ಹುಳಿಯಾರು:
ಸಂವಿಧಾನದ ಆಶಯದಂತೆ ಆರ್ಥಿಕ ಸಮಾನತೆ ಬರಬೇಕಿದ್ದರೆ ರೈತರು, ಕಾರ್ಮಿಕರು ವಿಧಾನಸಭೆ ಮತ್ತು ಲೋಕಸಭೆ ಪ್ರವೇಶಿಸಬೇಕಿದೆ ಎಂದು ಜಿಲ್ಲಾ ಕಾರ್ಮಿಕರ ಸಂಘದ ಅಧ್ಯಕ್ಷ ಗಿರೀಶ್ ಅಭಿಪ್ರಾಯಪಟ್ಟರು.
ಹುಳಿಯಾರಿನ ಗಾಂಧಿ ಭವನದಲ್ಲಿ ಶನಿವಾರ ನಡೆದ ಇಟ್ಟಗೆ ಲಾರಿ ಲೇಬರ್ಸ್ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಭಾರತದಲ್ಲಿ ಆರ್ಥಿಕ ಸಮಾನತೆ ಇಲ್ಲದಾಗಿದ್ದು ಶ್ರೀಮಂತರೇ ಶ್ರೀಮಂತರಾಗುತ್ತಿದ್ದಾರೆ ಬಡವರು ಬಡವರಾಗಿಯೇ ಉಳಿಯುತ್ತಿದ್ದಾರೆ. ಸರ್ಕಾರಿ ನೌಕರರಿಗೆ, ರಾಜಕಾರಣಿಗಳಿಗೆ ಸಂಬಳ, ಭತ್ಯೆಗಳು ಚರ್ಚೆಗಳೇ ಇಲ್ಲದೆ ಹೆಚ್ಚಳವಾಗುತ್ತವೆ. ರೈತರು ಮತ್ತು ಕಾರ್ಮಿಕರ ಪರ ಅಧಿವೇಶನಗಳಲ್ಲಿ ಚರ್ಚೆಗಳೇ ಆಗುವುದಿಲ್ಲ. ಹಾಗಾಗಿ ರೈತರು ಮತ್ತು ಕಾರ್ಮಿಕರು ತಮ್ಮ ಹಕ್ಕಿಗಾಗಿ ಒಗ್ಗಟ್ಟಾಗಿ ಹೋರಾಡುವ ಜತೆಗೆ ಅಧಿಕಾರ ಹಿಡಿಯಬೇಕಿದೆ ಎಂದರು.
ಪ್ರಧಾನಮಂತ್ರಿ, ಮುಖ್ಯಮಂತ್ರಿ, ಜಿಲ್ಲಾಧಿಕಾರಿ, ತಹಸೀಲ್ದಾರ್ ಹೀಗೆ ಜನಪ್ರತಿನಿಧಿಗಳು ಅಧಿಕಾರಿಗಳು ಒಂದೊಂದು ತಿಂಗಳು ರಜೆಯಲ್ಲಿದ್ದರೂ ನಾಗರಿಕರ ಜನಜೀವನ ಒಂದಿಷ್ಟು ಅಸ್ತವ್ಯಸ್ತವಾಗಿದೆ ಸಾಂಗವಾಗಿ ನಡೆಯುತ್ತಿರುತ್ತದೆ. ಆದರೆ ರೈತರು ಮತ್ತು ಕಾರ್ಮಿಕರು ಒಗ್ಗಟ್ಟಾಗಿ ಒಂದೇ ಒಂದು ವಾರ ರಜೆ ಘೋಷಿಸಿದರೂ ಸಾಕು ದೇಶದಲ್ಲಿ ಅಲ್ಲೋಲ ಕಲ್ಲೋಲವಾಗುತ್ತದೆ. ಹಾಗಾಗಿಯೇ ಇವರನ್ನು ಒಗ್ಗಟ್ಟಾಗಲು ರಾಜಕಾರಣಿಗಳು ಅಧಿಕಾರಿಗಳು ಶ್ರೀಮಂತರು ಬಿಡುತ್ತಿಲ್ಲ. ಈ ಕಡೆಯಿಂದ ನಾವು ಸಂಘಗಳನ್ನು ರಚಿಸುತ್ತಿದ್ದರೆ, ಆ ಕಡೆಯಿಂದ ಅವರು ಮುಚ್ಚಿಸಿ ಕೊಂಡು ಬರುತ್ತಾರೆ. ಇದಕ್ಕೆ ರೈತರು ಮತ್ತು ಕಾರ್ಮಿಕರಿಗೆ ಇರುವ ಅರಿವಿನ ಕೊರತೆ ಕಾರಣವಾಗಿದೆ ಎಂದರು.
ಕರ್ತವ್ಯ ನಿರತ ಕಾರ್ಮಿಕ ಸಾವನ್ನಪ್ಪಿದರೆ ಐದು ಲಕ್ಷ ರೂ. ಆಸ್ಪತ್ರೆ ವೆಚ್ಚವಾಗಿ ಎರಡು ಲಕ್ಷ ರು. ಅಂಗವೈಕಲ್ಯವಾದರೆ 1.5 ಲಕ್ಷ ರೂ ಮತ್ತು ಮಾಸಿಕ ಒಂದು ಸಾವಿರ ರೂ ಪಿಂಚಣಿ, ಸಹಜ ಸಾವಿಗೆ 54 ಸಾವಿರ ರು. ಮಕ್ಕಳ ವಿದ್ಯಾಭ್ಯಾಸ, ಮದುವೆ, ಹೆರಿಗೆ ಹೀಗೆ ಅನೇಕ ಸೌಲಭ್ಯಗಳು ಕಾರ್ಮಿಕ ಮಂಡಳಿಯಲ್ಲಿದೆ ಆದರೆ ಇವುಗಳಿಗಾಗಿ ಅರ್ಜಿ ಸಲ್ಲಿಸಿ ಎರಡು ಮೂರು ವರ್ಷಗಳಾಗಿದ್ದರೂ ಮಂಜೂರು ಮಾಡದೆ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆಯನ್ನು ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಹುಳಿಯಾರು ಇಟ್ಟಿಗೆ ಲಾರಿ ಲೇಬರ್ಸ್ ಸಂಘದ ಅಧ್ಯಕ್ಷರಾಗಿ ಶಿವಣ್ಣ, ಕಾರ್ಯದರ್ಶಿಯಾಗಿ ಕೋದಂಡ, ಉಪಾಧ್ಯಕ್ಷರಾಗಿ ಗೌಸ್ಪೀರ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಕೆಂಕೆರೆ ಸತೀಶ್, ಜಿಲ್ಲಾ ವಕ್ಫ್ ಬೋರ್ಡ್ ಸದಸ್ಯ ಸಜ್ಜಾದ್, ಕಟ್ಟಡ ಕಾರ್ಮಿಕರ ಸಂಘದ ಸಿದ್ದರಾಮಣ್ಣ, ಹನುಮಂತಪ್ಪ, ನಾಗಣ್ಣ ಮತ್ತಿತರರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
