಗಳನ್ನ ಕ್ರೋಢೀಕರಿಸಲು ಕೇಂದ್ರ ಗೃಹ ಸಚಿವಾಲಯ ಸಜ್ಜಾಗಿದೆ. ಹಾಗೆಯೇ ಕರ್ನಾಟಕದ ಕೇಸ್ ಫೈಲ್ಗಳನ್ನು ಸೆನೆಗಲ್ ದೇಶದ ಫ್ರೆಂಚ್ ಭಾಷೆಗೆ ತರ್ಜುಮೆ ಮಾಡಲು ಎಡಿಜಿಪಿ ಅಮರ್ ಕುಮಾರ್ ರೆಡಿಯಾಗಿದ್ದಾರೆ.
ರವಿ ಪೂಜಾರಿ ವಿರುದ್ಧ ಕರ್ನಾಟಕದಲ್ಲಿ 49 ಪ್ರಕರಣ ದಾಖಲಾಗಿದೆ. ಬೆಂಗಳೂರಲ್ಲಿ 39, ಮಂಗಳೂರಲ್ಲಿ 10 ಕೇರಳ, ಗುಜರಾತ್, ಮುಂಬೈ ಸೇರಿ ಅರವತ್ತಕ್ಕೂ ಹೆಚ್ಚು ಪ್ರಕರಣಗಳಿವೆ. ಹೀಗಾಗಿ ಪೂಜಾರಿ ವಿರುದ್ಧ ರೆಡ್ ಕಾರ್ನರ್ ನೋಟಿಸ್ನ್ನು ವಿದೇಶಾಂಗ ಇಲಾಖೆ ಹೊರಡಿಸಿತ್ತು.
ಸದ್ಯ ರವಿ ಪೂಜಾರಿಯನ್ನು ಸೆನೆಗಲ್ ಪೊಲೀಸರು ಬಂಧಿಸಿದ್ದಾರೆ. ಈ ಹಿನ್ನೆಲೆ ವಿದೇಶಾಂಗ ಇಲಾಖೆ ಅಧಿಕಾರಿಗಳ ಮೂಲಕ ಸೆನೆಗಲ್ ದೇಶದ ವಿದೇಶಾಂಗ ಅಧಿಕಾರಿಗಳ ಸಂಪರ್ಕ ಮಾಡಬೇಕು. ನಂತರ ಸೆನೆಗಲ್ ದೇಶದಲ್ಲಿ ಫ್ರೆಂಚ್ ಆಡಳಿತ ಭಾಷೆ ಆಗಿರೋದ್ರಿಂದ ಪೂಜಾರಿ ಕೇಸ್ಗಳ ಮಾಹಿತಿಯನ್ನ ಫ್ರೆಂಚ್ ಭಾಷೆಗೆ ತರ್ಜುಮೆ ಮಾಡಿ ನೀಡಬೇಕು.
ಅಲ್ಲದೇ ರವಿ ಪೂಜಾರಿಯ ಬೆರಳಚ್ಚು, ಮುಖ ಚಹರೆ ಸೇರಿ ಆತನನ್ನ ಗುರುತಿಸುವ ಪ್ರಕ್ರಿಯೆ ನಡೆಸಲಾಗುತ್ತದೆ. ರವಿ ಪೂಜಾರಿ ಭಾರತ ಹಸ್ತಾಂತರಕ್ಕೆ ಇಷ್ಟೆಲ್ಲ ಪ್ರಕ್ರಿಯೆ ನಡೆಯಲಿದ್ದು, 15 ರಿಂದ 20 ದಿನಗಳು ಬೇಕಾಗುತ್ತವೆ ಎಂದು ಉನ್ನತ ಮೂಲಗಳು ತಿಳಿಸಿವೆ.







