ಚಿಕ್ಕನಾಯಕನಹಳ್ಳಿ
ಅನೇಕ ಜನರು ತಾಲ್ಲೂಕು ಕಛೇರಿಗೆ ಆಗಮಿಸಿ ಸಾಗುವಳಿ ಚೀಟಿ ಕೊಟ್ಟರೂ ನಮಗೆ ಖಾತೆಯಾಗಿಲ್ಲ ಎಂಬ ದೂರನ್ನು ನೀಡಿದರು. ಇಂತಹ ಹಲವು ಪ್ರಕರಣಗಳು ಹಾಗೂ ಪಹಣಿ ತಿದ್ದುಪಡಿ, ಪಿಂಚಣಿ ಅದಾಲತ್ನಂತಹ ಸಮಸ್ಯೆಗಳನ್ನು ಬಗೆಹರಿಸಲು ಅಧಿಕಾರಿಗಳೆ ಜನರ ಮಧ್ಯೆ ಆಗಮಿಸಿ ಸಮಸ್ಯೆ ಪರಿಹರಿಸುವ ಉದ್ದೇಶವೆ ಕಂದಾಯ ಅದಾಲತ್, ಜನಸ್ಪಂದನ ಸಭೆ ಎಂದು ತಹಸೀಲ್ದಾರ್ ತೇಜಸ್ವಿನಿ ತಿಳಿಸಿದರು.
ತಾಲ್ಲೂಕಿನ ಕಂದಿಕೆರೆ ಹೋಬಳಿ ಕಾತ್ರಿಕೆಹಾಲ್ ಗ್ರಾಮದಲ್ಲಿ ಏರ್ಪಡಿಸಿದ್ದ ಜನಸ್ಪಂದನ ಕಾರ್ಯಕ್ರಮ, ಕಂದಾಯ ಅದಾಲತ್, ಪಿಂಚಣಿ ಅದಾಲತ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಾಲ್ಲೂಕಿನ ಕಸಬಾ, ಕಂದಿಕೆರೆ, ಹುಳಿಯಾರು, ಹಂದನಕೆರೆ ಹೋಬಳಿಗಳಲ್ಲಿ ಜನಸ್ಪಂದನ ಸಭೆ ನಡೆದಿದೆ. ಶೆಟ್ಟಿಕೆರೆ ಹೋಬಳಿಯಲ್ಲಿ ಜನಸ್ಪಂದನ ಮಾಡುವುದು ಬಾಕಿಯಿದೆ. ಎಲ್ಲಾ ಕಡೆಯೂ ಜನರ ಸಮಸ್ಯೆ ಆಲಿಸಿ ಪೂರ್ಣ ಪ್ರಮಾಣದಲ್ಲಿ ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ಪಹಣಿ ತಿದ್ದುಪಡಿ, ಪಿಂಚಣಿ ಅದಾಲತ್ನಲ್ಲಿ ಸಾರ್ವಜನಿಕರು ಹಲವು ಬಾರಿ ಅರ್ಜಿ ಸಲ್ಲಿಸಿದರೂ ಸಮಸ್ಯೆ ಬಗೆಹರಿದಿರುವುದಿಲ್ಲ. ಅಂತಹವರ ಬ್ಯಾಂಕ್ ಅಕೌಂಟ್, ಆಧಾರ್ ಅಪ್ಡೇಟ್ ಆಗಿರುವುದಿಲ್ಲ. ಹಾಗಾಗಿ ಮಾಸಾಶನ ನಿಂತಿರುತ್ತದೆ. ಇಂತಹ ಪ್ರಕರಣಗಳನ್ನು ಪರಿಶೀಲಿಸಿ ಹಾಗೂ ಹೊಸ ಅರ್ಜಿಗಳನ್ನು ಪಡೆದು ಇದುವರೆವಿಗೂ ಯಾವುದೇ ಸೌಲಭ್ಯವನ್ನು ಪಡೆಯದೆ ಇರುವ ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯ ದೊರಕಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ತಾ.ಪಂ.ಸದಸ್ಯ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿಂಗದಹಳ್ಳಿ ರಾಜ್ಕುಮಾರ್ ಮಾತನಾಡಿ, ಕಂದಾಯ ಅದಾಲತ್ ಇದುವರೆವಿಗೂ ಹೋಬಳಿ ಕೇಂದ್ರಗಳಲ್ಲಿ ಮಾತ್ರ ಮಾಡುತ್ತಿದ್ದರೂ, ಹಳ್ಳಿಗಳಲ್ಲಿರುವ ಜನರಿಗೆ ಹೋಬಳಿ ಕೇಂದ್ರಗಳಿಗೆ ಹೋಗಲು ಕಷ್ಟವಾಗುತ್ತದೆ ಎಂದು ಶಾಸಕರ ಗಮನಕ್ಕೆ ತಂದಾಗ, ಕಾತ್ರಿಕೆಹಾಳ್ ಗ್ರಾಮದಲ್ಲೂ ಕಂದಾಯ ಅದಾಲತ್ ಮಾಡಲು ತಹಸೀಲ್ದಾರ್ಗೆ ಸೂಚಿಸಿದ್ದಾರೆ.
ಹಾಗಾಗಿ ಇಂದು ಇಲ್ಲಿ ಕಂದಾಯ ಅದಾಲತ್ ಹಾಗೂ ಜನಸ್ಪಂದನ ಸಭೆ ಹಮ್ಮಿಕೊಂಡಿದ್ದಾರೆ ಎಂದ ಅವರು, ಪಿಂಚಣಿ ಅದಾಲತ್, ಪಹಣಿ ತಿದ್ದುಪಡಿಯಲ್ಲಿ ಅನೇಕ ಲೋಪದೋಷಗಳಿರುವ ಹಾಗೂ ಹೆಸರು ಬದಲಾಗಿರುವ ಸಮಸ್ಯೆಗಳನ್ನು ಸಾರ್ವಜನಿಕರು ನೀಡಿದರೆ ತಹಸೀಲ್ದಾರರು ಕಂದಾಯ ಅದಾಲತ್ನಲ್ಲಿ ಬಗೆಹರಿಸುತ್ತಾರೆ ಎಂದ ಅವರು, ಪ್ರತಿಯೊಬ್ಬರಿಗೂ ಸ್ಪಂದಿಸುತ್ತಿರುವ ತಹಸೀಲ್ದಾರ್ ತೇಜಸ್ವಿನಿರವರು, ಗ್ರಾಮಲೆಕ್ಕಾಧಿಕಾರಿಗಳನ್ನು ಅವರ ಕಾರ್ಯಕ್ಷೇತ್ರದಲ್ಲಿ ಇರುವಂತೆ ಆದೇಶ ಮಾಡಬೇಕು.
ಇದರಿಂದ ರೈತರು ಸಣ್ಣಪುಟ್ಟ ಕೆಲಸಗಳಿಗೂ ತಾಲ್ಲೂಕು ಕೇಂದ್ರಗಳಿಗೆ ಬರುವುದು, ಅಧಿಕಾರಿಗಳಿಗಾಗಿ ಅಲೆಯುವುದು ತಪ್ಪುತ್ತದೆ ಎಂದು ಮನವಿ ಮಾಡಿದರು. ಜಿ.ಪಂ.ಸದಸ್ಯೆ ಮಂಜುಳಮ್ಮ ಮಾತನಾಡಿ, ಶಾಸಕರು, ತಹಸೀಲ್ದಾರ್ರವರು ಹೋಬಳಿ ಕೇಂದ್ರದಲ್ಲಿ ಕಂದಾಯ ಅದಾಲತ್ ಹಾಗೂ ಜನಸ್ಪಂದನ ಸಭೆ ಮಾಡುತ್ತಿರುವುದರಿಂದ ರೈತರಿಗೆ ಸಾಕಷ್ಟು ಅನುಕೂಲವಾಗುತ್ತಿದೆ. ಪಿಂಚಣಿ ಅದಾಲತ್ಗಾಗಿ ರೈತರು ಕಛೇರಿಗೆ ಅಲೆಯುವುದು ತಪ್ಪುತ್ತಿದೆ, ತಮ್ಮ ಊರಿನಲ್ಲಿಯೇ ಅದಾಲತ್ ನಡೆಯುವುದರಿಂದ ಅನೇಕ ಸಮಸ್ಯೆಗಳು ಸ್ಥಳದಲ್ಲೇ ಬಗೆಹರಿಯುತ್ತವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತಾ.ಪಂ.ಸದಸ್ಯೆ ಇಂದಿರಾಕುಮಾರಿ, ಕೇಶವಮೂರ್ತಿ, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ನಾರಾಯಣಸ್ವಾಮಿ, ಬಿಇಓ ಕಾತ್ಯಾಯಿನಿ, ಕೃಷಿ ಅಧಿಕಾರಿ ಉಮಾಶಂಕರ್ ಗ್ರಾ.ಪಂ.ಅಧ್ಯಕ್ಷ ನಾಗರಾಜು, ಕರಿಯಮ್ಮ, ಉಮೇಶ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
