ಹುಳಿಯಾರು:
ಚಿಕ್ಕನಾಯಕನಹಳ್ಳಿ ತಾಲ್ಲೂಕಿನಾದ್ಯಂತ ಶುಕ್ರವಾರ ರಾತ್ರಿ ಉತ್ತಮ ಮಳೆಯಾಗಿದ್ದು ಹಳ್ಳಕೊಳ್ಳಗಳಿಗೆ ಸಾಕಷ್ಟು ನೀರು ಹರಿದಿದೆ.ಒಂದು ತಿಂಗಳ ಅವಧಿಯಲ್ಲಿ ಅನೇಕ ಬಾರಿ ಮಳೆಯಾಗಿದ್ದು ತಾಲ್ಲೂಕಿನ ಅನೇಕ ಕೃಷಿಹೊಂಡಗಳು ಭರ್ತಿಯಾಗಿ ಹೋಗಿದೆ. ತೋಟಗಳಲ್ಲಿ ನೀರು ನಿಂತಿದ್ದು ಮಳೆಯಿಲ್ಲದೆ ಸೊರಗಿದ್ದ ತೆಂಗಿಗೆ ಜೀವ ಕಳೆ ಮರುಕಳಿಸುತ್ತಿದೆ. ಅಲ್ಲದೆ ಬತ್ತಿದ ಕೆಲ ಕೊಳವೆಬಾವಿಗಳಲ್ಲೂ ನೀರು ಜಿನುಗುತ್ತಿದ್ದು ರೈತರು ಮೊಗದಲ್ಲಿ ಸಂಭ್ರಮ ಮನೆ ಮಾಡಿದೆ.
ಒಂದು ದಶಕದ ಅವಧಿಯಲ್ಲಿ ಹಳ್ಳ ಕೊಳ್ಳಗಳಿಗೆ ಹನಿ ನೀರು ಕೂಡ ಬಂದಿರಲಿಲ್ಲ. ಈಗ ಹಂದನಕೆರೆ ಹೋಬಳಿಯ ಮತಿಘಟ್ಟ, ಮಲ್ಲಿಗೆರೆ, ಕೆಂಗಲಾಪುರ ಕೆರೆಗಳು ಮೈದುಂಬಿ ಹರಿಯುತ್ತಿರುವುದರಿಂದ ಜೀವಕಳೆ ಬಂದಿದೆ ಎಂದು ಮತಿಘಟ್ಟ ಆನಂದ್ ಸಂತಸ ಹಂಚಿಕೊಂಡರು.ಸತತ ಮಳೆಯಿಂದ ರಾಗಿ ಮತ್ತು ಸಾಮೆ ಬೆಳೆಗಳ ಗೂಡುಗಳಲ್ಲಿ ನೀರು ಸಂಗ್ರಹವಾಗಿ ತೆನೆಗಳು ಕೊಳೆತು ಹೋಗುವ ಆತಂಕ ಸಹ ಸೃಷ್ಠಿಯಾಗಿದೆ. ಆದರೂ ಕೂಡ ಮೇವು, ನೀರಿಲ್ಲದೆ ತೀರ್ವ ಹಾಹಾಕಾರ ಎದುರಿಸಿದ್ದ ರೈತರಿಗೆ ಭೂರಮೆ ಹಸಿರಾಗಿ, ಅಂತರ್ಜಲ ವೃದ್ಧಿಯಾಗುವ ನೆಮ್ಮದಿ ಮನೆ ಮಾಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ