ಸಚಿವ ಮಾದುಸ್ವಾಮಿ ರಾಜೀನಾಮೆ ನೀಡಬೇಕು : ಪಿ.ರಾಜಕುಮಾರ್

ದಾವಣಗೆರೆ:

    ಕನಕ ಗುರುಪೀಠದ ಹೊಸದುರ್ಗ ಶಾಖಾ ಮಠದ ಶ್ರೀಈಶ್ವರಾನಂದಪುರಿ ಸ್ವಾಮೀಜಿ ಅವರೊಂದಿಗೆ ಅನುಚಿತವಾಗಿ ವರ್ತಿಸಿರುವ ಕಾನೂನು ಮತ್ತು ಸಂಸದೀಯ ಸಚಿವ ಮಾದುಸ್ವಾಮಿ ತಕ್ಷಣವೇ ಶ್ರೀಗಳ ಹಾಗೂ ಕುರುಬ ಸಮುದಾಯದ ಕ್ಷಮೆ ಯಾಚಿಸಬೇಕು ಹಾಗೂ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಪ್ರದೇಶ ಕುರುಬರ ಸಂಘದ ಸಂಘಟನಾ ಕಾರ್ಯದರ್ಶಿ ಪಿ.ರಾಜಕುಮಾರ್ ಆಗ್ರಹಿಸಿದ್ದಾರೆ.

    ಈ ಕುರಿತು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2006ರಲ್ಲಿ ತುಮಕೂರು ಜಿಲ್ಲೆಯ ಹುಳಿಯಾರು ಪಟ್ಟಣದಲ್ಲಿ ಪುರಸಭೆಯ ಪರವಾನಿಗೆ ಪಡೆದು, ಅಲ್ಲಿಯ ವೃತ್ತವೊಂದಕ್ಕೆ ಕನಕ ವೃತ್ತ ಎಂಬುದಾಗಿ ನಾಮಕರಣ ಮಾಡಿ ವೃತ್ತದಲ್ಲಿ ನಾಮಫಲಕ ಅಳವಡಿಸಲಾಗಿತ್ತು. ಆದರೆ, ಕಾನೂನು ಮತ್ತು ಸಂಸದೀಯ ಸಚಿವ ಹಾಗೂ ಜಿಲ್ಲಾ ಮಂತ್ರಿ ಮಾದುಸ್ವಾಮಿ ಆ ನಾಮಫಲಕವನ್ನು ಕಿತ್ತೊಗೆಯುವ ಮೂಲಕ ಕುರುಬ ಸಮಾಜದ ವಿರುದ್ಧ ಕ್ರೌರ್ಯ ಮೆರೆದಿರುವುದು ಅತ್ಯಂತ ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಈ ಘಟನೆಯ ಹಿನ್ನೆಲೆಯಲ್ಲಿ ಶ್ರೀಈಶ್ವರಾನಂದಪುರಿ ಸ್ವಾಮೀಜಿ ಹುಳಿಯಾರಿನ ಎಲ್ಲಾ ಸಮಾಜದ ಪ್ರತಿನಿಧಿಗಳೊಂದಿಗೆ ಇತ್ತೀಚೆಗೆ ಶಾಂತಿ ಸಭೆಯನ್ನು ಕರೆದು ಚರ್ಚಿಸುತ್ತಿದ್ದಾಗ, ಸಭೆಯಲ್ಲಿ ಮಾತಿಗೆ ಮಾತು ಬೆಳೆದು ಸಚಿವ ಮಾಧುಸ್ವಾಮಿ ತಮ್ಮ ಸ್ಥಾನದ ಘನತೆ ಮತ್ತು ಸೌಜನ್ಯ ಮರೆತು, ಸ್ವಾಮೀಜಿಗಳನ್ನು ಏಕವಚನದಲ್ಲಿ ನಿಂದಿಸಿ, ಉದ್ಧಟತನ ಮೆರೆದಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

     ಸಭೆಯಲ್ಲಿ ನಡೆಯುತ್ತಿದ್ದ ವಾಗ್ವಾದ, ಸಂಘರ್ಷವನ್ನು ಗಮನಿಸಿದ ಪೊಲೀಸರು ಸಭೆಯಿಂದ ಸ್ವಾಮೀಜಿ ಹಾಗೂ ಸಚಿವರನ್ನು ಕರೆದುಕೊಂಡು ಹೋದ ಬಳಿಕ ನಮ್ಮ ಸಮುದಾಯದ ಮುಖಂಡರೊಬ್ಬರು ಮಾಧುಸ್ವಾಮಿಗೆ ಕರೆ ಮಾಡಿ ನಮ್ಮ ಶ್ರೀಗಳನ್ನು ಏಕವಚನದಲ್ಲಿ ನಿಂದಿಸಿದ್ದೇಕೆ? ಎಂಬುದಾಗಿ ಪ್ರಶ್ನಿಸಿದ್ದಕ್ಕೆ, ಹೌದು ನಿಂದಿಸಿದ್ದೇನೆ ಏನು ಮಾಡ್ಕೋತೀಯಾ? ಫೋನ್ ಇಡೋ ಎಂಬುದಾಗಿ ದಬಾಯಿಸಿದ್ದಾರೆ. ಇದು ಸಚಿವ ಸ್ಥಾನದ ಘನತೆಗೆ ತಕ್ಕುದಲ್ಲ ಎಂದು ಹೇಳಿದರು.

     ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವಾಗ ಸಮಗ್ರ ಜನತೆಯ ನಾಯಕತ್ವ ವಹಿಸುವುದಾಗಿ ಪ್ರತಿಜ್ಞೆ ಮಾಡಿ, ಸಚಿವನಾದ ಮೇಲೆ ಮಾಧುಸ್ವಾಮಿ ನಾನು ಒಂದು ಸಮುದಾಯದ ವ್ಯಕ್ತಿ ಎಂಬುದಾಗಿ ಹೇಳಿ, ಅವರ ಸಮುದಾಯದ ಹಿತಕ್ಕೆ ಸೀಮಿತರಾಗಿ, ಇತರೆ ಸಮುದಾಯಗಳನ್ನು ಕಡೆಗಣಿಸುವುದು ಎಷ್ಟರ ಮಟ್ಟಿಗೆ ಸರಿ? ಎಂದು ಪ್ರಶ್ನಿಸಿದ ಅವರು, ಚುನಾವಣೆಯಲ್ಲಿ ಕುರುಬ ಸಮುದಾಯದ ಅಭ್ಯರ್ಥಿಯ ವಿರುದ್ಧ ಸೋತಿದ್ದನ್ನೇ ಮನಸ್ಸಿನಲ್ಲಿ ಇಟ್ಟುಕೊಂಡು, ಈಗ ಇಡೀ ಸಮುದಾಯವನ್ನು ಕೆಣಕಲು ಮುಂದಾಗಿರುವ ಅವರ ವರ್ತನೆಯನ್ನು ಸಮಾಜ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಸೂಚ್ಯವಾಗಿ ಎಚ್ಚರಿಸಿದರು.

    ಶ್ರೀಈಶ್ವರಾನಂದಪುರಿ ಸ್ವಾಮೀಜಿ ಅವರೊಂದಿಗೆ ಅನುಚಿತವಾಗಿ ವರ್ತಿಸಿರುವ ಮಾದುಸ್ವಾಮಿ ಶ್ರೀಗಳ ಹಾಗೂ ಸಮುದಾಯದ ಕ್ಷಮೆಯಾಚಿಸುವುದರ ಜೊತೆಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಅಕಸ್ಮಾತ್ ಅವರಾಗಿಯೇ ರಾಜೀನಾಮೆ ನೀಡಲು ಮುಂದಾಗದಿದ್ದರೆ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ತಮ್ಮ ಸಚಿವ ಸಂಪುಟದಿಂದ ಅವರನ್ನು ಕಿತ್ತೆಸೆಯಬೇಕು ಎಂದು ಆಗ್ರಹಿಸಿದರು.

    ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಕೆಂಗೋ ಹನುಮಂತಪ್ಪ, ಮುಖಂಡರುಗಳಾದ ಬಳ್ಳಾರಿ ಷಣ್ಮುಖಪ್ಪ, ಎಚ್.ಬಿ.ಗೋಣೆಪ್ಪ, ಎಚ್.ಜಿ.ಸಂಗಪ್ಪ, ಎನ್.ಜೆ.ನಿಂಗಪ್ಪ, ಭೈರೇಶ್, ಕೆ.ರೇವಣ್ಣ, ಎಸ್.ಎಸ್.ಗಿರೀಶ್ ಮತ್ತಿತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link