ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ :ಸಿಸಿಬಿಯಿಂದ ಬುಕ್ಕಿ ಬಂಧನ..!

ಬೆಂಗಳೂರು

       ಕರ್ನಾಟಕ ಪ್ರಿಮೀಯರ್‌ಲೀಗ್(ಕೆಪಿಎಲ್) ಕ್ರಿಕೆಟ್ ಪಂದ್ಯಾವಳಿಯ ಮ್ಯಾಚ್‌ಫಿಕ್ಸಿಂಗ್ ಪ್ರಕರಣದ ಸಂಬಂಧ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಅಂತಾರಾಷ್ಟ್ರೀಯ ಬುಕ್ಕಿ ಸಯ್ಯಂನನ್ನು ಬಂಧಿಸುವಲ್ಲಿ ಕೇಂದ್ರ ಅಪರಾಧ ವಿಭಾಗ(ಸಿಸಿಬಿ)ದ ಪೊಲೀಸರು ಯಶಸ್ವಿಯಾಗಿದ್ದಾರೆ.

      ಕೆಪಿಎಲ್‌ನಲ್ಲಿ ಮ್ಯಾಚ್‌ಫಿಕ್ಸಿಂಗ್ ಹಗರಣ ಬಯಲಾಗುತ್ತಿದ್ದಂತೆ ವೆಸ್ಟ್ ಇಂಡೀಸ್‌ಗೆ ಪರಾರಿಯಾಗಿ ತಲೆ ಮರೆಸಿಕೊಂಡಿದ್ದ ಸಯ್ಯಂನನ್ನು ಬಂಧಿಸಿ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಲಾಗಿದೆ ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್‌ಪಾಟೀಲ್ ತಿಳಿಸಿದ್ದಾರೆ.
ಸಯ್ಯಂ ವಿರುದ್ಧ ಲುಕ್ ಔಟ್ ನೊಟೀಸ್ ಹೊರಡಿಸಿದ್ದ ಸಿಸಿಬಿ ಅಧಿಕಾರಿಗಳು ಹರ್‍ಯಾಣದಲ್ಲಿರುವ ಆತನ ಕುಟುಂಬದವರನ್ನು ಪತ್ತೆ ಮಾಡಿ ಅವರು ಮೂಲಕ ಕರೆಸಿಕೊಳ್ಳುವ ಯತ್ನ ನಡೆಸಿ ಆತ ಶನಿವಾರ ದೆಹಲಿಗೆ ವಾಪಸ್ ಆಗುತ್ತಿದ್ದಂತೆ ಕಾರ್ಯಾಚರಣೆ ನಡೆಸಿ ವಿಮಾನ ನಿಲ್ದಾಣದಲ್ಲಿ ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

    ಸಯ್ಯಂ ಹರಿಯಾಣ ಮೂಲದ ಬುಕ್ಕಿಯಾಗಿದ್ದು ಈತನಿಗೆ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಆಟಗಾರರು ಪರಿಚಯ ಇದ್ದಾರೆ ಎಂದು ತಿಳಿದು ಬಂದಿದೆ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.ಇಬ್ಬರು ಆಟಗಾರರು ಸಿಸಿಬಿ ವಶಕ್ಕೆ1 ಓವರ್‌ಗೆ 10 ರನ್ ನೀಡಿದರೆ 5 ಲಕ್ಷ ರೂ. ನೀಡುವ ಫಿಕ್ಸಿಂಗ್ ಅನ್ನು ಸಯ್ಯಂ ನಡೆಸಿದ್ದಾನೆ ಎಂಬ ಆರೋಪವಿದೆ. ಈ ಫಿಕ್ಸಿಂಗ್ ಹಗರಣದಲ್ಲಿ ಯುವತಿಯರ ಹೆಸರು ಕೇಳಿ ಬಂದಿದ್ದು, ರೂಪದರ್ಶಿಗಳ ಮೂಲಕ ಆಟಗಾರರನ್ನು ಸಂಪರ್ಕಿಸಲಾಗುತ್ತಿತ್ತು ಎಂಬ ಮಾಹಿತಿ ಸಿಕ್ಕಿದೆ.

     ಕೆಪಿಎಲ್ ಬೆಟ್ಟಿಂಗ್ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು ಬೆಳಗಾವಿ ಪ್ಯಾಂಥರ್ಸ್ ತಂಡದ ಮಾಲೀಕ ಅಶ್ಪಾಕ್ ಅಲಿ ತಾರ್, ಬಳ್ಳಾರಿ ಟಸ್ಕರ್ಸ್ ತಂಡದ ಡ್ರಮ್ಮರ್ ಭವೇಶ್, ಬೆಂಗಳೂರು ಬ್ಲಾಸ್ಟರ್ ತಂಡದ ಬೌಲಿಂಗ್ ಕೋಚ್ ವಿನು ಪ್ರಸಾದ್, ಬ್ಯಾಟ್ಸ್‌ಮನ್ ವಿಶ್ವನಾಥನ್ ಬಂಧಿಸಿದ್ದಾರೆ.

     ಬಳ್ಳಾರಿ ಟಸ್ಕರ್ಸ್ ಮತ್ತು ಹುಬ್ಬಳ್ಳಿ ಟೈಗರ್ಸ್ ನಡುವೆ ಕೆಪಿಎಲ್ ಫೈನಲ್ ಪಂದ್ಯ 2019ರ ಆಗಸ್ಟ್ 31ರಂದು ಮೈಸೂರಿನಲ್ಲಿ ನಡೆದಿತ್ತು. ಈ ಪಂದ್ಯದಲ್ಲಿ ಬೆಟ್ಟಿಂಗ್ ಮತ್ತು ಫಿಕ್ಸಿಂಗ್ ನಡೆದಿದೆ ಎಂಬ ಆರೋಪವಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಟಸ್ಕರ್ಸ್ ತಂಡದ ನಾಯಕ ಸಿ. ಎಂ. ಗೌತಮ್ ಮತ್ತು ಅಬ್ರಾರ್ ಖಾಜಿಯನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link