ಹೊಸದುರ್ಗ
ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟುಕೊಂಡು ಮದ್ಯವನ್ನು ಮಾರಾಟ ಮಾಡುತ್ತಿದ್ದ ಪ್ರಕರಣವನ್ನು ಪತ್ತೆಹಚ್ಚಿ ಲಕ್ಷಾಂತರ ರೂ. ಮೌಲ್ಯದ ಮದ್ಯವನ್ನು ವಶಪಡಿಸಿಕೊಂಡಿದ್ದ ಅಬಕಾರಿ ಅಧಿಕಾರಿಗಳು ಅದನ್ನು ಭೂಮಿಗೆ ಚೆಲ್ಲಿ ಬೆಂಕಿ ಹಚ್ಚಿ ನಾಶಪಡಿಸಿದ್ದಾರೆ.ಪಟ್ಟಣದ ಹೊರವಲಯದ ಅರಣ್ಯವೊಂದರ ಅಬಕಾರಿ ಅಧಿಕಾರಿಗಳ ಸಮ್ಮುಖದಲ್ಲಿ ಸಿಬ್ಬಂದಿ ಲಕ್ಷಾಂತರ ಮೌಲ್ಯದ ಅಕ್ರಮ ಮದ್ಯವನ್ನು ಸುರಿಯುವ ಮೂಲಕ ನಾಶ ಪಡಿಸಿದರು. ನಾಶ ಪಡಿಸಿದ ಮದ್ಯದಲ್ಲಿ ವಿಸ್ಕಿ, ಬ್ರಾಂದಿ ಹಾಗೂ ಬಿಯರ್ ಸೇರಿದಂತೆ ಹಲವು ಮಾದರಿಯ ಮದ್ಯವಿತ್ತು.
ಅಂದಾಜು 3 ಲಕ್ಷ ಮೌಲ್ಯದ 434 ಲೀಟರ್ ಮದ್ಯ, 67 ಲೀಟರ್ ಬಿಯರ್ ಬಾಟಲುಗಳನ್ನು ವಶಪಡಿಸಿ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡು ಒಟ್ಟು 17 ಪ್ರಕರಣಗಳಲ್ಲಿ ಮದ್ಯ ಬಾಟಲುಗಳನ್ನು ಜಪ್ತಿ ಮಾಡಿ ಅರಣ್ಯದಲ್ಲಿ ಗುಂಡಿ ತೆಗೆದು ಅದಕ್ಕೆ ಬಾಟಲಿಯಲ್ಲಿ ಹಾಗೂ ಪೌಚುಗಳಲ್ಲಿದ್ದ ಮದ್ಯವನ್ನು ಸುರಿದು ಬಳಿಕ ಮಣ್ಣು ಮುಚ್ಚಲಾಯಿತು. ಇನ್ನು ಮದ್ಯದ ಕವರ್, ಪೌಚುಗಳನ್ನು ಬೆಂಕಿ ಹಾಕಿ ಸುಟ್ಟು ನಾಶ ಮಾಡಲಾಯಿತು. ಕಳೆದ ಎರಡು ವರ್ಷಗಳಲ್ಲಿ ಗ್ರಾಮೀಣ ಪ್ರದೇಶಗಳು ಸೇರಿದಂತೆ ವಿವಿಧೆಡೆ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಸಂದರ್ಭ ದಾಳಿ ಮಾಡಿ ವಶಪಡಿಸಿಕೊಂಡ ಮದ್ಯವಾಗಿದ್ದು ಇವಗಳನ್ನು ದಾಸ್ತಾನು ಇರಿಸಲಾಗಿತ್ತು. ಇದೀಗ ವಾಯಿದೆ ಮುಗಿದ ಹಿನ್ನಲೆಯಲ್ಲಿ ಅವುಗಳನ್ನು ನಾಶ ಮಾಡಲಾಗಿದೆ ಎಂದು ಅಬಕಾರಿ ನಿರೀಕ್ಷಕರಾದ ಪ್ರಮೀಳಾ ತಿಳಿಸಿದರು.
ಈ ವೇಳೆ ಮಾತನಾಡಿದ ಚಿತ್ರದುರ್ಗದ ಉಪವಿಭಾಗದ ಅಬಕಾರಿ ಉಪಅಧೀಕ್ಷಕರಾದ ಶಿವಹರಳಯ್ಯ ಮಾತನಾಡಿ, ಗ್ರಾಮೀಣ ಪ್ರದೇಶದ ದಲಿತ ಕೇರಿಗಳು, ಗೂಡಂಗಡಿಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಿ ಜನಸಾಮಾನ್ಯರ ನೆಮ್ಮದಿಗೆ ಧಕ್ಕೆ ತಂದರೆ ಅಂಥವರ ವಿರುದ್ಧ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಿ ಜೈಲಿಗೆ ಕಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರಲ್ಲದೆ ಚಿತ್ರದುರ್ಗ ಜಿಲ್ಲೆಯಾದ್ಯಂತ ಅಕ್ರಮ ಮದ್ಯದ ಮಾರಾಟಕ್ಕೆ ಕಡಿವಾಣ ಹಾಕಿದ್ದೇವೆ.
ಸಾರ್ವಜನಿಕರಿಂದ ದೂರುಗಳು ಬಂದ ಸಂದರ್ಭದಲ್ಲಿ ನಾವು ದಾಳಿ ನಡೆಸಿದಾಗ ಮಾಲು ಸಮೇತವಾಗಿ ಸಿಕ್ಕಿಬಿದ್ದರೆ ಶಿಕ್ಷೆಯ ಜೊತೆಗೆ ದಂಡವನ್ನೂ ಪಾವತಿ ಮಾಡಬೇಕಾಗುತ್ತದೆ ಎಂದರಲ್ಲದೆ, ಮದ್ಯವನ್ನು ಅಕ್ರಮವಾಗಿ ಮಾರಾಟ ಮಾಡದಂತೆ ಮನವಿ ಮಾಡಿದರು. ಅಕ್ರಮ ಮದ್ಯ ಮಾರಾಟ ಮಾಡುವುದು ಕಂಡು ಬಂದರೆ ಸಾರ್ವಜನಿಕರು ಅಬಕಾರಿ ಇಲಾಖೆಗೆ ಮಾಹಿತಿ ನೀಡುವಂತೆಯೂ ಹೇಳಿದರು.
ಇದೇ ವೇಳೆ ಅಬಕಾರಿ ನಿರೀಕ್ಷಕರಾದ ಶಿವಪ್ರಸಾದ್, ಉಪನಿರೀಕ್ಷಕ ನಾಗರಾಜ್, ಅರುಣ್, ಹನುಮಂತಪ್ಪ, ರಂಗಸ್ವಾಮಿ, ಸಿದ್ಧಾರೂಢ, ಸಂಜೀವಮೂರ್ತಿ, ಬಡಿಗೇರ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
