ಹರಿಹರ
ಪೋಕ್ಸೊ ಕಾಯ್ದೆಯಡಿ ದೂರು ದಾಖಲಿಸುವ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ಥರ ಹೆಸರು, ಗುರುತಿನ ಗೌಪ್ಯತೆಯನ್ನು ಕಾಪಾಡಲಾಗುತ್ತದೆ ಎಂದು ವಕೀಲ ಹಾಗೂ ಕುವೆಂಪು ವಿವಿ ಸಿಂಡಿಕೇಟ್ ಮಾಜಿ ಸದಸ್ಯ ಟಿ.ಇನಾಯತ್ ಉಲ್ಲಾ ಹೇಳಿದರು.
ನಗರದ ಎಸ್ಜೆವಿಪಿ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಕಾನೂನು ಸಾಕ್ಷರತಾ ರಥಯಾತ್ರೆಯ ಅಂಗವಾಗಿ ಆಯೋಜಿಸಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮದಲ್ಲಿ ಭಾಗವಹಿಸಿ ಪೋಕ್ಸೊ ಕಾಯಿದೆ-2012ರ ಕುರಿತು ಅವರು ಉಪನ್ಯಾಸ ನೀಡಿದರು.
ದೆಹಲಿಯಲ್ಲಿ ನಡೆದ ನಿರ್ಭಯ ಪ್ರಕರಣದ ಹಿನ್ನೆಲೆಯಲ್ಲಿ ರಾಷ್ಟ್ರಾದ್ಯಂತ ಎದ್ದ ಜನರ ಒತ್ತಡಕ್ಕೆ ಮಣಿದು ಭಾರತ ಸರಕಾರ 2012ರಲ್ಲಿ ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಅಧಿನಿಯಮ (ಪೋಕ್ಸೊ) ಎಂಬ ಕಠಿಣ ಕಾನೂನನ್ನು ರಚಿಸಿದೆ.
ಲೈಂಗಿಕ ದೌರ್ಜನ್ಯಕ್ಕೆ ಒಳಗಾದ 18 ವರ್ಷದೊಳಗಿನ ಬಾಲಕಿ ಅಥವಾ ಬಾಲಕಿ ದೂರು ನೀಡಲು ಪೊಲೀಸ್ ಠಾಣೆಗೆ ಬರಬೇಕೆಂದಿಲ್ಲ. ಅವರು ಹೇಳಿದ ಜಾಗಕ್ಕೆ ಮಹಿಳಾ ಪೊಲೀಸ್ ಅಧಿಕಾರಿ ಸಿವಿಲ್ ಡ್ರೆಸ್ನಲ್ಲಿ ತೆರಳಿ ದೂರು ಪಡೆಯಬಹುದು. ಜಿಲ್ಲಾ ಮಟ್ಟದ ಸತ್ರ ನ್ಯಾಯಾಲಯ ಈ ಪ್ರಕರಣದ ವಿಚಾರಣೆ ನಡೆಸುತ್ತದೆ.
ಸಂತ್ರಸ್ತರನ್ನು ಕಟಕಟೆಯಲ್ಲಿ ನಿಲ್ಲಿಸುವುದಿಲ್ಲ. ನ್ಯಾಯಾಧೀಶರು ತಮ್ಮ ಕೊಠಡಿಯಲ್ಲಿ ಆಂತರಿಕವಾಗಿ ಹೇಳಿಕೆ ಪಡೆಯುತ್ತಾರೆ. ಸಂತ್ರಸ್ತೆಯ ಹೆಸರು, ಗುರುತು, ಫೋಟೋವನ್ನು ಪತ್ರಿಕೆ, ಟಿವಿಗಳಲ್ಲಿ ಪ್ರಕಟಣೆ ಮಾಡುವುದಿಲ್ಲ. ವೇಗವಾಗಿ ನಡೆಯುವ ಪ್ರಕರಣದಲ್ಲಿ ಆರೋಪ ಸಾಬೀತಾದರೆ ಅಪಾದಿತನಿಗೆ 10 ವರ್ಷ ಜೈಲು ವಾಸದ ಶಿಕ್ಷೆ ವಿಧಿಸಲಾಗುತ್ತದೆ ಎಂದರು.
ನಮ್ಮ ಮಕ್ಕಳು ಶಾಲೆ, ಕಾಲೇಜು, ಟ್ಯೂಷನ್ಗೆ ಹೋಗುತ್ತಿದ್ದರೆ ಅವರ ಮೇಲೆ ಸೂಕ್ತ ನಿಗಾವಹಿಸಬೇಕು. ಅವರು ರಾತ್ರಿ ಸಮಯದಲ್ಲಿ ನಿರ್ಜನ ಪ್ರದೇಶದಲ್ಲಿ ಸಂಚರಿಸುವುದಿದ್ದರೆ, ಸಂಶಯಿತರ ಜೊತೆಗೆ ಇರಬೇದಾಗ ಎಚ್ಚರಿಕೆ ವಹಿಸಬೇಕು. ಘಟನೆ ನಡೆದಾಗ ವ್ಯಥೆ ಪಡುವುದಕ್ಕಿಂತ ಘಟನೆ ನಡೆಯದಂತೆ ನೋಡಿಕೊಳ್ಳುವುದು ಮೇಲು ಎಂದರು.
ವಾರಸಾ ಕಾಯಿದೆ ಕುರಿತು ಉಪನ್ಯಾಸ ನೀಡಿದ ಹಿರಿಯ ವಕೀಲ ಎಚ್.ಎಂ.ಷಡಾಕ್ಷರಯ್ಯ ಮಾತನಾಡಿ, ಕುಟುಂಬದ ಓರ್ವ ಸದಸ್ಯನ ಶಿಕ್ಷಣ ಅಥವಾ ವ್ಯಾಪಾರ, ಉದ್ಯಮಕ್ಕಾಗಿ ಪೋಷಕರು ಹೆಚ್ಚು ಹಣ ವ್ಯಯ ಮಾಡಿದ್ದರೆ ಆ ಸದಸ್ಯನಿಗೆ ಪಾಲು ವಿಭಾಗದಲ್ಲಿ ಕಡಿಮೆ ಆಸ್ತಿ ಬರುವಂತಿದ್ದರೂ ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಒಪ್ಪಿಕೊಳ್ಳಬೇಕು.
ಸಮ ಆಸ್ತಿಯೆ ಬೇಕೆಂದು ನ್ಯಾಯಾಲಯದ ಮೆಟ್ಟಿಲು ಹತ್ತಿದರೆ ಕುಟುಂಬದಲ್ಲಿ ಸಾಮರಸ್ಯ ಮಾಯವಾಗಿ ಧ್ವೇಷಾಸೂಯೆ ಮೂಡುತ್ತದೆ. ಹಿರಿಯರ ಸಮ್ಮುಖದಲ್ಲಿ ಇಂತಹ ವಿಷಯ ಸೌಹಾರ್ದತೆಯೊಂದಿಗೆ ಬಗೆಹರಿಸಿಕೊಳ್ಳಬೇಕೆಂದರು.
ಉದ್ಘಾಟಿಸಿದ ಬಿಇಒ ಯು.ಬಸವರಾಜಪ್ಪ ಮಾತನಾಡಿ, ಕಾನೂನಿನ ಜ್ಞಾನ ಅಡ್ಡಿಗಳನ್ನು ತಡೆಯುತ್ತದೆ. ಜನ ಸಾಮಾನ್ಯರಲ್ಲಿ ಕಾನೂನಿನ ಜ್ಞಾನ ಬೆಳೆಸುವಲ್ಲಿ ಸಾಕ್ಷರತಾ ರಥಯಾತ್ರೆ ಪರಿಣಾಮಕಾರಿ ಕಾರ್ಯಕ್ರಮವಾಗಿದೆ. ಸಾರ್ವಜನಿಕರು ಇದರ ಉಪಯೋಗ ಪಡೆದುಕೊಳ್ಳಬೇಕೆಂದರು.
ವಕೀಲರ ಸಂಘದ ಅಧ್ಯಕ್ಷ ನಾಗರಾಜ ಹಲವಾಗಲು ಮಾತನಾಡಿ, ವಿಲ್ ಅಥವಾ ಮರಣ ಶಾಸನ ಕಾನೂನು ಬದ್ಧವಾಗಿ ಒಬ್ಬ ವ್ಯಕ್ತಿ ತನ್ನ ಮರಣದ ನಂತರದಲ್ಲಿ ಚರ, ಸ್ಥಿರ ಆಸ್ತಿ ಕುಟುಂಬದ ಸದಸ್ಯರ ನಡುವೆ ಹೇಗೆ ಹಂಚಿಕೆಯಾಗಬೇಕೆಂದು ನಿರ್ದೇಶಿಸುವ ಪತ್ರವಾಗಿದೆ. ವಿಲ್ ನೊಂದಣಿ ಕಚೇರಿಯಲ್ಲಿ ನೊಂದಣಿ ಮಾಡಿಸಬಹುದು ಅಥವಾ ಇಬ್ಬರು ಸಾಕ್ಷಿಗಳ ಸಹಿಯೊಂದಿಗೆ ಒಂದು ಬಿಳೆ ಹಾಳೆಯಲ್ಲಿ ನಮೂದಿಸಬಹುದಾದ ಪತ್ರವಾಗಿದೆ ಎಂದರು.
ಹಿರಿಯ ಎಪಿಪಿ ಮುರುಗೇಶ್ ಅಂಕದ್, ಎಪಿಪಿ ಶಂಶೀರ್ ಅಲಿಖಾನ್, ಪ್ರಾಚಾರ್ಯ ರುದ್ರಮುನಿ ಕೆ.ಎಂ., ಆಡಳಿತ ಮಂಡಳಿ ಸದಸ್ಯ ಆರ್.ಪಿ.ಪ್ರಶಾಂತ್, ಉಪನ್ಯಾಸಕರಾದ ಚಂದ್ರಶೇಖರ ಮಠ, ಸೌಭಾಗ್ಯ ಹಿರೇಮಠ, ಕದಮ್, ಗೋವಿಮದಪ್ಪ ಎನ್.ಎಲ್., ದೇವಿಕಾ, ನಿಸರ್ಗ, ನ್ಯಾಯಾಲಯದ ಸಿಬ್ಬಂದಿ ಪರಮೇಶ್ವರ ಮಾತನಾಡಿದರು. ಕಾರ್ಯಕ್ರಮದ ನಂತರ ನಡೆದ ಸಂವಾದದಲ್ಲಿ ವಿದ್ಯಾರ್ಥಿಗಳು ಪ್ರಶ್ನೆಗಳನ್ನು ಕೇಳಿ ಮಾಹಿತಿ ಪಡೆದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
