ಬೆಂಗಳೂರು
ಕುವೆಂಪು ಅವರು ಸಾಹಿತ್ಯದ ಎಲ್ಲ ಪ್ರಬೇಧಗಳಲ್ಲಿ ಕೆಲಸ ಮಾಡಿದ್ದಾರೆ. ವಿಡಂಬನೆ, ಖಂಡಕಾವ್ಯ, ಮಹಾಕಾವ್ಯ, ಕಾದಂಬರಿ ಹಾಗೂ ವೈಚಾರಿಕತೆ ಕುರಿತ ಹಲವು ಕೃತಿಗಳ ಜೊತೆಗೆ 14 ನಾಟಕಗಳನ್ನು ಬರೆದಿರುವ ಅವರ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿದೆ ಎಂದು ವಿಮರ್ಶಕ ಡಾ. ರಾಮಚಂದ್ರನ್ ಅಭಿಪ್ರಾಯಪಟ್ಟರು.
ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಕನ್ನಡ ಜನಶಕ್ತಿ ಹಾಗೂ ಅಭಿನವ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಡಾ. ನರಹಳ್ಳಿ ಬಾಲಸುಬ್ರಮಣ್ಯ ಅವರ ಕುವೆಂಪು ಸಮಗ್ರ ಸಾಹಿತ್ಯ ಶೋಧ ಮಾಲಿಕೆಯ 4 ನೇ ಪುಸ್ತಕ ಕುವೆಂಪು ದರ್ಶನ ಮೀಮಾಂಸೆ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.
ಕಾನೂರು ಹೆಗ್ಗಡತಿ ಹಾಗೂ ಮಲೆಗಳಲ್ಲಿ ಮದುಮಗಳು ಅವರ ಶ್ರೇಷ್ಠ ಕಾದಂಬರಿ ಕುರಿತ ನಾಟಕಗಳಾಗಿವೆ. ಸಮಾಜದ ದೃಷ್ಟಿಕೋನದಲ್ಲಿ ರಚಿತವಾಗಿರುವ ಕಾದಂಬರಿಗಳು, ನಾಟಕಗಳು ಸೃಜನಶೀಲತೆಯಿಂದ ಕೂಡಿದ್ದು, ಸಮಾಜಕ್ಕೆ ಉತ್ತಮ ಸಂದೇಶ ನೀಡಿವೆ ಎಂದು ಬಣ್ಣಿಸಿದರು.
ಅಂಧಶ್ರದ್ಧೆ, ಮೌಢ್ಯ, ಭಾವಾವೇಷ ವೈಚಾರಿಕತೆ ಇಲ್ಲದ ಲೌಕಿಕ ಪ್ರಜ್ಞೆಯ ಶಿಕ್ಷಣ ಅವಶ್ಯ ಎಂದು ಪ್ರತಿಪಾದಿಸಿದ ಕುವೆಂಪು ಅವರ ವಿಚಾರಧಾರೆಗಳು ಎಂದೆಂದಿಗೂ ಪ್ರಸ್ತುತವಾಗಿದೆ ಎಂದರು.
ಡಾ. ನರಹಳ್ಳಿ ಬಾಲಸುಬ್ರಮಣ್ಯ ಅವರು ಕುವೆಂಪು ದರ್ಶನ ಮೀಮಾಂಸೆಯಲ್ಲಿ 6 ಅಧ್ಯಯಗಳಿವೆ. ಅದರಲ್ಲಿ ವೈಜ್ಞಾನಿಕ ದೃಷ್ಟಿಕೋನ, ಸಂಸ್ಕೃಂತಿ ಕ್ರಾಂತಿ ಹಾಗೂ ಶಿಕ್ಷಣದ ಸೃಜನಾತ್ಮಕತೆ ಬಗ್ಗೆ ಉಲ್ಲೇಖವಿದೆ. ಕನ್ನಡ ಸಾಹಿತ್ಯದಲ್ಲಿ ವೈಚಾರಿಕತೆ, ವಿಡಂಬನೆ ಸೇರಿದಂತೆ ಹಲವು ಪ್ರಕಾರಗಳು ಜನಮಾನಸದಲ್ಲಿ ಇಂದು ಅಚ್ಚಳಿಯದೆ ಉಳಿದಿವೆ. ಸಾಹಿತ್ಯ ಕ್ಷೇತ್ರಕ್ಕೆ ಕುವೆಂಪು ಅವರು ನೀಡಿರುವ ಅಗಾಧ ಕೊಡುಗೆಯನ್ನು ಅವರ ಕೃತಿಗಳ ಮೂಲಕವೇ ಕಾಣಬಹುದಾಗಿದೆ. ಲೇಖಕರು ಈಬಗ್ಗೆ ತಮ್ಮ ಕೃತಿಯಲ್ಲಿ ಎಳೆಎಳೆಯಾಗಿ ಬಿಡಿಸಿದ್ದಾರೆ. ಈ ಕೃತಿಯ ಚಿಂತನೆಗಳು ಮುಂದಿನ ಪೀಳಿಗೆಗೆ ಆದರ್ಶವಾಗಲಿ ಎಂದು ಹೇಳಿದರು.
ಕಳೆದ ನಾಲ್ಕು ದಶಕಗಳ ಹಿಂದೆಯೇ ಕುವೆಂಪು ಅವರು ತ್ರಿಭಾಷಾ ಸೂತ್ರವನ್ನು ವಿರೋಧಿಸಿ ಕನ್ನಡದ ಏಕೀಕರಣಕ್ಕಾಗಿ ಶ್ರಮಿಸಿದರಲ್ಲದೆ ದ್ವಿಭಾಷಾ ಸೂತ್ರಕ್ಕೆ ಆದ್ಯತೆ ನೀಡುವಂತೆ ಆಗ್ರಹಿಸಿದ್ದರು. ಆಯಾ ಪ್ರಾಂತ್ಯಗಳ ಭಾಷೆಯಲ್ಲಿಯೇ ಆಡಳಿತ ಹಾಗೂ ಶಿಕ್ಷಣ ದೊರೆಯಬೇಕೆಂದು ಪ್ರತಿಪಾದಿಸಿದ್ದರು. ಅಂತಹ ಮಹಾನ್ ಚೇತನದ ಚಿಂತನೆಗಳನ್ನು ಡಾ. ನರಹಳ್ಳಿ ಬಾಲಸುಬ್ರಮಣ್ಯ ಮುಂದುವರೆ ಸುತ್ತಿರುವುದು ಶ್ಲಾಘನೀಯವಾಗಿದೆ ಎಂದು ತಿಳಿಸಿದರು.ಸಮಾರಂಭದಲ್ಲಿ ಲೇಖಕ ರಾಜಶೇಖರ ಹಳೆಮನೆ, ಜನಶಕ್ತಿ ಕೇಂದ್ರದ ಸಿ.ಕೆ. ರಾಮೇಗೌಡ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
