ಬೆಂಗಳೂರು
ಡಿಸೆಂಬರ್ 5ರಂದು ನಡೆಯಲಿರುವ ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಪ್ರಮುಖವಾಗಿ ಮೂವರಿಗೆ ರಾಜಕೀಯ ಭವಿಷ್ಯವನ್ನು ತೀರ್ಮಾನಿಸುವ ಚುನಾವಣೆಯಾಗಲಿದೆ.
ಅಧಿಕಾರ ಉಳಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಇದ್ದರೆ ಪಕ್ಷದಲ್ಲಿ ತಮ್ಮ ವರ್ಚಸ್ಸು ಹೆಚ್ಚಿಸಿಕೊಳ್ಳುವ ತವಕ ಸಿದ್ದರಾಮಯ್ಯನವರದ್ದು. ಎಚ್.ಡಿ.ಕುಮಾರಸ್ವಾಮಿಗೆ ಪಕ್ಷವನ್ನು ಉಳಿಸಿಕೊಳ್ಳುವ ಅನಿವಾರ್ಯತೆ ಇದೆ.ಹೀಗಾಗಿ ಈ ಉಪಚುನಾವಣೆ ಮೂರು ಪಕ್ಷಗಳ ಪ್ರಮುಖ ಮೂವರಿಗೆ ಒಂದಲ್ಲ ಒಂದು ರೀತಿಯಲ್ಲಿ ಅಗ್ನಿಪರೀಕ್ಷೆಯೆಂದೇ ಹೇಳಲಾಗುತ್ತಿದೆ. ಆದ್ದರಿಂದ ಮೂವರು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಸುಡುವ ಬಿಸಿಲನ್ನೂ ಲೆಕ್ಕಿಸದೆ ಏಕಾಂಗಿಯಾಗಿ ಉಪಚುನಾವಣೆಯ ಕುರುಕ್ಷೇತ್ರದಲ್ಲಿ ಮತ ಬೇಟೆ ಆರಂಭಿಸಿದ್ದಾರೆ.
ಯಡಿಯೂರಪ್ಪರಿಗೆ ಏಕೆ ಅನಿವಾರ್ಯ?:
ಮುಂದಿನ ಮೂರುವರೆ ವರ್ಷ ತಮ್ಮ ಕುರ್ಚಿಗೆ ಯಾವುದೇ ಕಂಟಕ ಎದುರಾಗಬಾರದೆಂಬ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉಪಸಮರದಲ್ಲಿ ಕನಿಷ್ಠ 8 ಸ್ಥಾನಗಳನ್ನಾದರೂ ಗೆಲ್ಲಲೇಬೇಕಾದ ಸಂದಿಗ್ಧ ಸ್ಥಿತಿಯಲ್ಲಿದ್ದಾರೆ.ಒಂದೆರಡು ಸ್ಥಾನಗಳು ಆಚೀಚೆಯಾದರೂ ಅಧಿಕಾರಕ್ಕೆ ಕುತ್ತು ಬರಲಿದೆ ಎಂಬುದನ್ನು ಅರಿತಿರುವ ಅವರು ಚುನಾವಣೆ ಗೆಲ್ಲಲು ಎಲ್ಲ ರೀತಿಯ ಕಸರತ್ತುಗಳನ್ನು ನಡೆಸುತ್ತಿದ್ದಾರೆ.
ಚುನಾವಣಾ ದಿನಾಂಕ ಘೋಷಣೆಗೂ ಮುನ್ನವೇ 15 ವಿಧಾನಸಭಾ ಕ್ಷೇತ್ರಗಳಲ್ಲಿ ಅಭಿವೃದ್ದಿ ಕಾಮಗಾರಿ ನೆಪದಲ್ಲಿ ಒಂದು ಸುತ್ತಿನ ಪ್ರಚಾರವನ್ನೇ ಆರಂಭಿಸಿದ್ದ ಯಡಿಯೂರಪ್ಪ, ಕನಿಷ್ಠ 12 ಸ್ಥಾನಗಳನ್ನು ಗೆಲ್ಲುವ ಗುರಿ ಇಟ್ಟುಕೊಂಡಿದ್ದಾರೆ.ಹಲವರ ವಿರೋಧದ ನಡುವೆಯೂ ಅನರ್ಹ ಶಾಸಕರಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿರುವ ಅವರು ಅಭ್ಯರ್ಥಿಗಳ ಗೆಲುವಿಗೆ ಎಲ್ಲ ರೀತಿಯ ಸಂಪನ್ಮೂಲ, ಶಕ್ತಿ ಧಾರೆ ಎರೆಯುತ್ತಿದ್ದಾರೆ.
ಚುನಾವಣೆಗೂ ಮುನ್ನವೇ ಪಕ್ಷದಲ್ಲಿ ಸಾಕಷ್ಟು ಗೊಂದಲಗಳಿದ್ದರೂ ಇದೀಗ ಒಗ್ಗಟ್ಟಿನ ಪ್ರದರ್ಶನ ಮಾಡುತ್ತಿವುದು ಬಿಎಸ್ವೈಗೆ ಆನೆಬಲ ತಂದಿದೆ. ವಿಧಾನಸಭೆಯಲ್ಲಿ ಪ್ರಸ್ತುತ 105 ಸದಸ್ಯರನ್ನು ಹೊಂದಿರುವ ಬಿಜೆಪಿ ಸರಳ ಬಹುಮತ ಪಡೆಯಲು 8 ಸದಸ್ಯರನ್ನು ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ.
ಉಪಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಸಿಎಂ ಶನಿವಾರದಿಂದ ಪ್ರತಿ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತಿದ್ದಾರೆ. ಈ ಚುನಾವಣಾ ಫಲಿತಾಂಶ ಅವರ ರಾಜಕೀಯ ಭವಿಷ್ಯವನ್ನು ತೀರ್ಮಾನಿಸಲಿದೆ.
ಸಿದ್ದರಾಮಯ್ಯನವರಿಗೂ ಅನಿವಾರ್ಯತೆ:
ಹೇಗಾದರೂ ಮಾಡಿ ಉಪಚುನಾವಣೆಯಲ್ಲಿ 10ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಲು ಮುಂದಾಗಿರುವ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರಿಗೂ ಇದು ಮಾಡು ಇಲ್ಲವೇ ಮಡಿ ಎನ್ನುವಂತಾಗಿದೆ.ಪಕ್ಷದಲ್ಲಿ ಹಲವರ ವಿರೋಧದ ನಡುವೆಯೂ ತಮ್ಮ ಬೆಂಬಲಿಗರಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿರುವ ಅವರು, ಸದ್ಯ ಏಕಾಂಗಿಯಾಗಿಯೇ ಅಭ್ಯರ್ಥಿಗಳ ಗೆಲುವಿಗೆ ಟೊಂಕ ಕಟ್ಟಿ ನಿಂತಿದ್ದಾರೆ.
ಮೂಲ-ವಲಸಿಗ- ಹಿರಿಯರ ಮುನಿಸಿನ ನಡುವೆಯೂ ಸಿದ್ದರಾಮಯ್ಯ ಒಬ್ಬಂಟಿಯಾಗಿ ಪ್ರಚಾರ ನಡೆಸುತ್ತಿದ್ದು, ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಲು ಕಾರ್ಯತಂತ್ರವನ್ನು ರೂಪಿಸುತ್ತಿದ್ದಾರೆ.ಬಿಜೆಪಿ ಬಹುಮತ ಪಡೆಯುವಲ್ಲಿ ವಿಫಲವಾದರೆ ಸಹಜವಾಗಿ ಯಡಿಯೂರಪ್ಪ ರಾಜೀನಾಮೆ ನೀಡಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಜೆಡಿಎಸ್ ಯಾರಿಗೂ ಬೆಂಬಲ ನೀಡದೆ ತಟಸ್ಥವಾಗಿ ಉಳಿದರೆ ಸರ್ಕಾರ ಪತನವಾಗುವುದು ಖಚಿತ.
ಒಂದು ವೇಳೆ ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಎದುರಾದರೆ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ಹುಮ್ಮಸ್ಸಿನಲ್ಲಿದ್ದಾರೆ ಸಿದ್ದರಾಮಯ್ಯ.ಉಪಚುನಾವಣೆಯಲ್ಲಿ 10ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದರೆ ಇದು ತಮ್ಮ ನಾಯಕತ್ವಕ್ಕೆ ಸಿಕ್ಕ ಜಯ ಎಂಬುದನ್ನು ಬಿಂಬಿಸಿಕೊಳ್ಳುವ ಪ್ರಯತ್ನವೂ ಸಹ ನಡೆಯುತ್ತಿದೆ.
ಈ ಉಪಚುನಾವಣೆಯು ಸಿದ್ದರಾಮಯ್ಯನವರಿಗೆ ಪಕ್ಷದಲ್ಲಿ ತಾವು ಎಷ್ಟು ಪ್ರಬಲರು ಎಂಬುದನ್ನು ರುಜುವಾತು ಮಾಡಲು ಒಂದು ಅವಕಾಶವಾಗಿದೆ. ಹಾಗಾಗಿ ಶತಾಯಗತಾಯ ಚುನಾವಣೆಯಲ್ಲಿ ಗೆಲ್ಲಲು ಸಿದ್ದರಾಮಯ್ಯ ಅಖಾಡಕ್ಕೆ ಧುಮುಕಿದ್ದಾರೆ.
ಜೆಡಿಎಸ್ಗೆ ಅಸ್ತಿತ್ವದ ಪ್ರಶ್ನೆ:
ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯನವರಿಗೆ ಒಂದು ರೀತಿಯ ಸಮಸ್ಯೆಯಾದರೆ ದಳಪತಿ ಎಚ್.ಡಿ.ಕುಮಾರಸ್ವಾಮಿಗೆಇನ್ನೊಂದು ರೀತಿಯ ಬಿಕ್ಕಟ್ಟು ಎದುರಾಗಿದೆ.ಉಪಚುನಾವಣೆಯಲ್ಲಿ ಕನಿಷ್ಠ 5 ಕ್ಷೇತ್ರಗಳನ್ನಾದರೂ ಗೆದ್ದು ಮತ್ತೆ ಕಿಂಗ್ಮೇಕರ್ ಆಗಲು ಹರಸಾಹಸಪಡುತ್ತಿದ್ದಾರೆ. ಬಿಜೆಪಿ ಬಹುಮತ ಪಡೆಯಲು ವಿಫಲವಾದರೆ ಸಹಜವಾಗಿ ಜೆಡಿಎಸ್ಗೆ ಭಾರೀ ಡಿಮ್ಯಾಂಡ್ ಬರಲಿದೆ.
ಇದನ್ನು ಅರಿತಿರುವ ಕುಮಾರಸ್ವಾಮಿ ಜೆಡಿಎಸ್ನ ಭದ್ರಕೋಟೆಗಳಾದ ಹುಣಸೂರು, ಕೆ.ಆರ್.ಪೇಟೆ, ಮಹಾಲಕ್ಷ್ಮಿಲೇಔಟ್, ಚಿಕ್ಕಬಳ್ಳಾಪುರ ಮತ್ತು ಯಶವಂತಪುರ ಕ್ಷೇತ್ರಗಳನ್ನು ಗೆಲ್ಲಲು ನಾನಾ ರೀತಿಯ ತಂತ್ರ-ಪ್ರತಿ ತಂತ್ರಗಳನ್ನು ಹೆಣೆಯುತ್ತಿದ್ದಾರೆ.ಆದರೆ ಕುಮಾರಸ್ವಾಮಿ ಅವರ ಕೆಲವು ದ್ವಂದ್ವ ಹೇಳಿಕೆಗಳು ಪಕ್ಷದ ಶಾಸಕರಲ್ಲೇ ಗೊಂದಲ ಉಂಟು ಮಾಡುತ್ತಿವೆ. ನಾನು ಯಾವುದೇ ಕಾರಣಕ್ಕೂ ಬಿಜೆಪಿ ಸರ್ಕಾರವನ್ನು ಅಸ್ಥಿರಗೊಳಿಸಲು ಹೋಗುವುದಿಲ್ಲ ಎಂದು ಹೇಳಿಕೆ ನೀಡಿದ್ದರು. ಮತ್ತೊಂದು ಬಾರಿ ಬಿಜೆಪಿ ಜೊತೆ ಕೈ ಜೋಡಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದರು.
ಇನ್ನು ನಿನ್ನೆಯಷ್ಟೇ ಡಿ.9ರ ನಂತರ ನಾನು ಯಾರಿಗೆ ಬೆಂಬಲ ನೀಡುತ್ತೇನೆ ಎಂಬುದನ್ನು ಕಾದು ನೋಡಿ ಎಂದು ಕುತೂಹಲ ಹೆಚ್ಚಿಸಿದ್ದರು. ಹೀಗೆ ದಿನಕ್ಕೊಂದು ಗೊಂದಲದ ಹೇಳಿಕೆ ನೀಡುತ್ತಿರುವ ಕಾರಣ ಜೆಡಿಎಸ್ ಶಾಸಕರಲ್ಲೇ ಗೊಂದಲ ಸೃಷ್ಟಿಯಾಗಿದೆ.ಇನ್ನು ಬಿಜೆಪಿ 12ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಅಧಿಕಾರ ಭದ್ರಪಡಿಸಿಕೊಂಡರೆ ಜೆಡಿಎಸ್ನಲ್ಲಿ ಅಸಮಾಧಾನಗೊಂಡಿರುವ ಶಾಸಕರು ಕಮಲದತ್ತ ಮುಖ ಮಾಡಬಹುದೆಂಬ ಆತಂಕವೂ ಇದೆ. ಜೆಡಿಎಸ್ಗೆ ಪಕ್ಷವನ್ನೇ ಉಳಿಸಿಕೊಳ್ಳುವ ಸವಾಲು ಎದುರಾಗಿದೆ.
ಹೀಗೆ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ರಾಜ್ಯದ ಮೂವರು ಪ್ರಮುಖರಿಗೆ ತಮ್ಮ ತಮ್ಮ ಅಸ್ತಿತ್ವ ಉಳಿಸಿಕೊಳ್ಳುವ, ಪ್ರತಿಷ್ಠೆಯ ಸವಾಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
