ಇನ್ನು ಮುಂದೆ ಗ್ರಾಮ ಪಂಚಾಯತಿಗಳಲ್ಲೂ ಕೆಡಿಪಿ ಸಭೆ : ಕೃಷ್ಣಭೈರೇಗೌಡ

ಬೆಂಗಳೂರು

      ರಾಜ್ಯ,ಜಿಲ್ಲೆ ಹಾಗೂ ತಾಲ್ಲೂಕು ಮಟ್ಟಗಳಲ್ಲಿ ನಡೆಯುತ್ತಿದ್ದ ಕೆಡಿಪಿ ಸಭೆಗಳನ್ನು ಇನ್ನು ಮುಂದೆ ಗ್ರಾಮಪಂಚಾಯತ್‍ಗಳಲ್ಲೂ ನಡೆಸಲು ಸರ್ಕಾರ ಅಧಿಕಾರ ನೀಡಿದೆ.ಆ ಮೂಲಕ ಆಡಳಿತವನ್ನು ಜನರ ಮನೆ ಬಾಗಿಲಿಗೆ ತಲುಪಿಸಲು ಸರ್ಕಾರ ನಿರ್ಧರಿಸಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೃಷ್ಣ ಭೈರೇಗೌಡ ಅವರು ಹೇಳಿದ್ದಾರೆ.

      ಇಂದು ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು’ ಉಪಾಧ್ಯಕ್ಷರು ಮತ್ತು ಸದಸ್ಯರು ಗಳೊಂದಿಗೆ ಸಂವಾದ ನಡೆಸುತ್ತಿದ್ದ ಸಂದರ್ಭದಲ್ಲಿ ಅವರು ಈ ವಿಚಾರವನ್ನು ಪ್ರಕಟಿಸಿದರಲ್ಲದೆ ಈ ಸಂಬಂಧ ಈಗಾಗಲೇ ಅಗತ್ಯ ಆದೇಶವನ್ನು ಹೊರಡಿಸಲಾಗಿದೆ ಎಂದು ವಿವರಿಸಿದರು. .

      ಸ್ಯಾಟ್ ಕಾಂ ಮೂಲಕ ಜಕ್ಕೂರಿನಲ್ಲಿರುವ ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ ಆಯೋಜಿಸಲಾದ ಈ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ಬದಲಾಗುತ್ತಿರುವ ಕಾಲಘಟ್ಟದಲ್ಲಿ ಜನರನ್ನು ತಲುಪಲು ಏನೇನು ಸಾಧ್ಯವೋ?ಅದನ್ನು ಸರ್ಕಾರ ಮಾಡಬೇಕು ಎಂದರು.

      ಗ್ರಾಮ ಪಂಚಾಯತ್ ಳಲ್ಲಿ ತೆರಿಗೆ ವಸೂಲಾತಿಗೆ ಹೆಚ್ಚಿನ ಒತ್ತು ಕೊಡಬೇಕು , ಈ ತೆರಿಗೆಗಳಿಂದ ಗ್ರಾಮ ಪಂಚಾಯಿತಿಗಳು ಆರ್ಥಿಕವಾಗಿ ಬಲಗೊಳ್ಳುತ್ತವೆ ಮತ್ತು ತಮಗೆ ಬೇಕಾದ ಕಾರ್ಯಕ್ರಮಗಳನ್ನು ತಾವೇ ಹಮ್ಮಿಕೊಳ್ಳಲು ಉಪಯೋಗವಾಗುತ್ತದೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು .ರಾಜ್ಯದ ಅನೇಕ ಗ್ರಾಮ ಪಂಚಾಯತ್ ಗಳು ಕಳೆದ ವರ್ಷದಿಂದ ತೆರಿಗೆ ವಸೂಲಾತಿಗೆ ಹೆಚ್ಚಿನ ಗಮನ ನೀಡಿದ್ದರ ಫಲವಾಗಿ ಅನೇಕ ಗ್ರಾಮ ಪಂಚಾಯತ್ ಗಳು ಗಮನಾರ್ಹವಾದ ಪ್ರಮಾಣದಲ್ಲಿ ತೆರಿಗೆಯನ್ನು ವಸೂಲಿ ಮಾಡಿವೆ ಎಂದವರು ಹರ್ಷ ವ್ಯಕ್ತಪಡಿಸಿದರು.

     ಇನ್ನೂ ಕೆಲವು ಗ್ರಾಮ ಪಂಚಾಯತ್ ಗಳಲ್ಲಿ ಕಳೆದ ವರ್ಷದ ಗುರಿಯನ್ನು ಮುಟ್ಟುವುದರ ಜೊತೆಗೆ ಅದರ ಹಿಂದಿನ ಬಾಕಿಯನ್ನು ವಸೂಲಿ ಮಾಡುವಲ್ಲಿಯೂ ಸಹ ಪ್ರಗತಿ ಸಾಧಿಸಿವೆ,ಇದನ್ನು ಮಾದರಿಯಾಗಿ ಇರಿಸಿಕೊಂಡು ಉಳಿದ ಎಲ್ಲ ಗ್ರಾಮ ಪಂಚಾಯತ್ ಗಳು ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.

       ಕಳೆದ ವರ್ಷ ಒಟ್ಟು 462 ಕೋಟಿ ರೂಪಾಯಿಗಳನ್ನು ಗ್ರಾಮ ಪಂಚಾಯತ್ ಗಳು ತೆರಿಗೆ ಬಾಬ್ತಿನಲ್ಲಿ ವಸೂಲಿ ಮಾಡಿವೆ ಎಂದು ಅವರು ತಿಳಿಸಿದರು .ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿರುವ ಸ್ವಚ್ಛಮೇವ ಜಯತೆ ಆಂದೋಲನವನ್ನು ಎಲ್ಲ ಗ್ರಾಮ ಪಂಚಾಯತ್ ಗಳು ಗಂಭೀರವಾಗಿ ತೆಗೆದುಕೊಳ್ಳಬೇಕು, ತಮ್ಮ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಸದ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡಲು ಪ್ರಯತ್ನಿಸಬೇಕು

      ಮುಖ್ಯವಾಗಿ ಪ್ಲಾಸ್ಟಿಕ್ ಬಳಕೆ ಮಾಡದಂತೆ ಗ್ರಾಮಸ್ಥರನ್ನು ಮನವೊಲಿಸ ಬೇಕು. ಪ್ಲಾಸ್ಟಿಕ್ ತ್ಯಾಜ್ಯವನ್ನು ಗ್ರಾಮ ಪಂಚಾಯಿತಿಗಳೇ ಸಂಗ್ರಹಿಸಿ ಅವುಗಳನ್ನು ಬೇಕಾ ಬೇಕಾದವರಿಗೆ ಮಾರಾಟ ಮಾಡಲು ಕ್ರಮ ಕೈಗೊಳ್ಳಬೇಕು ಎಂದರು.ಹಸಿ ಕಸ ಮತ್ತು ಒಣ ಕಸ ಗಳ ಬಗ್ಗೆ ಜನರಿಗೆ ಅರಿವು ಮೂಡಿಸಿ ಅವೆರಡನ್ನು ಬೇರ್ಪಡಿಸಿ ಇಡುವುದರ ಬಗ್ಗೆ ಜಾಗೃತಿ ತರಬೇಕು ಎಂದ ಅವರು,ಅಗತ್ಯ ಇರುವ ಕಡೆ ಸಾಮುದಾಯಿಕ ಹಸಿ ತಿಪ್ಪೆಗಳನ್ನು ಮಾಡುವುದರ ಮೂಲಕ ಗೊಬ್ಬರವನ್ನೂ ಸಹ ತಯಾರಿಸಬಹುದು ಎಂದು ಸಲಹೆ ನೀಡಿದರು.ನೈರ್ಮಲ್ಯ ಕುರಿತಂತೆ ಈ ಅಂಶಗಳನ್ನು ಜನರಿಗೆ ಮನದಟ್ಟು ಮಾಡಿಕೊಡಲು ಸ್ವಸಹಾಯ ಗುಂಪುಗಳು ಮತ್ತು ಸ್ಥಳೀಯ ಯುವ ಜನರ ಗುಂಪುಗಳನ್ನು ತಂಡಗಳನ್ನಾಗಿ ರಚನೆ ಮಾಡಬಹುದು ಎಂದು ಅವರು ತಿಳಿಸಿದರು.

       ಜಲಾಮೃತ ಯೋಜನೆಯನ್ನು ಗ್ರಾಮ ಪಂಚಾಯತ್ ಗಳು ಗಂಭೀರವಾಗಿ ಪರಿಗಣಿಸಬೇಕು , ತಮ್ಮ ವ್ಯಾಪ್ತಿಯಲ್ಲಿ ನರೇಗಾ ಯೋಜನೆ ಬಳಸಿಕೊಂಡು ಚೆಕ್ ಡ್ಯಾಂಗಳನ್ನು ನಿರ್ಮಿಸಬೇಕು ,ಕೆರೆ ಕಲ್ಯಾಣಿಗಳ ಪುನಶ್ಚೇತನಕ್ಕೆ ಒತ್ತು ಕೊಡಬೇಕು.

       ವಿಶೇಷವಾಗಿ ಮಲೆನಾಡಿನ ಬಯಲು ಸೀಮೆ ಪ್ರದೇಶಗಳು ಸಹ ಚೆಕ್ ಡ್ಯಾಂಗಳ ನಿರ್ಮಾಣ ಮತ್ತು ಕಿಂಡಿ ಅಣೆಕಟ್ಟುಗಳ ನಿರ್ಮಾಣಕ್ಕೆ ಮುಂದಾಗಬೇಕು ,ಬೋರ್‍ವೆಲ್ ರೀಚಾರ್ಜ್ ಪಿಟ್ ಗಳ ನಿರ್ಮಾಣಕ್ಕೆ ಆದ್ಯತೆ ನೀಡಬೇಕು ,ಇದರಿಂದ ನೀರಿನ ಕೊರತೆಯನ್ನು ಸ್ವಲ್ಪ ಮಟ್ಟಿಗೆ ನೀಗಿಸಬಹುದಾಗಿದೆ ಎಂದು ಅವರು ಕಿವಿಮಾತು ಹೇಳಿದರು .

      ಇದರ ಜೊತೆ ಜೊತೆಗೆ ಜನರಲ್ಲಿ ನೀರಿನ ಮಿತ ಬಳಕೆ ಮತ್ತು ನೀರಿನ ಸಂಗ್ರಹಣೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಅವರು ತಿಳಿಸಿದರು .ಹಾಗೆಯೇ ಹಸಿರೀಕರಣಕ್ಕೆ ಬೇಕಾದ ಕ್ರಮಗಳನ್ನು ಕೈಗೊಳ್ಳಬೇಕು ಪ್ರತಿ ಗ್ರಾಮ ಪಂಚಾಯತ್‍ಗಳಲ್ಲೂ ಗಿಡ ನೆಡುವ ಕಾರ್ಯ ಕೈಗೊಳ್ಳಬೇಕು, ಮುಂದಿನ ವಎರಡು ತಿಂಗಳಲ್ಲಿ ಇಡೀ ರಾಜ್ಯದಲ್ಲಿ ಎರಡು ಕೋಟಿ ಸಸಿ ನೆಡುವ ಗುರಿಯನ್ನು ಹೊಂದಲಾಗಿದೆ ಎಂದು ಅವರು ತಿಳಿಸಿದರು .

      ವಾಟ್ಸಾಪ್ ಗ್ರೂಪ್ ಗಳ ರಚನೆ: ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ “ಗ್ರಾಮ ವಾಣಿ “ಎಂಬ ವಾಟ್ಸಪ್ ಗ್ರೂಪ್ ರಚನೆ ಮಾಡಬೇಕು ಎಂದರು.ಇದರಲ್ಲಿ ಇಲಾಖೆಗೆ ಹಾಗೂ ಸರ್ಕಾರದ ಎಲ್ಲ ಯೋಜನೆಗಳ ಮಾಹಿತಿ ದೈನಂದಿನ ಸುತ್ತೋಲೆ ಸೂಚನೆಗಳನ್ನು ಕಳುಹಿಸಬೇಕು ಇದರ ಜೊತೆಗೆ ಜನಜಾಗೃತಿ ಮೂಡಿಸುವ ಸಂದೇಶಗಳನ್ನು ಸಹ ಕಳುಹಿಸಬಹುದಾಗಿದೆ ಎಂದು ಅವರು ಹೇಳಿದರು .

        ಆದರೆ ,ಈ ಗುಂಪುಗಳಲ್ಲಿ ರಾಜಕೀಯ ಪ್ರೇರಿತ ಸುದ್ದಿಗಳು ಹಾಗೂ ಅನಾವಶ್ಯಕ ಸಂಗತಿಗಳನ್ನು ಹಾಕಬಾರದು ಎಂದು ಸಹ ಎಚ್ಚರಿಸಿದರು.ಈ ಸಂದರ್ಭದಲ್ಲಿ ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾ ಮಹಾದೇವನ್ ಪಂಚಾಯತ್ ರಾಜ್ ನಿರ್ದೇಶಕ ಯಾಲಕ್ಕಿಗೌಡ ಹಾಗೂ ಇಲಾಖೆಯ ಸಲಹೆಗಾರರಾಗಿ ನೇಮಕಗೊಂಡಿರುವ ಕೆಂಪೇಗೌಡ ಅವರು ಹಾಜರಿದ್ದರು .

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link