ದಾವಣಗೆರೆ:
ನಾವು ಸತ್ತ ಮೇಲೆ ಸ್ವರ್ಗಕ್ಕೆ ಹೋಗುತ್ತೇವೋ ಇಲ್ಲವೋ, ಸ್ವರ್ಗ ಇದೆಯೋ ಇಲ್ಲ ಗೊತ್ತಿಲ್ಲ. ಏಕೆಂದರೆ, ಇನ್ನೂ ನಾವು ಸತ್ತಿಲ್ಲ. ಹೀಗಾಗಿ ಭೂಮಿ ಮೇಲೆ ಇದ್ದಾಗಲೇ ಸ್ವರ್ಗ ಸೃಷ್ಟಿಸಿಕೊಳ್ಳೋಣ ಎಂದು ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿ ಮೋಹನ್ ಎಂ. ಶಾಂತನಗೌಡರ್ ಕರೆ ನೀಡಿದರು.
ನಗರದ ರಾಜನಹಳ್ಳಿ ಲಕ್ಷ್ಮಣ ಶೆಟ್ಟಿ ಕಾನೂನು ಕಾಲೇಜು ಆವಣರದಲ್ಲಿರುವ ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಸಭಾಂಗಣದಲ್ಲಿ ಶನಿವಾರ ನಡೆದ ಕಾಲೇಜಿನ ಸುವರ್ಣ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಮನುಷ್ಯನ ಜೀವನ ಒಂದು ರೀತಿಯಲ್ಲಿ ಎನ್ಸಿಸಿ ಪೆರೇಡ್ ಇದ್ದಂತೆ. ಅದು ಯಾವಾಗ ಬೇಕಾದರೂ ಯು ಟರ್ನ್ ಪಡೆಯಬಹುದು. ಹೀಗಾಗಿ ಯಾವಾಗ ಏನು ಆಗುತ್ತದೆ ಗೊತ್ತಿಲ್ಲ. ಆದ್ದರಿಂದ ಸತ್ತ ಮೇಲೆ ಸ್ವರ್ಗಕ್ಕೆ ಹೋಗುವುದಕ್ಕಿಂತ ಭೂಮಿಯಲ್ಲಿ ಜೀವಂತವಾಗಿ ಇದ್ದಾಗಲೇ ಸ್ವರ್ಗ ಸೃಷ್ಟಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಯಾರೂ ಸಹ ಸತ್ತಾಗ ಆಸ್ತಿ ಹೊತ್ತೊಯ್ಯುವುದಿಲ್ಲ. ನಮ್ಮ ಜತೆ ತೆಗೆದುಕೊಂಡು ಹೋಗುವುದು ಒಳ್ಳೆಯದು ಮತ್ತು ಕೆಟ್ಟದು ಮಾತ್ರ. ಬದುಕಿದ್ದಾಗ ಒಳ್ಳೆಯದನ್ನು ಮಾಡಿದರೆ, ನಮ್ಮನ್ನು ಸ್ಮರಿಸುತ್ತಾರೆ. ಇಲ್ಲದಿದ್ದರೆ, ನೆನಪಿಸಿಕೊಳ್ಳುವುದೂ ಇಲ್ಲ. ಆದ್ದರಿಂದ ದುಡ್ಡು-ಆಸ್ತಿ ಮಾಡುವುದನ್ನು ಬಿಟ್ಟು, ನಾಲ್ಕು ಜನರಿಗೆ ಒಳ್ಳೆಯದನ್ನು ಮಾಡಬೇಕೆಂದು ಸಲಹೆ ನೀಡಿದರು.
ಜೀವನದಲ್ಲಿ ಮನುಷ್ಯ ಖಷಿಯಿಂದಿರಲು ಹೃದಯದಿಂದ ದ್ವೇಷವನ್ನು ತೆಗೆದು ಹಾಕಬೇಕು. ಮನಸ್ಸಿನಿಂದ ದುಃಖ ಹಾಗೂ ಹೊಟ್ಟೆಕಿಚ್ಚು ಕಿತ್ತು ಹಾಕಬೇಕು. ಸರಳ ಜೀವನ ರೂಢಿಸಿಕೊಳ್ಳಬೇಕು. ಅನ್ಯರಿಂದ ಏನನ್ನೂ ನಿರೀಕ್ಷಿಸಬಾರದು ಎಂದು ಪಂಚಸೂತ್ರಗಳನ್ನು ಭೋದಿಸಿದರು.ಹುಟ್ಟಿನಿಂದ ಯಾರೂ ದೊಡ್ಡವರಾಗಲು ಸಾಧ್ಯವಿಲ್ಲ. ಕರ್ತವ್ಯದಿಂದ ಮಾತ್ರ ದೊಡ್ಡವರಾಗಬಹುದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸತತ ಪರಿಶ್ರಮ ಪಟ್ಟರೇ ಏನು ಬೇಕಾದರೂ ಆಗಬಹುದು.
ಇದು ಪರಿಶ್ರಮ, ಪ್ರಾಮಾಣಿಕತೆ ಮತ್ತು ವಿನಯವಿದ್ದಾಗ ಮಾತ್ರ ಸಾಧ್ಯ ಎಂದರು.ನಿಮ್ಮ ತಂದೆ-ತಾಯಿ ನನ್ನ ಮಗ ಎತ್ತರಕ್ಕೆ ಬೆಳೆಯಬೇಕೆಂಬ ಕನಸು ಕಂಡು, ಕµÀ್ಟಪಟ್ಟು ದುಡಿದು ಬಂದ ಹಣದಲ್ಲಿ ನಿಮ್ಮನ್ನು ಕಾಲೇಜಿಗೆ ಕಳುಹಿಸುವ, ನಿಮ್ಮ ತಲೆಗೆ ಅಕ್ಷರ ತುಂಬುವ ಗುರುಗಳನ್ನು ಹಾಗೂ ನಿಮ್ಮ ಕಾಲೇಜನ್ನೂ ಒಂದಿಗೂ ಮರೆಯದೇ ಸ್ಮರಿಸಬೇಕು. ಅಲ್ಲದೇ, ನೀವು ಕಾಲೇಜಿನಿಂದ ಜ್ಞಾನ ಪಡೆದು ಹೋದ ಮೇಲೆ ಕಾಲೇಜಿಗೂ ನಿಮ್ಮ ಕೈಲಾದಷ್ಟು ಕೊಡುಗೆ ನೀಡಬೇಕೆಂದು ಕಿವಿಮಾತು ಹೇಳಿದರು
ಯಾವುದೇ ಒಂದು ಸಂಸ್ಥೆ ಅಥವಾ ವ್ಯಕ್ತಿ 50 ವರ್ಷ ಪೂರೈಸುವುದು ಸಣ್ಣ ವಿಷಯವಲ್ಲ. ಕೆಳದ 50 ವರ್ಷಗಳ ಹಿಂದೆಯೇ ಆರ್.ಎಲ್.ಕಾನೂನು ಕಾಲೇಜು ಕಟ್ಟಿದ ರಾಜನಹಳ್ಳಿ ಲಕ್ಷ್ಮಣಶೆಟ್ಟಿ ಅವರನ್ನು ಸ್ಮರಿಸಲೇ ಬೇಕು. ಕಾಲೇಜು ಅಂದರೆ, ಬರೀ ಕಟ್ಟಡವಲ್ಲ. ಪ್ರೋಫೆಸರ್ಗಳೇ ಆ ಕಾಲೇಜಿನ ಆತ್ಮವಾಗಿರುತ್ತಾರೆ. ಒಳ್ಳೆಯ ಪ್ರೋಫೆಸರ್ಗಳಿಲ್ಲದಿದ್ದರೆ, ಕಾಲೇಜು ಕಟ್ಟಡ ಎµÀÄ್ಟ ಸುಸಜ್ಜಿತವಾಗಿದ್ದರೂ ಪ್ರಯೋಜನವಿಲ್ಲ ಎಂದರು.
ಕರ್ನಾಟಕ ಹೈಕೋರ್ಟ್ನ ನ್ಯಾಯಮೂರ್ತಿ ಎಚ್.ಬಿ.ಪ್ರಭಾಕರ್ ಶಾಸ್ತ್ರಿ ಮಾತನಾಡಿ, ಬಾಪೂಜಿ ವಿದ್ಯಾಸಂಸ್ಥೆಯ ಅಡಿಯಲ್ಲಿ ಆರಂಭವಾಗಿರುವ ಆರ್.ಎಲ್ ಕಾನೂನು ಕಾಲೇಜು 50 ವರ್ಷ ಪೂರೈಸಿರುವುದು ನಿಜಕ್ಕೂ ಸಾಧನೆಯ ಧ್ಯೋತಕವಾಗಿದೆ. ಇದು ಸಾಧ್ಯವಾಗಿದ್ದು ಆಡಳಿತ ಮಂಡಳಿಯಿAದ ಎಂದ ಅವರು, ಇದು ಕಾನೂನು ವಿದ್ಯಾಲಯ ವಾಗಿರುವುದರಿಂದ ಇದರ ಮೇಲೆ ಸಾಮಾಜಿಕ ಜವಾಬ್ದಾರಿ ಸಾಕಷ್ಟಿದೆ. ಅಲ್ಲದೇ, ತಗಾದೆಗಳು ಹೆಚ್ಚುತ್ತಿರುವ ಮತ್ತು ವಿಳಂಬಗತಿಯಲ್ಲಿ ನ್ಯಾಯದಾನ ಆಗುತ್ತಿರುವ ಸಂದರ್ಭದಲ್ಲಿ ಕಾನೂನು ಪದವಿಯನ್ನು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಮೇಲೂ ಸಾಕಷ್ಟು ಜವಾಬ್ದಾರಿಗಳಿವೆ. ಸಂವಿಧಾನದ ಧ್ಯೇಯೊದ್ದೇಶಗಳನ್ನು ಈಡೇರಿಸುವ ಹೊಣೆಗಾರಿಕೆ ನಿಮ್ಮ ಮೇಲಿದೆ ಎಂದರು.
ಹೈಕೋರ್ಟ್ನ ವಿಶ್ರಾಂತ ನ್ಯಾಯಮೂರ್ತಿ ಎಚ್.ಬಿಲ್ಲಪ್ಪ ಮಾತನಾಡಿ, ಒಬ್ಬ ವ್ಯಕ್ತಿ ಸಾಧನೆ ಮಾಡಲು ಬೋಧಕರ ಪ್ರೆರಣೆಯಿಂದ ಮಾತ್ರ ಸಾಧ್ಯವಾಗಲಿದೆ. ನಾನು ಆರ್.ಎಲ್. ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿದ್ದು, ಆಗ ನಮ್ಮ ಪ್ರಾಂಶುಪಾಲರಾಗಿದ್ದ ಪ್ರೊ.ಎಸ್.ಎಚ್. ಪಟೇಲರು, ಬೋಧಕರಾಗಿದ್ದ ಕಾಳಿಸ್ವಾಮಿ, ಚೆನ್ನಪ್ಪನವರು ಪಾಠ ಮಾಡುತ್ತಿದ್ದ ದೃಶ್ಯ ಇನ್ನೂ ಕಣ್ಣ ಮುಂದೆ ಬರುತ್ತದೆ ಎಂದು ಸ್ಮರಿಸಿದರು.
ಅಧ್ಯಕ್ಷತೆ ವಹಿಸಿದ್ದ ಬಾಪೂಜಿ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ, ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಮಾತನಾಡಿ, ಕರಿ ಕೋಟು ಹಾಕಿರುವ ವಕೀಲರು ನ್ಯಾಯ ಉಳಿಸಿದರೆ, ಬಿಳಿ ಕೋಟ್ ಹಾಕುವ ವೈದ್ಯರು ಜೀವ ಉಳಿಸುತ್ತಾರೆ. ಪಾಠ ಹೇಳಿದ ಗುರುಗಳನ್ನು ಮರೆಯದೇ ಗೌರವ ಕೊಡುವುದು ನಮ್ಮ ಭಾರತೀ ಸಂಸ್ಕೃತಿಯ ಪ್ರತೀಕವಾಗಿದೆ ಎಂದರು.
ರಾಜನಹಳ್ಳಿ ಮನೆತನದವರು ಸ್ಥಾಪಿಸಿದ ಬಾಪೂಜಿ ವಿದ್ಯಾಸಂಸ್ಥೆಯಿಂದಲ್ಲೇ ದಾವಣಗೆರೆ ಇಂದು ಶಿಕ್ಷಣ ನಗರಿ ಆಗಿರುವುದು. ಅವರು ವಿದ್ಯಾಸಂಸ್ಥೆ ಆರಂಭಿಸದೇ ಇದ್ದಿದ್ದರೆ, ಇಲ್ಲಿಂದ ಬೇರೆಡೆ ಓದಲು ಹೋಗಬೇಕಿತ್ತು ಎಂದರು.ಕಾರ್ಯಕ್ರಮದಲ್ಲಿ ಬಾಪೂಜಿ ವಿದ್ಯಾಸಂಸ್ಥೆಯ ಜಂಟಿ ಕಾರ್ಯದರ್ಶಿ, ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಬಾಪೂಜಿ ವಿದ್ಯಾಸಂಸ್ಥೆಯ ಆರ್.ಎಲ್.ರಮಾನಂದ್, ಕಿರುವಾಡಿ ಗಿರಿಜಮ್ಮ, ಅಥಣಿ ಎಸ್. ವೀರಣ್ಣ ಮತ್ತಿತರರು ಉಪಸ್ಥಿತರಿದ್ದರು.
ರೇಷ್ಮಾ ಸಂಗಡಿಗರು ಪ್ರಾರ್ಥಿಸಿದರು, ಪ್ರಿಯಾಂಕ ಮತ್ತು ಸಂಗಡಿಗರು ನಾಡಗೀತೆ ಹಾಡಿದರು. ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಡಾ.ಆರ್.ಎಲ್. ಉಮಾಶಂಕರ್ ಸ್ವಾಗತಿಸಿದರು. ಶಾಂತಿಕಾ ಮುರುಡೇಶ್ವರ್ ನಿರೂಪಿಸಿದರು. ಕಾಲೇಜಿನ ಪ್ರಾಂಶುಪಾಲ ಬಿ.ಎಸ್.ರೆಡ್ಡಿ ವಂದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2019/11/02_dvg_01.gif)