ಆಳೊರಿಗೆ ಬದ್ಧತೆ ಇಲ್ಲ, ಮತದಾರರಿಗೆ ಜ್ಞಾನವಿಲ್ಲ

ದಾವಣಗೆರೆ:

       ಆಳುವರರಿಗೆ ಬದ್ಧತೆ ಇಲ್ಲ ಹಾಗೂ ಮತದಾರರಲ್ಲಿ ಜಾಗೃತಿ ಇಲ್ಲ. ಹೀಗಾಗಿ ಪ್ರಸ್ತುತ ರಾಜಕಾರಣ ಹದಗೆಟ್ಟಿದೆ ಎಂದು ಕರ್ನಾಟಕ ರಿಪಬ್ಲಿಕನ್ ಸೇನೆಯ ರಾಜ್ಯಾಧ್ಯಕ್ಷ ಜಿಗಣಿ ಶಂಕರ್ ವಿಷಾಧ ವ್ಯಕ್ತಪಡಿಸಿದರು.

      ಇಲ್ಲಿನ ಎಸ್.ಎಂ.ಕೃಷ್ಣ ನಗರದಲ್ಲಿರುವ ಡಾ.ಬಾಬುಜಗಜೀವನ್ ರಾಮ್ ಸಮುದಾಯ ಭವನದಲ್ಲಿ ಗುರುವಾರ ಕರ್ನಾಟಕ ರಿಪಬ್ಲಿಕನ್ ಸೇನೆಯ ಜಿಲ್ಲಾ ಸಮಿತಿಯಿಂದ ಸಾವಿತ್ರಿಬಾಯಿ ಪುಲೆ ಮತ್ತು ರಮಾಬಾಯಿ ಅಂಬೇಡ್ಕರ್ ಅವರುಗಳ ಸ್ಮರಣಾರ್ಥ ಏರ್ಪಡಿಸಿದ್ದ ಮಹಿಳಾ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

      ಆಳುವವರಿಗೆ ಜನರಪರವಾಗಿ ಕೆಲಸ ಮಾಡುವ ಬದ್ಧತೆ ಹಾಗೂ ಮತದಾರರಲ್ಲಿ ಜಾಗೃತಿ ಬಂದರೆ ಮಾತ್ರ ಹದಗೆಟ್ಟಿರುವ ಮತ್ತು ಹಾಳಾಗಿರುವ ರಾಜಕಾರಣ ಸರಿಯಾಗಲಿದೆ. ಪ್ರಸ್ತುತ ರಾಜಕೀಯ ವ್ಯವಸ್ಥೆಯಲ್ಲಿ ಚುನಾವಣೆಯ ಸಂದರ್ಭದಲ್ಲಿ ಹಣ ನೀಡಿ ಮತ ಪಡೆಯುವ ದುಸ್ಥಿತಿ ಎದುರಾಗಿದೆ. ಇದಕ್ಕೆ ಜನರ ಅಜ್ಞಾನವೇ ಕಾರಣವಾಗಿದ್ದು, ಮತದಾರರು ಪ್ರಜ್ಞಾವಂತರಾಗುವ ಮೂಲಕ ರಾಜಕಾರಣವನ್ನು ಸರಿ ಮಾಡಬೇಕಾಗಿದೆ ಎಂದು ಕಿವಿಮಾತು ಹೇಳಿದರು.

     ಸಂತೆಗಳಲ್ಲಿ ಸಣ್ಣ-ಪುಟ್ಟ ವ್ಯಾಪಾರ ನಡೆದರೆ, ರಾಜಕಾರಣಿಗಳು ವಿಧಾನಸೌಧ-ಸಂಸತ್‍ನಲ್ಲಿ ದಲ್ಲಿ ದೊಡ್ಡ ವ್ಯಾಪಾರವನ್ನೇ ನಡೆಸುತ್ತಿದ್ದಾರೆ. ಹೀಗಾಗಿ ಇವರೆಡು ರಾಜಕಾರಣಿಗಳ ವ್ಯಾಪಾರದ ಮಾರುಕಟ್ಟೆ ಕೇಂದ್ರಗಳಾಗಿ ಮಾರ್ಪಟ್ಟಿವೆ ಎಂದು ಆತಂಕ ವ್ಯಕ್ತಪಡಿಸಿದರು.

     ಸ್ಲಂ ಬೋರ್ಡ್‍ನಿಂದಲೂ ಸಹ ಕೊಳೆಗೇರಿಗಳ ಅಭಿವೃದ್ಧಿ ನಿರೀಕ್ಷಿತ ಪ್ರಮಾಣದಲ್ಲಿ ನಡೆದಿಲ್ಲ. ಹೀಗಾಗಿ ಇಲ್ಲಿಯ ನಿವಾಸಿಗಳು ವಿವಿಧ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಇದಕ್ಕೆ ರಾಜಕಾರಣಿಗಳಲ್ಲಿ ಇರುವ ಬದ್ಧತೆಯ ಕೊರತೆಯೇ ಮೂಲ ಕಾರಣವಾಗಿದೆ ಎಂದ ಅವರು, ರಾಜಕಾರಣಿಗಳಲ್ಲಿ ವ್ಯಾಪಾರಿ ಮನೋಭಾವ ಇರುವುದರಿಂದ ಹಾಗೂ ಬದ್ಧತೆಯ ಕೊರತೆ ಸೇರಿದಂತೆ ಹಲವು ಕಾರಣಗಳಿಂದ ದೇಶದ ಪರಿಸ್ಥಿತಿ ಸರಿ ಇಲ್ಲ. ಆದ್ದರಿಂದ ಜನರು ಈಗಲಾದರೂ ಎಚ್ಚೆತ್ತು ಜನರ ಪರವಾಗಿರುವ ಕರ್ನಾಟಕ ರಿಪಬ್ಲಿಕ್ ಸೇನೆ ಪಕ್ಷಕ್ಕೆ ಬೆಂಬಲ ನೀಡಬೇಕೆಂದು ಕರೆ ನೀಡಿದರು.

     ಕರ್ನಾಟಕ ರಿಪಬ್ಲಿಕ್ ಸೇನೆಯು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಕುಟುಂಬದ ಸಂಘಟನೆಯಾಗಿದ್ದು, ಅಂಬೇಡ್ಕರ್ ಅವರ ಮೊಮ್ಮಗ ಆನಂದರಾಜ್ ಅಂಬೇಡ್ಕರ್ ಇದರ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ. ಎಲ್ಲಾ ವರ್ಗದ ಬಡವರಿಗೆ ಸೌಲಭ್ಯ ಕಲ್ಪಿಸಿ, ಅಭಿವೃದ್ಧಿಗೊಳಿಸುವುದೇ ಇದರ ಮುಖ್ಯ ಉದ್ದೇಶವಾಗಿದೆ ಎಂದರು.

      ನಾಲ್ಕು ಗೋಡೆಗಳ ಮಧ್ಯೆ ಸೀಮಿತವಾಗಿದ್ದ ಮಹಿಳೆಯರನ್ನು ಹೊರ ಕರೆ ತಂದು ಶಿಕ್ಷಣ ಕೊಡಿಸಲು ಶ್ರಮಿಸಿದ ಸಾವಿತ್ರಿಬಾಯಿ ಪುಲೆ ದೇಶದ ಮೊಟ್ಟ ಮೊದಲ ಶಿಕ್ಷಕಿಯಾಗಿದ್ದಾರೆ. ಅದೇರೀತಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಾಧನೆಗೆ ಪ್ರತಿಯೊಂದು ಹಂತದಲ್ಲಿ ಬೆಂಬಲವಾಗಿ ನಿಂತಿದ್ದ ಹಾಗೂ ಅವರ ಉನ್ನತಿಗೆ ಸಹಕಾರ ನೀಡಿದ್ದ ರಮಾಬಾಯಿ ಅಂಬೇಡ್ಕರ್ ಅವರುಗಳನ್ನು ಮಹಿಳಾ ಸಮಾವೇಶದಲ್ಲಿ ಸ್ಮರಿಸುವುದು ಅತ್ಯಂತ ಔಚಿತ್ಯಪೂರ್ಣವಾಗಿದೆ ಎಂದು ಹೇಳಿದರು.

      ಸಮಾವೇಶದಲ್ಲಿ ಕೆಆರ್‍ಎಸ್‍ನ ಆಟೋ ಮತ್ತು ಟ್ಯಾಕ್ಸಿ ಘಟಕದ ರಾಜ್ಯಾಧ್ಯಕ್ಷ ಆಟೋ ಬಾಬು, ಮುಖಂಡರುಗಳಾದ ಮಹಾದೇವಪ್ಪ, ಎಂ.ಟಿ.ವಿಜಯಕುಮಾರ್, ಬಾಹುಬಲಿ, ಬಷೀರ್ ಅಹ್ಮದ್, ಹನೀಫ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

                    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link