ಹುಳಿಯಾರು:
ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಲಾಕ್ಡೌನ್ ನಿಯಮ ಪಾಲಿಸಿ ಎಂದು ಟಿವಿ, ಪೇಪರ್, ಪೋನ್ ಸೇರಿದಂತೆ ಅಧಿಕಾರಿಗಳು, ಜನಪ್ರತಿನಿಧಿಗಳು ಹದಿನೈದಿಪ್ಪತ್ತು ದಿನಗಳಿಂದ ಬಡ್ಕೊಂತ್ತಿದ್ದರೂ ನಮ್ ಜನ ಮಾತ್ರ ಬದಲಾದಂತೆ ಕಾಣುತ್ತಿಲ್ಲ.
ಉಚಿತ ಹಾಲು ಕೊಡೊಕೋದ್ರೂ ಗುಂಪು ಸೇರ್ತಾರೆ. ಪಡಿತರ ವಿತರಣೆ ಮಾಡಕೋದ್ರೂ ನುಗ್ಗಿ ಬರ್ತಾರೆ. ಬ್ಯಾಂಕ್, ಪೊಸ್ಟ್ ಆಫೀಸ್, ದಿನಸಿ ಅಂಗಡಿ, ತರಕಾರಿ ಅಂಗಡಿ ಮುಂದೆ ಜಾತ್ರೆ ಸೇರ್ದಂಗೆ ಜನ ಸೇರ್ತಾರೆ. ಮಾಸ್ಕ್ ಧರಿಸಿ ಹೋಗುವ, ಸಾಮಾಜಿಕ ಅಂತರ ಕಾಯುವ ಕನಿಷ್ಠ ಸಾಮಾಜಿಕ ಬದ್ಧತೆ ನಮ್ ಜನರಿಗೆ ಇಲ್ಲದಾಗಿದೆ.
ಪರಿಣಾಮ ಈ ಎಲ್ಲಾ ಸ್ಥಳಗಳಲ್ಲೂ ಇಲ್ಲಿಯವರೆವಿಗೆ ಪೊಲೀಸರು ಬಂದು ಲಾಠಿ ರುಚಿ ತೋರಿಸಿದ ತರವಾಯ ಜನರಿಗೆ ಬುದ್ದಿ ಬರ್ತಿದೆ. ಲಾಠಿ ಏಟು ತಿಂದ ಬಳಿಕ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಕರ್ಚಿಫ್, ಟವಲ್ಗಳನ್ನೇ ಮಾಸ್ಕ್ ಮಾಡಿಕೊಂಡು ಹಾಲು, ರೇಷನ್, ತರಕಾರಿ ಕೊಳ್ಳುತ್ತಿದ್ದಾರೆ.
ಈಗ ಬಿತ್ತನೆ ಬೀಜ ವಿತರಣೆಗೂ ಪೊಲೀಸರು ಬರ್ಲೇಬೇಕಾದ ಅನಿವಾರ್ಯ ಪ್ರಸಂಗ ಬುಧವಾರ ಜರುಗಿದೆ. ಹೋಬಳಿಯಾದ್ಯಂತ ಉತ್ತಮ ಮಳೆಯಾದ ಪರಿಣಾಮ ರೈತರು ಬಿತ್ತನೆ ಬೀಜ ಖರೀದಿ ಆರಂಭಿಸಿದ್ದಾರೆ. ರೈತ ಸಂಪರ್ಕ ಕೇಂದ್ರದಲ್ಲಿ ರಿಯಾಯಿತಿ ಧರದಲ್ಲಿ ಸಿಗುವ ಬಿತ್ತನೆ ಬೀಜ ಖರೀದಿಯ ಭರಾಟೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಸರತಿಯಲ್ಲಿ ಮುಗಿಬೀಳುತ್ತಿದ್ದರು.
ಕೃಷಿ ಇಲಾಖೆಯ ಸಿಬ್ಬಂದಿ ಸೇರಿದಂತೆ ಕೆಲ ಪ್ರಜ್ಞಾವಂತ ನಾಗರೀಕರು ಸಾಮಾಜಿಕ ಅಂತರ ಕಾಯುವಂತೆ ಎಷ್ಟೇ ಬಡ್ಕೊಂಡ್ರೂ ಈ ಜನ ಮಾತ್ರ ಒಬ್ಬರ ಮೇಲೊಬ್ಬರು ಬಿದ್ದು ಪಹಣಿ, ಆಧಾರ್ ಕಾರ್ಡ್, ಜಾತಿ ಪತ್ರ ನೀಡಿ ಬೀಜ ಖರೀಧಿಸುತ್ತಿದ್ದರು. ಮಹಿಳೆಯರು, ವೃದ್ಧರು ಎಂದು ನೋಡದೆ ಗಂಟೆಗೂ ಹೆಚ್ಚು ಕಾಲ ಗುಂಪಿಗೆ ಗುಂಪು ಸೇರಿಕೊಳ್ಳುತ್ತಿತ್ತೇ ವಿನಃ ಚದುರಲಿಲ್ಲ.
ವಿಷಯ ತಿಳಿದ ಪಿಎಸ್ಐ ರಮೇಶ್ ಅವರು ಸ್ಥಳಕ್ಕೆ ದೌಡಾಯಿಸಿ ಬಂದು ಸಾಮಾಜಿಕ ಅಂತರ ಕಾಯುವಂತೆ ಹೇಳಿದರೂ ಸಹ ಕೌಂಟರ್ ಬಳಿ ಗುಂಪು ಚದುರಲಿಲ್ಲ. ಕೊನೆಗೆ ವಿಧಿಯಿಲ್ಲದೆ ದಡಂ ದಶಗುಣಂ ಎಂದು ಲಾಠಿ ರುಚಿ ತೋರಿಸಿದ ತರುವಾಯ ಸಾಮಾಜಿಕ ಅಂತರ ಕಾಯ್ದುಕೊಂಡರು. ಆಗ ರೈತ ಸಂಪರ್ಕ ಕೇಂದ್ರದ ಸುತ್ತಲಿದ್ದ ಸರತಿ ಸಾಲು ಅರ್ಧ ಕಿ.ಮೀ.ದೂರ ಚದುರಿತು. ಯಾವುದೇ ಗೊಂದಲ, ನೂಕಾಟ ಇಲ್ಲದೆ ಒಬ್ಬರಾದ ಮೇಲೊಬ್ಬರು ಸಾವದಾನದಿಂದ ಬಿತ್ತನೆ ಬೀಜ ಖರೀಧಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
