ಹುಳಿಯಾರು :
ಹೊಸ ಶೈಕ್ಷಣಿಕ ವರ್ಷ ಆರಂಭವಾದರೂ ಕಳೆದ ಸಾಲಿನ ಶಿಕ್ಷಣ ಹಕ್ಕು ಕಾಯ್ದೆ (ಆರ್ಟಿಇ) ಅನುದಾನ ಇನ್ನೂ ಖಾಸಗಿ ಶಾಲೆಗಳಿಗೆ ಬಾರದೆ ಆಡಳಿತ ಮಂಡಳಿ ಕಷ್ಟದಲ್ಲಿ ಶಾಲೆ ನಡೆಸುವಂತ್ತಾಗಿದೆ.
ಹೌದು, ಬಡ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಸಲುವಾಗಿ ಸರ್ಕಾರ ಜಾರಿಗೆ ತಂದ ಈ ಕಾಯ್ದೆಯಂತೆ ಪ್ರವೇಶ ಪಡೆದ ಮಕ್ಕಳ ವೆಚ್ಚವನ್ನು ಆಯಾ ಖಾಸಗಿ ಅನುದಾನ ರಹಿತ ಶಾಲೆಗಳಿಗೆ ಸರ್ಕಾರ ನೀಡಬೇಕಿದೆ. ಆದರೆ ಶೈಕ್ಷಣಿಕ ವರ್ಷ ಆರಂಭವಾದರೂ ಇದುವರೆಗೆ ಸರ್ಕಾರ ಶಾಲೆಗಳಿಗೆ 2 ನೇ ಹಂತದ ಅನುದಾನ ಬಿಡುಗಡೆ ಮಾಡದೆ ವಿಳಂಬ ಮಾಡಿದೆ.
ಆರ್ಟಿಇ ಅಡಿ ಪ್ರವೇಶ ಪಡೆದ ರಾಜ್ಯದ ಎಲ್ಲ ಮಕ್ಕಳಿಗೂ ಪ್ರತಿ ವರ್ಷ ಸರ್ಕಾರ ಒಂದು ಮಗುವಿಗೆ ಆಯಾ ಶಾಲೆಗೆ ಶುಲ್ಕಕ್ಕೆ ಅನುಗುಣವಾಗಿ 8 ರಿಂದ 16 ಸಾವಿರ ರೂ ಬಿಡುಗಡೆ ಮಾಡಬೇಕು. ಆದರೆ 2018- 19 ನೇ ಸಾಲಿನಲ್ಲಿ ಮೊದಲ ಕಂತಿನ ಹಣವನ್ನು ಮಾತ್ರ ಬಿಡುಗಡೆ ಮಾಡಿದ್ದು, ಶೈಕ್ಷಣಿಕ ವರ್ಷ ಮುಗಿದು ಹೊಸ ರ್ವ ಆರಂಭವಾದರೂ ಎರಡನೇ ಕಂತಿನ ಹಣ ಮಾತ್ರ ನೀಡಿಲ್ಲ.
ಆರ್ಟಿಇ ಹಣ ಬಿಡುಗಡೆಗೆ ವಿಳಂಭವಾಗಲು ಖಾಸಗಿ ಶಾಲೆಗಳು ವಿದ್ಯಾರ್ಥಿಗಳ ಕಡ್ಡಾಯ ಹಾಜರಾತಿ, ಆಡಿಟ್ ರಿಪೋರ್ಟ್ ಸೇರಿದಂತೆ ಇತರೆ ಮಾಹಿತಿಯನ್ನು ಆನ್ಲೈನ್ ಮೂಲಕ ಅಪ್ಲೋಡ್ ಮಾಡದೆ ಇರುವುದು ಕಾರಣವೆಂದು ಶಿಕ್ಷಣ ಇಲಾಖೆ ಹೇಳುತ್ತಿದೆ. ಆದರೆ ಇದೆಲ್ಲವನ್ನೂ ಅಪ್ ಲೋಡ್ ಮಾಡಿರುವ ಶಾಲೆಗಾದರೂ ಹಣ ಕೊಡಬಹುದಲ್ಲ ಎಂದು ಖಾಸಗಿ ಶಾಲೆಯವರು ಪ್ರತಿಪಾದಿಸುತ್ತಿದ್ದಾರೆ.
ಖಾಸಗಿ ಶಾಲೆಯ ದಾಖಲಾತಿಯ ಶೇ.25 ರಷ್ಟು ಆರ್ಟಿಇ ಅಡಿ ಪ್ರವೇಶ ಕೊಡಬೇಕಿದ್ದು ಅದರಂತೆ ಪ್ರವೇಶ ಕೊಟ್ಟ ಶಾಲೆಗಳಿಗೆ 2 ನೇ ಕಂತಿನಲ್ಲಿ ಒಂದು ಲಕ್ಷದಿಂದ ಹತ್ತದಿನೈದು ಲಕ್ಷ ರೂ. ಬಾಕಿ ಬರಬೇಕಿದೆ. ಪರಿಣಾಮ ಶಿಕ್ಷಕರ ಸಂಬಳ, ವ್ಯಾನ್ ಮೈಟೆನಿಂಗ್ಸ್, ಕರೆಂಟ್, ಇಂಟರ್ ನೆಟ್ ಬಿಲ್ ಹೀಗೆ ಅಗತ್ಯ ಶಾಲಾ ವೆಚ್ಚಕ್ಕೆ ಹಣ ಹೊಂದಿಸಲು ಆಡಳಿತ ಮಂಡಳಿ ಪರದಾಡುತ್ತಿದ್ದಾರೆ.
ಇನ್ನಾದರೂ ಶಿಕ್ಷಣ ಇಲಾಖೆ ಖಾಸಗಿ ಶಾಲೆಗಳ ನಿರ್ವಹಣೆಯ ಕಷ್ಟ ಅರಿತು ತಕ್ಷಣ ಆರ್ಟಿಇಯ ಎರಡನೇ ಕಂತಿನ ಹಣ ಬಿಡುಗಡೆ ಮಾಡಬೇಕಿದೆ. ಈ ಮೂಲಕ ಶಾಲೆಯಲ್ಲಿ ಆರ್ಟಿಇ ಮಕ್ಕಳ ಶೋಷಣೆ ತಪ್ಪಿಸಬೇಕಿದೆ. ಜೊತೆಗೆ 2019-20 ನೇ ಸಾಲಿನ ಆರ್ಟಿಇ ಮೊದಲ ಕಂತಿನ ಹಣ ಬಿಡುಗಡೆಗೆ ಈಗಿನಿಂದಲೇ ಸಿದ್ಧತೆಗಳನ್ನು ಮಾಡಿಕೊಂಳ್ಳಬೇಕಿದೆ.