ಚಿತ್ರದುರ್ಗ
ಇತಿಹಾಸ ನಿರ್ಮಾಣದಲ್ಲಿ ಭೋವಿ ಸಮಾಜದ ಕೊಡುಗೆ ಅಪಾರವಾದದ್ದು. ನಿಜವಾದ ಇಂಜಿನಿಯರ್ಗಳು ಬೋವಿಯವರೆ. ಕಲ್ಲಲ್ಲಿ ಹೂವು ಹರಳಿಸುವ ಕಲಿಗಾರಿಗೆ ಹೊಂದಿರುವ ನಿಮಗೆ ಸಮಾಜಿಕ ನ್ಯಾಯ ಸಿಗಬೇಕಿದೆ ಎಂದು ಬಿಜೆಪಿ ರಾಜ್ಯಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ಚಿತ್ರದುರ್ಗದ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಬೋವಿ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು ಪ್ರಧಾನಿ ಮೋದಿಯವರು ಸಾಮಾಜಿಕ ನ್ಯಾಯದ ಪರವಾಗಿದ್ದಾರೆ. ಚಿತ್ರದುರ್ಗದಲ್ಲಿ ಭೋವಿ ಜನಾಂಗಕ್ಕೆ ಟೀಕೇಟ್ ನೀಡಲು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬರಲಿದ್ದು ಮುಂದಿನ ವಾರ ಒಂದು ತೀರ್ಮಾನ ಕೈಗೊಳ್ಳುತ್ತೇವೆ. ಯಾರಿಗೆ ಟೀಕೇಟ್ ಕೊಟ್ಟರು ನೀವು ಎಲ್ಲಾ ಜಾತಿಯವರೊಂದಿಗೆ ಸಹಮತದಿಂದ ನಡೆದು ಗೆಲುವಿಗಾಗಿ ಶ್ರಮಿಸುತ್ತೇವೆ ಎಂದು ಮಾತು ಕೊಟ್ಟರೆ ನಾನು ಅಮಿತ್ ಶಾ ಅವರೊಂದಿಗೆ ಮಾತನಾಡುತ್ತೇನೆ. ಒಬ್ಬರೆ ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ ಎಂದರು.
ನಮ್ಮ ಪ್ರಧಾನಿ ಮೋದಿಯವರು ಸಫಾಯಿ ಕರ್ಮಾಚಾರಿಗಳ ಪಾದ ತೊಳೆಯುವ ಮೂಲಕ ನಾವು ಸಾಮಾಜಿಕ ನ್ಯಾಯದ ಪರ ಇದ್ದೇವೆ ಎಂಬುದನ್ನ ಸಾಬೀತುಪಡಿಸಿದ್ದಾರೆ. ಹೀಗಾಗಿ ಶ್ರೀಗಳ ಆಶಯದಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಹಾಗೂ ಪ್ರಧಾನಿ ಮೋದಿ ಅವರ ಜೊತೆ ಮಾತನಾಡಿ ಇನ್ನು ನಾಲ್ಕೈದು ದಿನದಲ್ಲಿ ನಿಮ್ಮ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ, ಅದರಂತೆ ನೀವೂ ಕೂಡ ಎಲ್ಲಾ ಸಮುದಾಯದವರ ವಿಶ್ವಾಸಗಳಿಸುವ ಮೂಲಕ ನಿಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿ ಕಳುಹಿಸಿಕೊಡಬೇಕು ಎಂದು ಸಲಹೆ ನೀಡಿದರು.
ಈ ವೇಳೆ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಬೋವಿ ಗುರುಪೀಠದ ಸಿದ್ದರಾಮೇಶ್ವರ ಶ್ರೀಗಳು, ರಾಜ್ಯದಲ್ಲಿ ನಮ್ಮ ಸಮುದಾಯದ ನಲ್ವತ್ತು ಲಕ್ಷ ಮತದಾರರಿದ್ದಾರೆ, ದೇಶದಲ್ಲಿ ಹತ್ತು ಕೋಟಿಗೂ ಹೆಚ್ಚು ಮತದಾರರಿದ್ದಾರೆ, ಹೀಗಾಗಿ ಚಿತ್ರದುರ್ಗ ಸೇರಿದಂತೆ ರಾಜ್ಯದಲ್ಲಿ ನಮ್ಮ ಸಮುದಾಯದ ಐವರಿಗೆ ಬಿಜೆಪಿಯಿಂದ ಲೋಕಸಭೆ ಚುನಾವಣೆಗೆ ಟಿಕೆಟ್ ಕೊಡಿಸಬೇಕು ಎಂದು ಒತ್ತಾಯಿಸಿದರು
ನಮ್ಮ ಸಮುದಾಯ ಮತ್ತು ಆಕಾಂಕ್ಷಿಗಳು ಒಟ್ಟಾಗಿದ್ದಾರೆ, ಯಾರಿಗೇ ಟಿಕೆಟ್ ನೀಡಿದರೂ ಒಗ್ಗಟ್ಟಾಗಿ ಕೆಲಸ ಮಾಡಿ ನಮ್ಮ ಸಮುದಾಯದ ಅಭ್ಯರ್ಥಿಗಳನ್ನು ಗೆಲ್ಲಿಸುತ್ತೇವೆ ಎಂದು ವೇದಿಕೆಯಲ್ಲಿದ್ದ ಆಕಾಂಕ್ಷಿಗಳ ಪರ ಬ್ಯಾಟ್ ಬೀಸಿದರು.
ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಮಾತನಾಡುತ್ತ ಭೋವಿ ಸಮಾಜಕ್ಕೆ ಸೇರಿದ ಮಂಜರಿ ಹನುಮಂತಪ್ಪನವರು ವಿದ್ಯೆದಾನ ಮಾಡಿದ ಮಹಾನ್ ನಾಯಕ ಎಂದು ಸ್ಮರಿಸಿಕೊಂಡರು.ಹಿಂದಿನ ಕಾಂಗ್ರೆಸ್ ಹಾಗೂ ಈಗಿನ ಸಮ್ಮಿಶ್ರ ಸರ್ಕಾರದಿಂದ ಯಾವುದೇ ಅನುಕೂಲವಿಲ್ಲ. ಬಿ.ಎಸ್.ಯಡಿಯೂರಪ್ಪನವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ನೀರಾವರಿ ಯೋಜನೆಗೆ ಚಾಲನೆ ಕೊಟ್ಟರು. 2013 ರಲ್ಲಿ ಮೆಡಿಕಲ್ ಕಾಲೇಜು ಮಂಜೂರು ಮಾಡಲಾಯಿತು. ಹೆಚ್.ಆಂಜನೇಯರವರಿಂದ ಜಿಲ್ಲೆಯ ಅಭಿವೃದ್ದಿ ಕುಂಠಿತವಾಗಿದೆ ಎಂದು ಆಪಾದಿಸಿದರು.
ಹಿರಿಯೂರು ಶಾಸಕಿ ಪೂರ್ಣಿಮ ಶ್ರೀನಿವಾಸ್ ಮಾತನಾಡಿ ಯಾವುದೇ ಒಂದು ಸಮಾಜ ಮುಂದೆ ಬರಬೇಕಾದರೆ ಶಿಕ್ಷಣ ಬಹಳ ಮುಖ್ಯ. ಭೋವಿ ಸಮಾಜದವರು ಮಕ್ಕಳಿಗೆ ಶಿಕ್ಷಣ ಕೊಡಿಸಿ. ಬಿಜೆಪಿ.ಎಲ್ಲಾ ಜಾತಿಯವರ ಅಭಿವೃದ್ದಿಗೆ ಗಮನ ಕೊಡುತ್ತಿದೆ ಎಂದು ಹೇಳಿದರು.
ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸ್ಪರ್ಧಾಕಾಂಕ್ಷಿ ಮಾನಪ್ಪ ವಜ್ಜಲ್ ಮಾತನಾಡುತ್ತ ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಭೋವಿ ಸಮಾಜದ ಯಾರಿಗಾದರೂ ಟಿಕೇಟ್ ನೀಡಲಿ ಎಲ್ಲರೂ ಒಗ್ಗಟ್ಟಾಗಿ ಗೆಲ್ಲಿಸಿ ಮೋದಿರವರ ಕೈಬಲಪಡಿಸುತ್ತೇವೆ ಎಂದು ಭರವಸೆ ನೀಡಿದರು.
ಮಾಜಿ ಸಂಸದ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಆಕಾಂಕ್ಷಿ ಜನಾರ್ಧನಸ್ವಾಮಿ ಮಾತನಾಡುತ್ತ ಭೋವಿ ಜನಾಂಗ ಆರ್ಥಿಕ, ಸಾಮಾಜಿಕ,ಶೈಕ್ಷಣಿಕ, ರಾಜಕೀಯವಾಗಿ ಇನ್ನು ಹಿಂದುಳಿದಿದೆ. ಪರಿಶಿಷ್ಟ ಜಾತಿಯಲ್ಲಿದ್ದರೂ ಮೀಸಲಾತಿಯನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಆಗುತ್ತಿಲ್ಲ. ಬಿ.ಎಸ್.ಯಡಿಯೂರಪ್ಪನವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ನಮ್ಮ ಸಮಾಜಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. 543 ಸಂಸದರ ಸ್ಥಾನಗಳಲ್ಲಿ 85 ಕ್ಷೇತ್ರಗಳು ಪರಿಶಿಷ್ಟ ಜಾತಿಗೆ ಮೀಸಲಾಗಿದ್ದರು. ಭೋವಿ ಜನಾಂಗದ ಒಬ್ಬ ಸಂಸದರು ಇಲ್ಲದಿರುವುದು ನೋವಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.
ನಿವೃತ್ತ ಡಿ.ಸಿ.ಪಿ.ತಿಮ್ಮಣ್ಣ, ಜಿಲ್ಲಾ ಭೋವಿ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ, ಆನಂದಪ್ಪ, ನಿವೃತ್ತ ಡಿ.ವೈ.ಎಸ್ಪಿ. ಆಂಜನೇಯ, ಶಿರಾ ಅಂಜಿನಪ್ಪ, ಚಂದ್ರಶೇಖರ್, ವೆಂಕಟಪ್ಪ, ಆಂಜನೇಯ, ಮಂಜಣ್ಣ, ದೇವರಾಜ್, ರಘುಚಂದನ್, ಭೋವಿ ಸಂಘದ ಮಾಜಿ ಜಿಲ್ಲಾಧ್ಯಕ್ಷ ತಿಮ್ಮಣ್ಣ ಸೇರಿದಂತೆ ಭೋವಿ ಸಮಾಜದ ಅನೇಕ ಮುಖಂಡರು ವೇದಿಕೆಯಲ್ಲಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
