ತುಮಕೂರು:
ಕ್ಷೇತ್ರ ಜೆಡಿಎಸ್ ಪಾಲಾದಾಗಿನಿಂದ ಅಸಮಾಧಾನಗೊಂಡಿರುವ ಕಾಂಗ್ರೆಸ್ ಮುಖಂಡರು ಮರಳಿ ಈ ಕ್ಷೇತ್ರವನ್ನು ಪಡೆದುಕೊಳ್ಳಲು ಕಳೆದೆರಡು ದಿನಗಳಿಂದ ಹೋರಾಟ ಮುಂದುವರೆಸಿದ್ದಾರೆ. ಆದರೆ ಈ ಪ್ರಯತ್ನಕ್ಕೆ ಈ ತನಕವೂ ಸಕಾರಾತ್ಮಕ ಸ್ಪಂದನೆ ಸಿಕ್ಕಿಲ್ಲ.ಗುರುವಾರ ಸಂಜೆಯೇ ಡಾ.ಜಿ.ಪರಮೇಶ್ವರ್, ಕೆ.ಎನ್.ರಾಜಣ್ಣ, ವೆಂಕಟರವಣಪ್ಪ, ಕೆ.ಷಡಕ್ಷರಿ ಸೇರಿದಂತೆ ಜಿಲ್ಲೆಯ ಮುಖಂಡರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ್ದರು. ದೇವೇಗೌಡರನ್ನೂ ಡಾ.ಜಿ.ಪರಮೇಶ್ವರ್ ಭೇಟಿ ಮಾಡಿದ್ದಾರೆ. ತುಮಕೂರಿನಲ್ಲಿ ನೀವೇ ಸ್ಪರ್ಧಿಸುವುದಾದರೆ ನಮ್ಮ ಅಭ್ಯಂತರವಿಲ್ಲ. ಆದರೆ ಬೇರೆಯವರು ಸ್ಪರ್ಧಿಸುವುದಾದರೆ ನಾವು ಸಂಕಷ್ಟಕ್ಕೆ ಸಿಲುಕಲಿದ್ದೇವೆ ಎಂಬುದಾಗಿ ದೇವೇಗೌಡರ ಬಳಿ ತಮ್ಮ ಅಳಲು ತೋಡಿಕೊಂಡಿದ್ದಾರೆ.
ತುಮಕೂರು ಕ್ಷೇತ್ರವನ್ನು ಮರಳಿ ಪಡೆಯಲು ಕಾಂಗ್ರೆಸ್ ಮುಖಂಡರು ರಾಜಧಾನಿಯಲ್ಲಿ ಪ್ರಯತ್ನ ಮುಂದುವರೆಸಿದ್ದರೆ, ಇತ್ತ ತುಮಕೂರಿನಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಪ್ರತಿಭಟನೆಯ ಎಚ್ಚರಿಕೆ ರವಾನಿಸಿದ್ದಾರೆ. ಪತ್ರಿಕಾ ಗೋಷ್ಠಿಗಳ ಮೂಲಕ ತಮ್ಮ ಅತೃಪ್ತಿ ಹೊರ ಹಾಕಿದ್ದಾರೆ. ನಾವು ಇದುವರೆಗೆ ಕಾಂಗ್ರೆಸ್ ಪರ ಪ್ರಚಾರ ಮಾಡಿ ಈ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗೆ ಮತ ಕೇಳುವುದು ಹೇಗೆ? ಇದೊಂದು ಧರ್ಮ ಸಂಕಟ ಅಲ್ಲವೆ ಎಂಬ ಪ್ರಶ್ನೆಯನ್ನು ಕಾಂಗ್ರೆಸ್ ಮುಖಂಡರು ಮುಂದಿಟ್ಟಿದ್ದಾರೆ.
ಸದ್ಯಕ್ಕಂತೂ ತುಮಕೂರು ಕ್ಷೇತ್ರವನ್ನು ಕಾಂಗ್ರೆಸ್ಗೆ ಬಿಟ್ಟು ಕೊಡುವ ಯಾವ ಸೂಚನೆಗಳೂ ಜೆಡಿಎಸ್ನಲ್ಲಿ ಕಂಡುಬರುತ್ತಿಲ್ಲ. ಚುನಾವಣೆಗೆ ಸಜ್ಜಾಗಿ ಎಂಬ ಸಂದೇಶವನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಈಗಾಗಲೇ ಜೆಡಿಎಸ್ ಮುಖಂಡರಿಗೆ ರವಾನಿಸಿದ್ದಾರೆ. ಜೆಡಿಎಸ್ ಬೇಡಿಕೆ ಇಟ್ಟಿದ್ದು 12 ಕ್ಷೇತ್ರಗಳು. ಈಗ ಸಿಕ್ಕಿರುವುದು 8 ಕ್ಷೇತ್ರಗಳು. ಹೀಗಾಗಿ ಸಂಖ್ಯೆಯನ್ನು ಮತ್ತೆ ಕಡಿಮೆ ಮಾಡಿಕೊಳ್ಳಲು ಜೆಡಿಎಸ್ ಸಿದ್ಧವಿಲ್ಲ ಎಂದೇ ಹೇಳಲಾಗುತ್ತಿದೆ.
ಹಾಸನ ಮತ್ತು ಮಂಡ್ಯ ಕ್ಷೇತ್ರಗಳನ್ನು ಮೊಮ್ಮಕ್ಕಳಿಗೆ ಬಿಟ್ಟುಕೊಟ್ಟ ನಂತರ ದೇವೇಗೌಡರು ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆಂಬ ಕುತೂಹಲ ಮನೆ ಮಾಡಿದೆ. ಬೆಂಗಳೂರು ಉತ್ತರ ಅಥವಾ ತುಮಕೂರು ಈ ಎರಡರಲ್ಲಿ ಯಾವುದಾದರೊಂದನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬ ಚರ್ಚೆಗಳು ಗರಿಗೆದರಿವೆ. ಎರಡೂ ಕ್ಷೇತ್ರಗಳು ಜೆಡಿಎಸ್ಗೆ ಸುಲಭ ಎಂದೇನಲ್ಲ. ಈ ಎರಡೂ ಕಡೆ ಕಾಂಗ್ರೆಸ್ ಪ್ರಾಬಲ್ಯ ಇದೆ. ಸ್ಥಳೀಯ ಮುಖಂಡರ ಬೆಂಬಲ ಸಿಕ್ಕಿದರಷ್ಟೇ ಈ ಎರಡೂ ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲುವು ಸಾಧ್ಯ. ಇಂತಹ ಸಾಧ್ಯಾಸಾಧ್ಯತೆಗಳ ಬಗ್ಗೆ ಲೆಕ್ಕಾಚಾರಗಳು ಮುಂದುವರೆದಿವೆ.
ಈ ನಡುವೆ ಶುಕ್ರವಾರ ಸಂಜೆ ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಡೆದ ಮುಖಂಡರ ಸಭೆಯಲ್ಲಿ ಮೈತ್ರಿ ಪಕ್ಷಗಳಿಂದ ದೇವೇಗೌಡರಿಗೆ ಆಹ್ವಾನ ನೀಡಲಾಗಿದೆ. ದೇವೇಗೌಡರು ಒಪ್ಪಿಕೊಂಡರೆ ತುಮಕೂರು ಕ್ಷೇತ್ರದ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬ ಕುತೂಹಲ ಹೆಚ್ಚಾಗಲಿದೆ.
ತುಮಕೂರು ಕ್ಷೇತ್ರವನ್ನು ಗಮನಿಸಿದರೆ ಇಲ್ಲಿ ಜೆಡಿಎಸ್ ಗೆಲುವು ನಿರಾಯಾಸ ಅಲ್ಲ. ಕಳೆದ ಬಾರಿ ಇಲ್ಲಿ ಸ್ಪರ್ಧಿಸಿದ್ದ ಜೆಡಿಎಸ್ ಅಭ್ಯರ್ಥಿ ಮೂರನೇ ಸ್ಥಾನದಲ್ಲಿದ್ದರು. ಆಗಿನ ಪರಿಸ್ಥಿತಿ ಮತ್ತು ಲೆಕ್ಕಾಚಾರಗಳು ಬೇರೆಯೇ ಇರಬಹುದು. ಮೈತ್ರಿ ಹಿನ್ನೆಲೆಯಲ್ಲಿ ಗೆಲುವು ಸಾಧಿಸಬಹುದು ಎಂಬುದು ಜೆಡಿಎಸ್ ವರಿಷ್ಠರ ಲೆಕ್ಕಾಚಾರ. ಈ ಲೆಕ್ಕಾಚಾರಕ್ಕೆ ಪೂರಕವಾಗಿ ಇಲ್ಲಿನ ಕಾಂಗ್ರೆಸ್ ಮುಖಂಡರು ನಿರ್ಧಾರ ಕೈಗೊಳ್ಳಬೇಕು.
ಅಂತಹ ವಾತಾವರಣ ನಿರ್ಮಾಣವಾಗಬೇಕು. ಆದರೆ ಆಗುತ್ತಿರುವುದೇ ಬೇರೆ. ತುಮಕೂರನ್ನು ಜೆಡಿಎಸ್ಗೆ ಬಿಟ್ಟುಕೊಟ್ಟಿರುವುದನ್ನು ಈಗಾಗಲೇ ಬಹಿರಂಗವಾಗಿ ವಿರೋಧಿಸಲಾಗುತ್ತಿದೆ. ಈ ವಿರೋಧ ಎಷ್ಟು ದಿನಗಳ ಕಾಲ ಎಂಬ ಪ್ರಶ್ನೆಯನ್ನು ಕೆಲವರು ಮುಂದಿಡುತ್ತಾರೆ.
ತುಮಕೂರಿನಲ್ಲಿ ಕೆಲವು ಕಡೆ ಜೆಡಿಎಸ್ಗೆ ನೆಲೆ ಇರುವುದನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ.
ಆದರೆ ಪ್ರಸ್ತುತ ಲೋಕಸಭಾ ಚುನಾವಣಾ ವಿಷಯಕ್ಕೆ ಬಂದಾಗ ಪಕ್ಷಕ್ಕಿಂತ ಹೆಚ್ಚಾಗಿ ಜಾತಿ ಪ್ರಮುಖ ಆದ್ಯತೆ ಪಡೆಯುತ್ತದೆ ಎಂಬುದನ್ನು ಕಳೆದ ಲೋಕಸಭಾ ಚುನಾವಣೆಯಲ್ಲಿಯೇ ಮತದಾರರು ತೋರಿಸಿಕೊಟ್ಟಿದ್ದಾರೆ. ಇಲ್ಲಿ ಒಕ್ಕಲಿಗರು, ದಲಿತರು, ಒಬಿಸಿ ಇರುವಂತೆಯೇ ಸಾಕಷ್ಟು ಸಂಖ್ಯೆಯಲ್ಲಿ ಲಿಂಗಾಯತರು ಮತ್ತು ಕುರುಬ ಜನಾಂಗ ಇದೆ. ಇವೆಲ್ಲವೂ ಪರಿಗಣಿತವಾಗಿರುವ ಅಂಶಗಳು.
ಡಾ.ಜಿ.ಪರಮೇಶ್ವರ್ ಮೈತ್ರಿ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯೂ ಆಗಿರುವುದರಿಂದ ಹಾಗೂ ಎಸ್.ಪಿ.ಮುದ್ದಹನುಮೇಗೌಡರು ತನ್ನ ಆಪ್ತ ಬಳಗದವರೂ ಆಗಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ಗೆ ಈ ಕ್ಷೇತ್ರವನ್ನು ಉಳಿಸಿಕೊಳ್ಳುವತ್ತ ಪ್ರಯತ್ನ ಮುಂದುವರೆಸಿದ್ದಾರೆ. ತನಗೆ ಹಿನ್ನಡೆ ಆಗಬಾರದು ಎಂಬ ಎಚ್ಚರಿಕೆಯೂ ಅವರಲ್ಲಿದೆ. ಆದರೆ ಈ ಎಲ್ಲಾ ಪ್ರಯತ್ನಗಳೂ ಈಡೇರಬೇಕಿರುವುದು ದೊಡ್ಡಗೌಡರಿಂದ ಮಾತ್ರವೇ ಸಾಧ್ಯ.
ದೆಹಲಿಯಲ್ಲಿ ದೇವೇಗೌಡರು ಹಾಗೂ ರಾಹುಲ್ ಗಾಂಧಿ ಇಬ್ಬರೂ ಸಾಕಷ್ಟು ಚರ್ಚೆ ನಡೆಸಿದ್ದರು. ತುಮಕೂರು ಸೇರಿದಂತೆ ಕೆಲವು ಕ್ಷೇತ್ರಗಳನ್ನು ತನ್ನದಾಗಿಸಿಕೊಳ್ಳಲು ಅಲ್ಲಿಯೇ ಬೇಡಿಕೆ ಇಟ್ಟಿದ್ದರು. ಈ ಎಲ್ಲ ತೀರ್ಮಾನಗಳು ನಡೆದಿರುವುದು ಹೈಕಮಾಂಡ್ ಮಟ್ಟದಲ್ಲಿ. ಹೀಗಾಗಿ ಕ್ಷೇತ್ರ ವಾಪಸ್ ಪಡೆದುಕೊಳ್ಳುವುದು ಅಷ್ಟು ಸುಲಭವಲ್ಲ ಎನ್ನಬಹುದಾದರೂ ಜೆಡಿಎಸ್ ವರಿಷ್ಠರು ಮನಸ್ಸು ಮಾಡಿದರೆ ಎಲ್ಲವೂ ಸಾಧ್ಯ ಎನ್ನುತ್ತವೆ ರಾಜಕೀಯ ಮೂಲಗಳು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
