ಬೆಂಗಳೂರು:
ದಿನ ಛತ್ರಿ ಹಿಡಿದು ಶೂಟಿಂಗ್ ಮಾಡುತ್ತಿದ್ದರು. ಈಗ ಬಿಸಿಲಿಗೆ ಬಂದಿದ್ದಾರೆ. ಸ್ವಲ್ಪ ಸುತ್ತಾಡಿ ರೈತರ ಕಷ್ಟ ಅರ್ಥ ಮಾಡಿಕೊಳ್ಳಲಿ ಅಂತ ಮಂಡ್ಯ ಲೋಕಸಭಾ ಅಭ್ಯರ್ಥಿ ಸುಮಲತಾ ವಿರುದ್ಧ ಸಿಎಂ ಕುಮಾರಸ್ವಾಮಿ ಟೀಕಿಸಿದ್ದಾರೆ.
ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೊರಟಿದ್ದ ಸಿಎಂ ಕುಮಾರಸ್ವಾಮಿ ಮಾರ್ಗ ಮಧ್ಯೆ ಚನ್ನರಾಯಪಟ್ಟಣದ ಜೆಡಿಎಸ್ ಶಾಸಕ ಸಿ.ಎನ್.ಬಾಲಕೃಷ್ಣ ಅವರ ಮನೆಯಲ್ಲಿ ಉಪಹಾರಕ್ಕೆಂದು ಬಂದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದರು.
ಸಿನಿಮಾ ಶೂಟಿಂಗ್ ಇದ್ದಾಗ ಅವರು ಛತ್ರಿ ಹಿಡ್ಕೊಂಡು ಬರ್ತಿದ್ರು. ಬಿಸಿಲಿನಲ್ಲಿ ಕೆಲಸ ಮಾಡದೆ ನಿತ್ಯ ನೆರಳಿನಲ್ಲಿಯೇ ಆರಾಮಾಗಿದ್ದರು. ಬಿಸಿಲು ಏನು ಅಂತಾ ಗೊತ್ತಾಗುತ್ತಿರಲಿಲ್ಲ. ಈಗ ನೆರಳಿನಿಂದ ಬಿಸಿಲಿಗೆ ಬಂದಿದ್ದಾರೆ. ಈಗ ಸ್ವಲ್ಪ ಬಿಸಿಲಿನಲ್ಲಿ ಸುತ್ತಾಡುತ್ತಿದ್ದಾರೆ. ಈಗ ರೈತರ ಕಷ್ಟ ಏನೆಂಬುದು ಗೊತ್ತಾಗುತ್ತೆ ಅಂತ ಯಶ್ ಮತ್ತು ದರ್ಶನ್ ಪ್ರಚಾರದ ಬಗ್ಗೆ ಹಾಗೂ ಸುಮಲತಾ ಹೆಸರನ್ನು ಪ್ರಸ್ತಾಪಿಸದೆ ಟೀಕಿಸಿದರು.
ಇನ್ನು ವಿಪಕ್ಷ ನಾಯಕ ಈಶ್ವರಪ್ಪ ಹೇಳಿಕೆಗೆ ಸಿಎಂ ಕೂಡ ಟಾಂಗ್ ಕೊಟ್ಟಿದ್ದು,ನಾನು ಮೇಲಿನಿಂದ ನೆಗೆದು ಬೀಳಲಿ ಅಂತ ಹೇಳಿರಬಹುದು. ಆದರೆ ನಾನೆಂದು ಕೂಡ ಅವರ ಮೇಲೆ ಬೀಳುವುದಿಲ್ಲ. ಕೆಲವರ ಸಂಪ್ರದಾಯವೇ ಹಾಗೆ. ಅಂತಹ ಕೀಳು ಭಾಷೆಯನ್ನು ಬಳಸುತ್ತಾರೆ ಅಂತ ಟಾಂಗ್ ಕೊಟ್ಟರು.
ಇನ್ನು ಮಂಡ್ಯದ ಜಾತಿ ಪೊಲಿಟಿಕ್ಸ್ ಬಗ್ಗೆ ಮಾತನಾಡಿದ ಕುಮಾರಸ್ವಾಮಿ, ನಾನು ಎಂದು ಜಾತಿ ರಾಜಕಾರಣ ಮಾಡಿಲ್ಲ. ಜಾತಿ ನೋಡಿ ಕೆಲಸ ಮಾಡಲ್ಲ. ನನ್ನ ಬಳಿ ಕಷ್ಟ ಅಂತ ಬಂದರೆ ಜಾತಿ ಕೇಳಲ್ಲ. ಎಲ್ಲರಿಗೂ ನಾನು ನ್ಯಾಯಸಮ್ಮತವಾಗಿ ಸಹಾಯ ಮಾಡುತ್ತೇನೆ.
ಈ ಬಾರಿಯ ಚುನಾವಣೆ ಪಿಎಂ ಮೋದಿಗೆ ಸುಲಭವಲ್ಲ. ಕರ್ನಾಟಕದಲ್ಲಿ ನನಗೆ 28 ಸ್ಥಾನಗಳನ್ನು ಗೆಲ್ಲುತ್ತೇವೆಂಬ ಎಂಬ ನಿರೀಕ್ಷೆ ಇದೆ. ಆದರೆ ಕೆಲವು ಭಿನ್ನಾಭಿಪ್ರಾಯಗಳನ್ನು ಸರಿದೂಗಿಸಿಕೊಂಡು ಹೋಗಬೇಕಿದೆ. ನಾನೇ ಖುದ್ದು ನಮ್ಮ ಪಕ್ಷದ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಪರವೂ ಕೂಡ ಪ್ರಚಾರಕ್ಕೆ ಹೋಗಲಿದ್ದು, ಅಭ್ಯರ್ಥಿಗಳನ್ನು ಗೆಲ್ಲಿಸುವ ಜವಾಬ್ದಾರಿಯೂ ಕೂಡ ನನ್ನ ಮೇಲೂ ಇದೆ.
ಆದ್ರೆ ನಾನು ಹೆಚ್ಚು ಹೆಚ್ಚು ಪ್ರದೇಶಗಳನ್ನು ಭೇಟಿ ಮಾಡಿ ಜನರ ನಾಡಿ ಮಿಡಿತವನ್ನು ಅರಿಯಬೇಕಾದ ಸಂದರ್ಭದಲ್ಲಿ ನನಗೆ ಹೆಲಿಕಾಪ್ಟರ್ ಕೂಡ ಸಿಗದಂತೆ ಕೇಂದ್ರ ಸರ್ಕಾರ ಹಾಗೂ ಬಿಜೆಪಿ ನಾಯಕರುಗಳು ಮಾಡುವ ಮೂಲಕ ಕೀಳುಮಟ್ಟದ ರಾಜಕೀಯ ಮಾಡ್ತಿದ್ದಾರೆ ಅಂತ ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








