ಹಿರಿಯೂರು :
ಕೇಂದ್ರಸರ್ಕಾರ ಅನೇಕ ಕಾರ್ಮಿಕರ ತ್ಯಾಗ, ಬಲಿದಾನ ಹೋರಾಟಗಳಿಂದ ಗಳಿಸಿದ ಕಾರ್ಮಿಕರ ಕಾನೂನುಗಳನ್ನು ಮಾರ್ಪಾಡು ಮಾಡಿ, ದುಡಿಯುತ್ತಿರುವ ಕಾರ್ಮಿಕರನ್ನು ಬೀದಿಪಾಲು ಮಾಡುತ್ತಿದೆ ಎಂಬುದಾಗಿ ಭಾರತ ಕಮ್ಯೂನಿಸ್ಟ್ಪಕ್ಷದ ಕಾರ್ಯದರ್ಶಿ ಹೇಳಿದರು.
ನಗರದ ಲಕ್ಷ್ಮಮ್ಮ ತಿಮ್ಮಯ್ಯಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಮಿಕದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಈ ದೇಶದ ಕಾರ್ಮಿಕರಿಗೆ ಅಚ್ಚೆ ದಿನ್ ಇಲ್ಲದಾಗಿದೆ. ಮೇಡೀನ್ ಇಂಡಿಯಾ, ಸ್ವಚ್ಛ ಭಾರತ್, ಡಿಜಿಟಲ್ ಇಂಡಿಯಾ ಕಾರ್ಯಕ್ರಮಗಳು ವಿಫಲವಾಗಿವೆ. ಕಪ್ಪುಹಣ, ಭಯೋತ್ಪಾದನೆ, ಭ್ರಷ್ಟಾಚಾರಗಳಿಗೆ ಪರಿಹಾರವೆಂದು ಹೇಳಲಾದ ನೋಟುರದ್ದತಿ ಕಾರ್ಯಕ್ರಮದಿಂದ ಕೋಟ್ಯಾಂತರ ಉದ್ಯಮಗಳು ನಾಶವಾಗಿವೆ. ಸಣ್ಣ ಕೈಗಾರಿಕೆಗಳು ನೆಲ ಕಚ್ಚಿವೆ ಎಂಬುದಾಗಿ ಅವರು ಆಪಾದಿಸಿದರು.
ಕಾಂ.ಶ್ರೀನಿವಾಸ್ ಮಾತನಾಡಿ, ಕಾರ್ಮಿಕ ಸಂಘಟನೆಗಳು ಹಲವಾರು ವರ್ಷಗಳಿಂದ ಕಾರ್ಮಿಕರ ಪರವಾಗಿ ಹೋರಾಟ ನಡೆಸಿದ್ದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾರ್ಮಿಕರ ಪರವಾಗಿ ಇಲ್ಲ. ಬದಲಾಗಿ ದೊಡ್ಡ ದೊಡ್ಡ ಬಂಡವಾಳಶಾಹಿಗಳ ಪರವಾಗಿ ಇದ್ದಾರೆ. ಸರ್ಕಾರಗಳು ಈ ಕಾರ್ಮಿಕ ವಿರೋಧಿನೀತಿಯನ್ನು ಬದಲಾಯಿಸಿಕೊಳ್ಳಬೇಕು ಎಂಬುದಾಗಿ ಆಗ್ರಹಿಸಿದರು.
ಕಾಂ. ತಿಪ್ಪಮ್ಮನವರು ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಎಲ್ಕೆಜಿ ಯುಕೆಜಿಯನ್ನು ಪ್ರಾರಂಭಿಸುವುದನ್ನು ಈ ಕೂಡಲೇ ನಿಲ್ಲಿಸಬೇಕು ಅಂಗನವಾಡಿ ಕೇಂದ್ರಗಳಲ್ಲೇ ಎಲ್ಕೆಜಿ, ಯುಕೆಜಿ ನಡೆಸುವಂತೆ ಸರ್ಕಾರಕ್ಕೆ ಒತ್ತಾಯಿಸಿ ಮೇ 30ರಂದು ಬೆಂಗಳೂರು ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂಬುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಕಿಸಾನ್ ಸಭಾದ ಅಧ್ಯಕ್ಷ ಕೆ.ರಾಮಯ್ಯ, ಕಟ್ಟಡ ಕಾರ್ಮಿಕರ ಮುಖಂಡ ರಂಗಸ್ವಾಮಿ, ಅಂಗನವಾಡಿ ಮುಖಂಡರಾದ ಮಲ್ಲಿಕಾ, ಚಿಂತಾಮಣಿ, ರಾಜೇಶ್ವರಿ, ಸುಜಾತ, ತಿಪ್ಪಮ್ಮ, ಕೆಂಚಮ್ಮ, ಯಶೋದಮ್ಮ, ಕೆ.ಇಂದಿರಾ, ಭಾಗ್ಯಮ್ಮ, ಮಂಜುಳಾ, ವಿಜಯಮ್ಮ ಇತರರು ಭಾಗವಹಿಸಿದ್ದರು. ಕೊನೆಯಲ್ಲಿ ಕಾಂ. ಕೆ.ಟಿ.ಸುಜಾತ ವಂದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
