ಹರಪನಹಳ್ಳಿ
ತಾಲ್ಲೂಕಿನ ಕೂಲಹಳ್ಳಿ ಗ್ರಾಮದಲ್ಲಿ ನಡೆಯುತ್ತಿರುವ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರದಲ್ಲಿ ಶುಕ್ರವಾರ ಸಂಜೆ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಆಶ್ರಯದಲ್ಲಿ `ಅಂತರ್ ರಾಷ್ಟ್ರೀಯ ಮಹಿಳಾ ದಿನಾಚರಣೆ’ ಕುರಿತು ಕಾನೂನು ಅರಿವು ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಮಂಜುಳಾ ಶಿವಪ್ಪ ಉಂಡಿ ಮಾತನಾಡಿ, `ಗ್ರಾಮೀಣರ ನೈಜ್ಯ ಬದುಕು ಅರಿಯಲು ವಿದ್ಯಾರ್ಥಿಗಳಿಗೆ ಎನ್ನೆಸ್ಸೆಸ್ ಶಿಬಿರಗಳು ಸಹಕಾರಿಯಾಗಿವೆ. ಸಾಂಸ್ಕೃತಿಕ ಚಟುವಟಿಕೆ, ನಾಯಕತ್ವ ಗುಣ, ಸಹೋದರತ್ವ, ಸಮಾನತೆ, ಶಿಸ್ತು ಕಲಿಕೆ ಇಂತಹ ಶಿಬಿರಗಳಿಂದ ಸಾಧ್ಯ. ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಗೆ ಉನ್ನತ ಸ್ಥಾನ ನೀಡಲಾಗಿದೆ.ಲಿಂಗ ತಾರತಮ್ಯವಿಲ್ಲದೆ ಪ್ರತಿಯೊಬ್ಬರಿಗೂ ಸಮಾನವಾದ ಸ್ಥಾನಮಾನ ನೀಡಬೇಕು’ ಎಂದು ಹೇಳಿದರು.
ಸಿವಿಲ್ ನ್ಯಾಯಾಧೀಶರಾದ ಬಿ.ಜಿ ಶೋಭಾ ಮಾತನಾಡಿ, ಹಿಂದಿನಂತೆ ಮಹಿಳೆ ಅಡುಗೆ ಮನೆಗೆ ಅಷ್ಟೇ ಸೀಮಿತವಾಗಿಲ್ಲ. ಪುರುಷನಿಗೆ ಸಮನಾಗಿ ಮಹಿಳೆ ಎಲ್ಲ ಕ್ಷೇತ್ರಗಳಲ್ಲೂ ದುಡಿಯುತ್ತಿದ್ದಾಳೆ. ಪುರುಷನಿಗೆ ಸಿಗುವ ಗೌರವಾಭಿಮಾನ ಸ್ತ್ರೀಗೂ ದೊರೆಯಬೇಕು ಎಂದು ಹೇಳಿದರು.
ವಕೀಲರಾದ ಜೆ.ಸೀಮಾ `ಮೂಲಭೂತ ಹಕ್ಕುಗಳು ಹಾಗೂ ಕರ್ತವ್ಯಗಳು’ ಕುರಿತು ವಿಶೇಷ ಉಪನ್ಯಾಸ ನೀಡಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಎನ್.ಎಂ. ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ವಿಜ್ಞಾನ ಪರಿಷತ್ ಕಾರ್ಯದರ್ಶಿ ಎಂ.ಗುರುಸಿದ್ದಸ್ವಾಮಿ ಅವರು `ಪವಾಡಗಳ ವೈಜ್ಞಾನಿಕ ವಿಶ್ಲೇಷಣೆ’ ಕುರಿತು ಶಿಬಿರಾರ್ಥಿಗಳಿಗೆ ಹಾಗೂ ಗ್ರಾಮಸ್ಥರಿಗೆ ಪ್ರಾಯೋಗಿಕವಾಗಿ ತಿಳಿಸಿಕೊಟ್ಟರು.
ವಕೀಲರ ಸಂಘದ ಅಧ್ಯಕ್ಷ ರಾಮನಗೌಡ ಪಾಟೀಲ್, ಉಪಾಧ್ಯಕ್ಷ ಕೆ.ಬಸವರಾಜ್, ಅಪರ ಸರ್ಕಾರಿ ವಕೀಲ ಮಂಜುನಾಥ ಕಣಿವಿಹಳ್ಳಿ, ಗ್ರಂಥಪಾಲಕಿ ನಾಗರತ್ನ ಹೊಸಮನಿ, ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿ ಕೆ.ಎಂ.ಹುಚ್ಚರಾಯಪ್ಪ, ಸುರೇಖಾ, ವೀರೇಶ್, ಎಸ್.ಸವಿತಾ, ಪುನೀತರಾಜ್, ರೀಮಾ ಕೋಟ್ಯಾನ್, ದಿವ್ಯಶ್ರೀ ಭಾಗವಹಿಸಿದ್ದರು.