ದಾವಣಗೆರೆ:
ಇಲ್ಲಿನ ಮಹಾನಗರ ಪಾಲಿಕೆ ಎದುರು ಸೋಮವಾರ ಎಐಡಿಎಸ್ಒ ಹಾಘೂ ಎಐಡಿವೈಒ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಭಾರತ ಸ್ವಾತಂತ್ರ್ಯ ಸಂಗ್ರಾಮದ ಪ್ರಪ್ರಥಮ ಹುತಾತ್ಮ, ಅಗ್ನಿಶಿಶು ಎಂದೇ ಖ್ಯಾತಿ ಹೊಂದಿದ್ದ ಖುದಿರಾಮ್ ಬೋಸ್” 129ನೇ ಜನ್ಮ ದಿನವನ್ನು ಆಚರಿಸಲಾಯಿತು.
ಖುದಿರಾಮ್ ಬೋಸ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಅವರ ತ್ಯಾಗ ಬಲಿದಾನ, ವಿಚಾರಧಾರೆಯನ್ನು ಎಐಡಿಎಸ್ಒ ಹಾಗೂ ಎಐಡಿವೈಒ ಮುಖಂಡರು ಸ್ಮರಿಸಿದರು.
ಎಐಡಿಎಸ್ಒ ನಗರ ಘಟಕದ ಅಧ್ಯಕ್ಷೆ ಸೌಮ್ಯ ಮಾತನಾಡಿ, ಚಿಕ್ಕ ವಯಸ್ಸಿನಲ್ಲೇ ದೇಶಾಭಿಮಾನವನ್ನು ಬೆಳೆಸಿಕೊಂಡಿದ್ದ ಖುದಿರಾಮ್ ಬೋಸ್ ಬ್ರಿಟೀಷರನ್ನು ಭಾರತದಿಂದ ಹೊರ ಹಾಕಬೇಕೆಂಬ ಕನಸನ್ನು ಹೊತ್ತು ಇತರೆ ಕ್ರಾಂತಿಕಾರಿಗಳ ಜೊತೆ ಸೇರಿ ಹೋರಾಟ ಕೈಗೊಂಡಿದ್ದರು ಎಂದು ನೆನೆದರು.
ದೇಶಭಕ್ತಿ ಎಂದರೆ, ದೇಶದ ಜನರ ಮೇಲೆ ಹೊಂದುವ ಪ್ರೀತಿ ಎಂದು ಭಾವಿಸಿದ್ದ ಖುದಿರಾಮ್, ಬ್ರಿಟೀಷರ ವಿರುದ್ಧ ರಾಜೀರಹಿತ ಹೋರಾಟ ನಡೆಸಿ, 18ನೇ ವಯಸ್ಸಿನಲ್ಲಿಯೇ ಗಲ್ಲು ಶಿಕ್ಷೆಗೆ ಬಲಿಯಾದರು ಎಂದು ಸ್ಮರಿಸಿದರು.
ಎಐಡಿವೈಒ ಮುಖಂಡ ಪರಶುರಾಮ್ ಮಾತನಾಡಿ, ಖುದಿರಾಮ್ ಭೋಸ್ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಪ್ರಥಮ ಬಾರಿಗೆ ಹುತಾತ್ಮರಾಗಿ ತ್ಯಾಗ-ಬಲಿದಾನವನ್ನು ದೇಶಕ್ಕೆ ಸಾರಿದ “ಅಗ್ನಿಶಿಶು” ಆಗಿದ್ದಾರೆ. ಇವರ ವಿಚಾರಧಾರೆ ಇಂದಿಗೂ ಸ್ಪೂರ್ತಿದಾಯಕವಾಗಿದ್ದು , ಇವರ ವಿಚಾರಧಾರೆಯನ್ನು ವಿದ್ಯಾರ್ಥಿ-ಯುವಜನರು ಮೈಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು. ಈ ವೇಳೆ ಸಂಘಟನೆಗಳ ಮುಖಂಡರಾದ ನಾಗಜ್ಯೋತಿ, ಸ್ಮೀತ, ಗುರು, ಕಾವ್ಯ, ಕೃಷ್ಣ, ಪುಷ್ಪ, ಸಂತೋಷ್ ಮತ್ತಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
