ಮಧುಗಿರಿ
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಪ್ರಾಥಮಿಕ ಶಿಕ್ಷಕರ ಸಂಘಗಳ ವತಿಯಿಂದ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಉಪವಿಭಾಗಾಧಿಕಾರಿ ಎಚ್.ಜಿ. ಚಂದ್ರಶೇಖರಯ್ಯರವರಿಗೆ ಮಂಗಳವಾರ ಮನವಿ ಪತ್ರ ಸಲ್ಲಿಸಿದರು.
ಪಟ್ಟಣದ ಡಿಡಿಪಿಐ ಕಚೇರಿ ಮುಂಭಾಗ ಕೊರಟಗೆರೆ, ಶಿರಾ, ಪಾವಗಡ ಮತ್ತು ಮಧುಗಿರಿ ತಾಲ್ಲೂಕಿನ ಶಿಕ್ಷಕರು ಜಮಾವಣೆಗೊಂಡು ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಸರಕಾರವನ್ನು ಒತ್ತಾಯಿಸಿದರು.
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ವಿ.ವೆಂಕಟೇಶಯ್ಯ ಮಾತನಾಡಿ, ಶಿಕ್ಷಕರುಗಳನ್ನು 1 ರಿಂದ 5ನೇ ವರ್ಗಕ್ಕೆ ಸೀಮಿತಗೊಳಿಸಿದ ಆದೇಶವನ್ನು ತಕ್ಷಣ ರದ್ದು ಮಾಡಬೇಕು. ನಿರ್ದೇಶಕರ ಟಿಪ್ಪಣಿಯಂತೆ 2014ಕ್ಕಿಂತ ಮೊದಲು ನೇಮಕವಾದ ಪ್ರಾಥಮಿಕ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹಾಲಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಪದವೀಧರ ಶಿಕ್ಷಕರೆಂದು ಪರಿಗಣಿಸಿ, ಪದವೀಧರ ಪ್ರಾಥಮಿಕ ಶಿಕ್ಷಕರ ವೇತನ ಶ್ರೇಣಿ ನಿಗದಿಗೊಳಿಸಬೇಕೆಂದು ಆಗ್ರಹಿಸಿದರು.
ತಾಲ್ಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ವೆಂಕಟರಂಗಾರೆಡ್ಡಿ ಮಾತನಾಡಿ, ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಶಿಕ್ಷಕರ ಸಂಘದಿಂದ ಪ್ರತಿಭಟನೆಗೆ ಉತ್ತಮವಾದಂತಹ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಜ್ಯದ ಎಲ್ಲಾ ಪ್ರಾಥಮಿಕ ಶಾಲೆಗಳಲ್ಲಿ ಎಲ್.ಕೆ.ಜಿ ಹಾಗೂ ಯು.ಕೆ.ಜಿ ತರಗತಿಗಳನ್ನು ಪ್ರಾರಂಭಿಸಬೇಕು. ಎಸ್.ಎಸ್.ಎ ಶಿಕ್ಷಕರನ್ನು ಸಾಮಾನ್ಯ ಶಿಕ್ಷಕರಾಗಿ ಪರಿಗಣಿಸಬೇಕು. ಶಿಕ್ಷಕರ ವರ್ಗಾವಣೆಯಲ್ಲಿರುವ ಲೋಪದೋಷಗಳನ್ನು ಸರಿಪಡಿಸಬೇಕು. ಎನ್ಪಿಎಸ್ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಬೇಕು ಹಾಗೂ ಗ್ರಾಮೀಣ ಕೃಪಾಂಕ ಶಿಕ್ಷಕರಿಗೆ ಸಮಾನ ವೇತನ ನೀಡಬೇಕೆಂದು ಆಗ್ರಹಿಸಿದರು.
ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ರನ್ನು ತರಾಟೆಗೆ ತೆಗೆದು ಕೊಂಡ ಮಹಿಳಾ ಶಿಕ್ಷಕಿಯರು :
ನೀವಾಗಲಿ, ರಾಜ್ಯ ಸಂಘದವರಾಗಲಿ ಮಹಿಳಾ ಶಿಕ್ಷಕಿಯರ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗುತ್ತಿಲ್ಲ. ಹಲವು ವರ್ಷಗಳಿಂದ ಒಂದೇ ಕಡೆ ನಾವುಗಳು ಕಾರ್ಯ ನಿರ್ವಹಿಸುತ್ತಿದ್ದು, ನಮಗೆ ವರ್ಗಾವಣೆಯಾಗಲು ಸಾಧ್ಯವಾಗುತ್ತಿಲ್ಲ. ನಮ್ಮನ್ನು ನೀವು ಪ್ರತಿಭಟನೆಗೆ ಮಾತ್ರ ಸೀಮಿತಗೊಳಿಸಿದ್ದೀರಿ ಹಾಗೂ ಪ್ರತಿಭಟನೆಗಳಲ್ಲಿ ಮಾತನಾಡಲು ಅವಕಾಶ ಕೊಡುತ್ತಿಲ್ಲ. ಹೀಗಾದರೆ ಹೇಗೆ? ನಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲಾದರೂ ಬಿಡಿ ಎಂದಾಗ ಮತ್ತೊಮ್ಮೆ ಎಸಿ ಕಚೆರಿಯ ಮುಂಭಾಗದಲ್ಲಿ ಶಿಕ್ಷಕಿಯರು ಕುಳಿತಾಗ ಉಪವಿಭಾಗಾಧಿಕಾರಿಗಳು ಮತ್ತೊಮ್ಮೆ ಕಚೆರಿಯಿಂದ ಎದ್ದು ಬಂದು ಮಹಿಳಾ ಶಿಕ್ಷಕಿಯರು ಸೇರಿದಂತೆ ಎಲ್ಲಾ ಶಿಕ್ಷಕರ ಕೆಲ ಸಮಸ್ಯೆಗಳು ನೈಜವಾಗಿವೆ. ಆದಷ್ಟೂ ಸಮಸ್ಯೆಗಳ ನಿವಾರಣೆಯ ಬಗ್ಗೆ ರಾಜ್ಯ ಸಂಘಕ್ಕೆ ಪತ್ರ ಬರೆಯಲಾಗುವುದು ಎಂದರು.
ಪ್ರತಿಭಟನೆಯಲ್ಲಿ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಪದಾಧಿಕಾರಿಗಳಾದ ಓಂಕಾರೇಶ್ವರ.ಟಿ.ಎನ್, ರಂಗಸ್ವಾಮಿ ಕೆ.ಎಸ್, ಬಿ.ಜಿ.ಹನುಮಂತರಾಯಪ್ಪ, ಎಸ್.ವಿ ರಮೇಶ್, ಸಂಜಯ್, ರಾಮದಾಸು, ತೋಟದಪ್ಪ, ಸಂಪತ್, ರಂಗಧಾಮಯ್ಯ, ಮೀನಾಕ್ಷಿ, ನಾಗೇಶ್, ಬಿ.ವಿ.ಹನುಮಂತಯ್ಯ, ಬಿ.ಡಿ.ಸಿದ್ದಗಂಗಮ್ಮ, ರಕೀಬ್, ಎಸ್.ಸಿ.ಎಸ್.ಟಿ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಫಣೀಂದ್ರನಾಥ್ ಹಾಗೂ ಶೈಕ್ಷಣಿಕ ಜಿಲ್ಲೆಯ ಶಿಕ್ಷಕರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
