ಅಧಿಕಾರಿ ಖಾತೆಗೆ ಕಿಸಾನ್ ಸಮ್ಮಾನ್ ಹಣ: ಆರೋಪ

ತುಮಕೂರು

    ರೈತರ ಸಂಕಷ್ಟಕ್ಕೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಜಾರಿಗೆ ತಂದ ಕಿಶಾನ್ ಸಮ್ಮಾನ್ ಯೋಜನೆಯ ಹಣ ರೈತರ ಬದಲಿಗೆ, ಕೃಷಿ ಇಲಾಖೆಯ ನೌಕರರ ಖಾತೆಗೆ ವರ್ಗಾವಣೆಯಾಗುತ್ತಿದ್ದು, ಈ ಸಂಬಂಧ ತನಿಖೆ ನಡೆಸಿ, ನೌಕರರ ವಿರುದ್ದ ಕ್ರಮ ಕೈಗೊಳ್ಳುವಂತೆ ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಎನ್.ಕೆ.ನಿಧಿಕುಮಾರ್ ಒತ್ತಾಯಿಸಿದ್ದಾರೆ.

    ರೈತರ ಅನುಕೂಲಕ್ಕೆಂದು ಸರಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದರೂ ಅಧಿಕಾರಿಗಳು ಮತ್ತು ನೌಕರರ ಧನದಾಹಕ್ಕೆ ಯೋಜನೆಗಳನ್ನು ಹಿಡಿಯುತ್ತಿದ್ದು, ಪ್ರಧಾನ ಮಂತ್ರಿಗಳ ಕಿಸಾನ್ ಸಮ್ಮಾನ್ ಯೋಜನೆಯ 5 ಕಂತುಗಳ ಹಣ ರೈತರ ಬದಲಿಗೆ, ನೌಕರರ ಖಾತೆಗೆ ವರ್ಗಾವಣೆಯಾಗಿರುವುದಕ್ಕೆ ಇದಕ್ಕೆ ಸಾಕ್ಷಿಯಾಗಿದೆ. ಗುಬ್ಬಿ ತಾಲೂಕು ಎಡಿಎ ಕಚೇರಿ ವ್ಯಾಪ್ತಿಗೆ ಬರುವ ಕಡಬ ಹೋಬಳಿಯ ರೈತ ಸಂಪರ್ಕ ಕೇಂದ್ರದಲ್ಲಿ ಈ ರೀತಿ ಅವ್ಯವಹಾರ ನಡೆದಿದೆ. ಕಡಬಾ ಹೋಬಳಿಯ ಯಡುವನಹಳ್ಳಿ ಗ್ರಾಮದ ಸರ್ವೆ ನಂ 22/5ರಲ್ಲಿ ಲಿಲಿತಮ್ಮ ಕೋಂ ತಿಮ್ಮೇಗೌಡ ಎಂಬುವವರಿಗೆ ಸೇರಿದ ಭೂಮಿಯಿದ್ದು, ಇವರ ಸರಕಾರಕ್ಕೆ ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸಿದ್ದರು.

    ಯಡುವನಹಳ್ಳಿ ಲಲಿತಮ್ಮ ಕೋಂ ತಿಮ್ಮೇಗೌಡ ಅವರು 2019ರ ಜೂನ್ 12 ರಂದು ಕಿಸಾನ್ ಸಮ್ಮಾನ್ ಯೋಜನೆಗೆ ಹೆಸರು ನೊಂದಾಯಿಸಿದ್ದು, 20-06-2020ರಂದು ಮಂಜೂರಾತಿ ದೊರೆತಿದೆ. ಆದರೆ ಕಡಬಾ ಹೋಬಳಿ ರೈತ ಸಂಪರ್ಕ ಕೇಂದ್ರದಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಲಲಿತಮ್ಮ ಎಂಬ ಸಹಾಯಕ ತಾಂತ್ರಿಕ ಅಧಿಕಾರಿ ರೈತ ಮಹಿಳೆ ಲಿಲಿತ ಅವರ ಅರ್ಜಿಗೆ ತನ್ನ ಬ್ಯಾಂಕ್ ಅಕೌಂಟ್ ನಂಬರ್(ಕೆನರಾ ಬ್ಯಾಂಕ್ ಎ.ಸಿ.ನಂ 0828) ನೀಡಿದ್ದು, ಇದುವರೆಗೂ ಬಿಡುಗಡೆಯಾಗಿರುವ 5 ಕಂತಿನ ಹಣ 10 ಸಾವಿರ ರೂಗಳು ನೌಕರರಾದ ಲಲಿತಮ್ಮನ ಖಾತೆಗೆ ವರ್ಗಾವಣೆಯಾಗಿದೆ. 06-07-2019,03-10-2019,02-01-2020,17-04-2020 ಮತ್ತು 10-08-2020 ಹೀಗೆ 5 ಕಂತುಗಳಲ್ಲಿ ತಲಾ 2000 ರೂಗಳಂತೆ 10 ಸಾವಿರ ರೂ ಅಧಿಕಾರಿಯ ಖಾತೆಗೆ ವರ್ಗಾವಣೆಯಾಗಿದೆ ಎಂದು ಹೇಳಿದ್ದಾರೆ.

     ಸಹಾಯಕ ತಾಂತ್ರಿಕ ಅಧಿಕಾರಿಯಾದ ಲಲಿತಮ್ಮ ಬೇಕೆಂದೇ ರೈತರ ಹಣ ಲಪಾಟಾಯಿಸುವ ಉದ್ದೇಶದಿಂದಲೇ ರೈತರ ಮಹಿಳೆಯ ಅಕೌಂಟ್ ನಂಬರ್ ನೀಡುವ ಬದಲು ತನ್ನ ಅಕೌಂಟ್ ಕೆನರಾ ಬ್ಯಾಂಕ್ ಎ.ಸಿ.ನಂ 0828 ನಂಬರ್ ನೀಡಿ, ರೈತರಿಗೆ ಮೋಸ ಮಾಡಿದ್ದು, ಇದೇ ರೀತಿಯ ಹಲವು ರೈತರ ಹಣ ನೌಕರರ ಪಾಲಾಗುತಿದ್ದು, ಈ ಬಗ್ಗೆ ಕೃಷಿ ಇಲಾಖೆಯ ಆಯುಕ್ತರು ಸೂಕ್ತ ತನಿಖೆ ನಡೆಸಿ, ತಪಿತಸ್ಥ ಅಧಿಕಾರಿಯ ವಿರುದ್ದ ಕ್ರಿಮಿನಲ್ ಮೊಕದ್ದಮೆ ಹೂಡುವುದರ ಜೊತೆಗೆ, ಆಕೆಯನ್ನು ಕೆಲಸದಿಂದ ವಜಾ ಮಾಡುವಂತೆ ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಎನ್.ಕೆ.ನಿಧಿ ಕುಮಾರ್ ಕೃಷಿ ಇಲಾಖೆಯ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link