ಕೊರಟಗೆರೆ:
ರಾಜ್ಯದ ಸುಪ್ರಸಿದ್ದ ಹಾಗೂ ಐತಿಹಾಸಿಕ ದೇವಸ್ಥಾನವಾದ ಕಲ್ಪತರು ನಾಡಿನ ಕೊರಟಗೆರೆ ತಾಲ್ಲೂಕಿನ ಶ್ರೀ ಗೊರವನಹಳ್ಳಿ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಪುಣ್ಯಕ್ಷೆತ್ರದಲ್ಲಿ ಕಾರ್ತಿಕ ಮಾಸದ ಕಡೆಯ ಶುಕ್ರವಾರ ಶ್ರೀಮಹಾಲಕ್ಷ್ಮಿ ದೇವಿಯ ವೈಭವದ ಬ್ರಹ್ಮರಥೋತ್ಸವ, ಲಕ್ಷದೀಪೋತ್ಸವ ಮತ್ತು ಮುತ್ತಿನ ಪಲ್ಲಕ್ಕಿ ಉತ್ಸವವು ಬಹಳ ವಿಜೃಂಭಣೆಯಿಂದ ನಡೆಯಲಿದೆ.
ಶ್ರೀಕ್ಷೇತ್ರ ಗೊರವನಹಳ್ಳಿ ಮಹಾಲಕ್ಷ್ಮೀ ದೇವಿಯ ಸನ್ನಿಧಾನಕ್ಕೆ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ಮಧುಗಿರಿ ಎಸಿ ಡಾ.ನಂದಿನಿದೇವಿ ನೇತೃತ್ವದಲ್ಲಿ ಕಂದಾಯ ಮತ್ತು ಪೊಲೀಸ್ ಇಲಾಖೆ ಭದ್ರತೆಯ ಜೊತೆ ಸಕಲ ಸಿದ್ದತೆ ನಡೆದಿದೆ. ಶ್ರೀಕ್ಷೇತ್ರದಲ್ಲಿ ಈಗಾಗಲೇ ಸಡಗರ ಸಂಭ್ರಮದಿಂದ ಭಕ್ತ ಸಮೂಹ ಸ್ವಇಚ್ಚೆಯಿಂದ ಕಾರ್ಯಕ್ರಮ ಯಶಸ್ವಿಗಾಗಿ ಹಲವಾರು ಕೆಲಸದಲ್ಲಿ ತೊಡಗಿರುವುದೇ ವಿಶೇಷ.
ಮಹಾಲಕ್ಷ್ಮೀ ದೇವಿಯ ವೈಭವದ ಲಕ್ಷದಿಪೋತ್ಸವದ ಪ್ರಯುಕ್ತ ದೇವಾಲಯಕ್ಕೆ ವಿಶೇಷ ಹೂವಿನ ಅಲಂಕಾರ, ನಾಮಫಲಕ, ವಿದ್ಯುತ್ ಅಲಂಕಾರ ಮಾಡಲಾಗಿದೆ. ನ.22ರ ಶುಕ್ರವಾರ ಬೆ.6ಗಂಟೆಗೆ ಹೋಮಹವನ, ಪಂಚಾಮೃತ ಅಭಿಷೇಕ, ವಿಶೇಷ ಪೂಜೆ. ಮಧ್ಯಾಹ್ನ 12.30ಕ್ಕೆ ಬ್ರಹ್ಮ ರಥೋತ್ಸವ, 5.30ಕ್ಕೆ ಲಕ್ಷದೀಪೋತ್ಸವ, ಸಂಜೆ 6.30ಕ್ಕೆ ಗೊರವನಹಳ್ಳಿ, ನರಸಯ್ಯನಪಾಳ್ಯ ಮತ್ತು ಗೊಲ್ಲರಹಟ್ಟಿ ಗ್ರಾಮಸ್ಥರಿಂದ ಆರತಿ ಸೇವೆ ನಡೆಯಲಿದೆ.
ಶ್ರೀಕ್ಷೇತ್ರದಲ್ಲಿ ಮಹಾಲಕ್ಷ್ಮಿಯ ಮುತ್ತಿನ ಪಲ್ಲಕ್ಕಿ ಉತ್ಸವ ರಾತ್ರಿ 8ಕ್ಕೆ ನಡೆಯಲಿದೆ. ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಡೊಳ್ಳು ಕುಣಿತ, ವೀರಗಾಸೆ ಮತ್ತು ನಾಸಿಕ್ ತಂಡ ಆಗಮಿಸಲಿವೆ. ದೇವಿಯ ದರ್ಶನಕ್ಕೆ ಆಗಮಿಸುವ ಭಕ್ತರಿಗೆ ಸರತಿ ಸಾಲು, ದಾಸೋಹ, ವಸತಿ ಮತ್ತು ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಕಳೆದ ಹದಿನೈದು ದಿನಗಳಿಂದ ಆಡಳಿತ ಮಂಡಳಿಯ ಅಧಿಕಾರಿವರ್ಗ ಸ್ವಚ್ಚತೆಗೆ ಆದ್ಯತೆ ನೀಡಿ ದೇವಾಲಯ ಸುತ್ತಮುತ್ತಲು ಸುಂದರ ಪರಿಸರ ನಿರ್ಮಾಣವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
