ಬರಗೂರು
ಹತ್ತು, ಇಪ್ಪತ್ತು ಕುಂಟೆ ಜಮೀನು ಹೊಂದಿರುವ ರೈತರಿಗೂ ಹಸು, ಕುರಿ ಸಾಕಾಣಿಕೆ ಸಾಲವನ್ನು ಸಹಕಾರ ಸಂಘದ ಮೂಲಕ ನೀಡುವ ಯೋಜನೆಯನ್ನು ಸಿರಾ ತಾಲ್ಲೂಕಿನಿಂದಲೇ ಪ್ರಾರಂಭಿಸುವುದಾಗಿ ರಾಜ್ಯ ಅಪೆÉಕ್ಸ್ ಬ್ಯಾಂಕ್ ಮತ್ತು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆಎನ್ ರಾಜಣ್ಣ ತಿಳಿಸಿದರು.
ಅವರು ಸಿರಾ ತಾಲ್ಲೂಕಿನ ಬರಗೂರು ಪ್ರಾಥಮಿಕ ಕೃಷಿ ಸಹಕಾರ ಸಂಘದಲ್ಲಿ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡುತ್ತಾ, ಮೇವು, ನೀರು ಅನುಕೂಲ ಇಲ್ಲದೆ ಇರುವ ರೈತರಿಗೂ 30-40 ಸಾವಿರ ರೂ. ವರೆಗೂ ಕುರಿ ಸಾಕಾಣಿಕೆ ಸಾಲ ನೀಡಲಿದ್ದು, ತಮ್ಮ ಕುಟುಂಬಗಳು ಆರ್ಥಿಕವಾಗಿ ಅಭಿವೃದ್ದಿ ಪಡೆಯುತ್ತವೆ. ನೂರು, ಇನ್ನೂರು ಮಂದಿಯ ದಾಖಲಾತಿಗಳನ್ನು ಹೊದಗಿಸಿದಲ್ಲಿ ಕೋಟಿಗಟ್ಟಲೆ ಸಾಲ ನೀಡಲಾಗುವುದು.
ಭೂಮಿಯನ್ನು ಹೊಂದಿಲ್ಲದೇ ಇರುವಂತಹ ಬೀದಿ ವ್ಯಾಪಾರಿಗಳಿಗೂ ಸಾಲ ನೀಡಲಾಗುವುದು. ಸಹಕಾರ ಸಂಘಗಳು ಹೆಚ್ಚು ಸದೃಢ ಹೊಂದಬೇಕು ಎಂಬ ಉದ್ದೇಶದಿಂದ ಯೋಜನೆಗಳನ್ನು ತಂದಿದೆ. ಆ ಮೂಲಕ ರೈತರ ಅಭಿವೃದ್ದಿ ಸಹ ಅಷ್ಟೆ ಮುಖ್ಯವಾಗಿದೆ. ಸಾಲ ಪಡೆದ ರೈತರು ಅಕಾಲಿಕ ಮರಣಕ್ಕೆ ತುತ್ತಾದರೆ ಅಂತಹ ಸಾಲಗಾರರ ಸಾಲವನ್ನು ಮನ್ನಾ ಮಾಡಲಾಗಿದೆ ಎಂದರು.
ಬಂಡಾಯ ಸಾಹಿತಿ ಬರಗೂರು ರಾಮಚಂದ್ರಪ್ಪ ಮಾತನಾಡುತ್ತಾ, ಹಳ್ಳಿ ಗಾಡಿನ ಜನ ಸಾಕಷ್ಟು ಸಂಷ್ಟದಲ್ಲಿರುವ ಕಾಲ. ಕೃಷಿಗಾಗಿ ಶೇ. 12.5 ರಷ್ಟು ಬಜೆಟ್ನಲ್ಲಿ ಮೀಸಲಿಡುತ್ತಿದ್ದ ಹಣವು 2020 ರ ವೇಳೆಗೆ ಶೇ. 3.77ರಷ್ಟು ಆಗಿದೆ. ಕೃಷಿ ಪ್ರಧಾನವಾಗಿರುವ ದೇಶದಲ್ಲಿ ಕೃಷಿಗೆ ಮೀಸಲಿಡುವ ಹಣ ಕಡಿಮೆಯಾಗಿದೆ. ಕೃಷಿ ಪ್ರಧಾನ ಎಂಬುದು ಬರೀ ದೊಡ್ಡ ಘೋಷಣೆಯಾಗಿದೆ.
ಯುದ್ದೋದ್ಯಮ ಪ್ರಧಾನವಾದ ದೇಶ ಇದಾಗಿದೆ. ಶೇ. 65 ಕ್ಕಿಂತ ಹೆಚ್ಚು ರೈತರು ಹಾಗೂ ಶೇ. 75 ಕ್ಕಿಂತ ಹೆಚ್ಚು ಗ್ರಾಮೀಣ ಜನರಿಗೆ ಬೇಕಾಗುವ ಆರ್ಥಿಕ ನೀತಿಗಳು ಕುಂಠಿತವಾಗುತ್ತಿರುವ ಕಾಲದಲ್ಲಿದ್ದೇವೆ. ಸಣ್ಣ, ಅತಿ ಸಣ್ಣ ರೈತರು ಆತ್ಮºತ್ಯೆಗೆ ಒಳಗಾಗುತ್ತಿದ್ದಾರೆ. ಇಂತಹ ಸಹಕಾರ ಸಂಘಗಳು ನೆರವಿಗೆ ಬಂದಿದ್ದು, ರೈತರು ಹೆಚ್ಚು ಅಭಿವೃದ್ದಿ ಹೊಂದುವಂತೆ ತಿಳಿಸಿದರು.
ಬರಗೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜಿಎನ್ ಮೂರ್ತಿ, ಉಪಾಧ್ಯಕ್ಷ ಬಿ.ಸಿ ಸತೀಶ್, ಗುಜ್ಜಾರಪ್ಪ, ಮಾರಣ್ಣ, ದೊಡ್ಡಲಿಂಗಪ್ಪ, ಕೆಪಿ ಶ್ರೀನಿವಾಸ್, ಜಿಲ್ಲಾ ಕೇಂದ್ರ ಬ್ಯಾಂಕ್ನ ಸಿಬ್ಬಂದಿ, ತಾಲ್ಲೂಕಿನ ಪ್ರಾಥಮಿಕ ಕೃಷಿ ಸಹಕಾರ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರು, ಅಪೆಕ್ಸ್ ಬ್ಯಾಂಕ್ ಸಿ.ಇ.ಓಗಳು ಮತ್ತು ಅನೇಕ ಗಣ್ಯರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2020/02/photo-1.gif)