ಬೆಂಗಳೂರು
ಪರಿಶಿಷ್ಟ ಜಾತಿ ವರ್ಗ ಹಾಗು ಹಿಂದುಳಿದ ವರ್ಗಗಳ ಅಭ್ಯರ್ಥಿಗಳ ಸಂಬಂಧ ಕೆಪಿಎಸ್ಸಿ ಹೊರಡಿಸಿರುವ ಹೊಸ ಆದೇಶವನ್ನು ರಾಜ್ಯ ಸರಕಾರ ಕೂಡಲೇ ಹಿಂಪಡೆಯಬೇಕು ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಮೈಸೂರು ಬ್ಯಾಂಕ್ ವೃತ್ತದ ಬಳಿ ಸೇರಿದ ದಲಿತ ಸಂಘರ್ಷ ಸಮಿತಿ ಸದಸ್ಯರು,-ಪರಿಶಿಷ್ಟ ಜಾತಿ ವರ್ಗ ಹಾಗು ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಎಷ್ಟೇ ಮೆರಿಟ್ ಪಡೆದರೂ ಅವರನ್ನು ಸಾಮಾನ್ಯ ಕೋಟಾದಲ್ಲಿ ಪರಿಗಣಿಸದೇ ಆಯಾ ಮೀಸಲು ಗುಂಪಿನಲ್ಲೇ ಜೇಷ್ಠತೆ ಪರಿಗಣಿಸುವ ಆದೇಶವನ್ನು ಖಂಡಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ದಲಿತ ಮುಖಂಡ ಮಾವಳ್ಳಿ ಶಂಕರ್, ಕೆಪಿಎಸ್ಸಿ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಮೀಸಲಿನಡಿ ಬರುವ -ಪರಿಶಿಷ್ಟ ಜಾತಿ ವರ್ಗ ಹಿಂದುಳಿದವರು, ಅಲ್ಪ ಸಂಖ್ಯಾತರು ಸಾಮಾನ್ಯ ಕೋಟಾದ ಅಡಿ ಬರುವಂತಿಲ್ಲ ಎಂದು ಹೇಳಿರುವುದು ಆಘಾತಕಾರಿಯಾಗಿದೆ ಎಂದು ದೂರಿದರು. ಎಂದರು.
ಹೈಕೋರ್ಟ್ 2012ರಲ್ಲಿ 1998-99, 2004-05ರಲ್ಲಿ ಕೆಎಎಸ್ ಹುದ್ದೆಗಳ ನೇಮಕಕ್ಕೆ ಮಾತ್ರ ಅನ್ವಯಿಸುವಂತೆ ನೀಡಿದ್ದ ತೀರ್ಪನ್ನು ಮುಂದಿಟ್ಟುಕೊಂಡು ಮೀಸಲಿನಡಿ ಬರುವ ಎಲ್ಲಾ ಶೋಷಿತರಿಗೆ ಅನ್ಯಾಯವೆಸಗಿದಂತಾಗುತ್ತದೆ. ಕಾರ್ಯದರ್ಶಿ ಸರ್ಕಾರ ಹಾಗೂ ಆಯೋಗದ ಗಮನಕ್ಕೂ ತಾರದಂತೆ ಆದೇಶ ಜಾರಿ ಮಾಡಿರುವುದನ್ನು ಗಮನಿಸಿದರೆ ಸರಕಾರ ಜಾಣ ಕುರುಡನಂತೆ ವರ್ತಿಸುತ್ತಿದೆ ಎಂದು ಆರೋಪಿಸಿದರು.
ಸರ್ಕಾರ ಹೊರಡಿಸಿರುವ ಆದೇಶ ಸಂವಿಧಾನ ವಿರೋಧಿಯಾಗಿದ್ದು, ಮೀಸಲು ವರ್ಗಗಳ ಹಿತಾಸಕ್ತಿಗೆ ಧಕ್ಕೆ ಬರುವ ಆದೇಶ ಹೊರಡಿಸಿರುವ ಅಧಿಕಾರಿವನ್ನು ಅಮಾನತುಗೊಳಿಸಬೇಕು. ತ್ರಿಸದಸ್ಯ ಪೀಠ ಹೊರಡಿಸಿರುವ ತೀರ್ಪನ್ನು ಪ್ರಶ್ನಿಸಿ ಸರಕಾರ ಮೇಲ್ಮನವಿ ಸಲ್ಲಿಸಬೇಕು. ಸಂವಿಧಾನವೇ ನಮ್ಮ ದೇಶಕ್ಕೆ ದೊಡ್ಡ ಗ್ರಂಥ. ಅದಕ್ಕಾಗಿ ರಾಜ್ಯ ಸರಕಾರ ಸಂವಿಧಾನವನ್ನು ಗೌರವಿಸಿ ಡಿ.1ರೊಳಗೆ ಆದೇಶವನ್ನು ಹಿಂದಕ್ಕೆ ಪಡೆದು ಸಮಸ್ಯೆ ಬಗೆಹರಿಸಬೇಕು ಎಂದು ಗಡುವು ನೀಡಿದರು.
ಅಹಿಂದ ಹೋರಾಟಗಾರ .ಎನ್.ಎ. ನರಸಿಂಹಯ್ಯ ಮಾತನಾಡಿ, ಮೀಸಲಾತಿಗೆ ಸಂಬಂಧಿಸಿದಂತೆ ಪಾರ್ಲಿಮೆಂಟ್ ಹೊರತುಪಡಿಸಿ ಸರಕಾರಕ್ಕಾಗಲೀ, ನ್ಯಾಯಾಲಯಕ್ಕಾಗಲಿ ಯಾವುದೇ ಅಧಿಕಾರವಿಲ್ಲ. ಮೀಸಲು ಕೆಟಗರಿಯವರು ಸಾಮಾನ್ಯ ವರ್ಗದಲ್ಲಿ ಸ್ಪರ್ಧಿಸುವಂತಿಲ್ಲ ಎಂದು ಆದೇಶ ಹೊರಡಿಸಿರುವುದು ಖಂಡನೀಯ ಎಂದು ಹೇಳಿದರು.ದಲಿತಹೋರಾಟಗಾರದ ಲಕ್ಷ್ಮೀನಾರಾಯಣ ನಾಗವಾರ, ನಾರಾಯಣ ಸ್ವಾಮಿ, ರಮೇಶ್, ಗುರು ಪ್ರಸಾದ್ ಸೇರಿದಂತೆ ಪ್ರಮುಖರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2018/11/LOGO-FOR-WEB.gif)