ತುಮಕೂರು
ನಗರ ಸ್ವಚ್ಛತೆ ಕಾಪಾಡುವುದು ಪ್ರತಿನಾಗರಿಕನ ಜವಾಬ್ದಾರಿ ಎಂದು ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ನಯಾಜ್ ತಿಳಿಸಿದರು.
ತುಮಕೂರು ಸ್ಮಾರ್ಟ್ ಸಿಟಿ ಹಾಗೂ ಮಹಾನಗರ ಪಾಲಿಕೆ ಸಹಕಾರದೊಂದಿಗೆ ಭಗೀರಥ ಮೈಸೂರು ಇವರು ಅನುಷ್ಟಾನಗೊಳಿಸುತ್ತಿರುವ ನಗರ ಸ್ವಚ್ಛತೆಗೆ ಸಂಬಂಧಿಸಿದಂತೆ ಹಮ್ಮಿಕೊಂಡಿದ್ದ ಮಾಹಿತಿ, ಶಿಕ್ಷಣ ಹಾಗೂ ಸಂವಹನ ಕಾರ್ಯಕ್ರಮದ ಅಂಗವಾಗಿ ನಗರದ ಚಿಕ್ಕಪೇಟೆ ವೃತ್ತದಲ್ಲಿಂದು ಏರ್ಪಡಿಸಿದ್ದ ಬೀದಿ ನಾಟಕ ಪ್ರದರ್ಶನಕ್ಕೆ ತಮಟೆ ಬಾರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ಸಾರ್ವಜನಿಕರು ತಮ್ಮ ಮನೆಯಲ್ಲಿ ಉತ್ಪತ್ತಿಯಾಗುವ ಕಸವನ್ನು ಹಸಿ ಹಾಗೂ ಒಣ ಕಸವನ್ನು ಪ್ರತ್ಯೇಕವಾಗಿ ವಿಂಗಡಿಸಿ ಪಾಲಿಕೆಯ ಕಸ ಸಂಗ್ರಹಿಸುವ ವಾಹನಗಳಿಗೆ ನೀಡಬೇಕು.
ಪಾಲಿಕೆ ಸದಸ್ಯೆ ದೀಪಶ್ರೀ ಮಾತನಾಡಿ ಸಾರ್ವಜನಿಕರು ತಮ್ಮ ಮನೆಯನ್ನು ಸ್ವಚ್ಛಗೊಳಿಸುವುದರ ಜೊತೆಗೆ ಮನೆಯ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕೆಂದು ತಿಳಿಸಿದರು.ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ಪುರುಷೋತ್ತಮ ಮಾತನಾಡಿ ಸ್ವಚ್ಛತೆ ಗಾಂಧೀಜಿ ಯವರ ಕನಸಾಗಿತ್ತು. ಅವರ ಆಶಯವನ್ನು ನನಸಾಗಿಸುವಲ್ಲಿ ನಾವೆಲ್ಲರೂ ಕೈಜೋಡಿಸೋಣ ಎಂದು ತಿಳಿಸಿದರು.
ಪಾಲಿಕೆ ಆರೋಗ್ಯಾಧಿಕಾರಿ ಡಾ||ನಾಗೇಶ್ಕುಮಾರ್ ಮಾತನಾಡಿ ತುಮಕೂರು ಸ್ವಚ್ಛತೆಗೆ ಪಾಲಿಕೆ ಮತ್ತು ಸ್ಮಾರ್ಟ್ ಸಿಟಿ ಹಾಗೂ ಭಗೀರಥ ಮೈಸೂರು ಹಮ್ಮಿಕೊಂಡಿರುವ ಅರಿವಿನ ಕಾರ್ಯಕ್ರಮಗಳನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯ ಮಹೇಶ್ ಟಿ.ಎಂ, ಸ್ಮಾರ್ಟ್ ಸಿಟಿ ಸಂಪರ್ಕಾಧಿಕಾರಿ ವರಪ್ರಸಾದ್, ಕಾರ್ಯಕ್ರಮ ಸಂಯೋಜಕ ಹಡವನಹಳ್ಳಿ ವೀರಣ್ಣಗೌಡ, ಪಾಲಿಕೆ ಪರಿಸರ ಸಂಯೋಜಕ ಮೃತ್ಯುಂಜಯ, ಆರೋಗ್ಯಾಧಿಕಾರಿ ಆನಂದ್, ಕಾಳಪ್ಪ ಸೊಸೊನೆ, ಮತ್ತಿತರರು ಉಪಸ್ಥಿತರಿದ್ದರು. ಡಮರುಗ ಉಮೇಶ್ ಮತ್ತು ತಂಡದವರು ಬೀದಿ ನಾಟಕದ ಮೂಲಕ ಸ್ವಚ್ಛತೆ ಕುರಿತು ಜನಜಾಗೃತಿ ಮೂಡಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
