ಹೊಸದುರ್ಗ :
ತಾಲ್ಲೂಕಿನ ಶ್ರೀರಾಂಪುರದಲ್ಲಿ ಬಸ್ ನಿಲ್ದಾಣದ ಸಮೀಪ ಭಾನುವಾರ ಮುಂಜಾನೆ ಲಾರಿಯೊಂದು ವಿದ್ಯುತ್ ಕಂಬ ಸೇರಿದಂತೆ ಅಂಗಡಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಗಾಯಗೊಂಡಿರುವ ಘಟನೆ ನಡೆದಿದೆ.
ಗಾಯಗೊಂಡವರನ್ನು ಚಾಮರಾಜನಗರ ಜಿಲ್ಲೆಯ ಕಾಗವಾಡಿ ಗ್ರಾಮದ ನಂದೀಶ ಹಾಗೂ ಮಧು ಎಂದು ಗುರುತಿಸಲಾಗಿದ್ದು, ಹೊಸದುರ್ಗ ಕಡೆಯಿಂದ ಬರುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬಲಬದಿಯಲ್ಲಿರುವ ವಿದ್ಯುತ್ ಕಂಬ ಹಾಗೂ ಹಳೆಯ ಮಿನಿಟ್ಯಾಂಕ್ ಹಾಗೂ ಮಳಿಗೆಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ವಿದ್ಯುತ್ ಕಂಬ ಮುರಿದು ಬಿದ್ದು ಮಳಿಗೆಗೆ ಹಾನಿಯಾಗಿದೆ. ಈ ಕುರಿತು ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಪ್ಪಿದ ಭಾರಿ ಅನಾಹುತ:
ಡಿಕ್ಕಿ ಹೊಡೆದ ತಕ್ಷಣವೆ ಕಂಬದಲ್ಲಿನ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ ಅನಾಹುತ ತಪ್ಪಿದೆ. ಇದೇ ಜಾಗದಲ್ಲಿ ಹಗಲು ವೇಳೆ ಕಬ್ಬಿನ ಹಾಲಿನ ಜ್ಯೂಸ್ ಸೆಂಟರ್ ನೆಡಸಲಾಗುತ್ತದೆ. ಸದಾ ಜನ ಜಂಗುಳಿಯಿಂದ ಕೂಡಿರುವ ಈ ಜಾಗದಲ್ಲಿ ಹಗಲು ವೇಳೆ ಏನಾದರೂ ಈ ಘಟನೆ ಸಂಭವಿಸಿದ್ದಿದ್ದರೆ ಭಾರಿ ಅನಾಹುತವಾಗುತ್ತಿತ್ತು.
ರಸ್ತೆ ಅಗಲೀಕರಣಕ್ಕೆ ಒತ್ತಾಯ:
ಮುಖ್ಯರಸ್ತೆಗೆ ಹೊಂದಿಕೊಂಡಂತೆ ನಿರ್ಮಿಸಲಾಗಿರುವ ಅಂಗಡಿಗಳನ್ನು ತೆರವುಗೊಳಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ರಸ್ತೆ ಅಗಲೀಕರಣ ಮಾಡಿ ಪೊಲೀಸ್ ಠಾಣೆಯ ಮುಂಭಾಗದಿಂದ ಹೊಸ ಬಸ್ ನಿಲ್ದಾಣದವರೆಗೆ ರಸ್ತೆ ವಿಭಜಕ ಅಳವಡಿಸಬೇಕೆಂದು ಸಾರ್ವಜನಿಕರು ಶಾಸಕರನ್ನು ಒತ್ತಾಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ