ಹುಳಿಯಾರು
ಪ್ರತಿಯೊಬ್ಬರು ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದರಿಂದ ರೋಗವಿಲ್ಲದ ಜೀವನ ಸಾಗಿಸಬಹುದು ಎಂದು ಡಾ. ಪುಣ್ಯಶ್ರೀ ಸಲಹೆ ನೀಡಿದರು.
ಹುಳಿಯಾರು ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿದ್ಧಾರ್ಥ ಮಹಾವಿದ್ಯಾಲಯ ಆಸ್ಪತ್ರೆ ಹಾಗೂ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ, ಚಿಕ್ಕನಾಯಕನಹಳ್ಳಿ ಇವರ ಸಹಯೋಗದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣೆ ಮತ್ತು ಕ್ಯಾನ್ಸರ್ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕ್ಯಾನ್ಸರ್ ರೋಗದ ಬಗ್ಗೆ ಸಾಕಷ್ಟು ಮಾಹಿತಿ ನೀಡಿದ ಅವರು, ಮಹಿಳೆಯರಲ್ಲಿ ಸ್ತನ ಹಾಗೂ ಗರ್ಭಕೋಶದ ಕ್ಯಾನ್ಸರ್ ಹೆಚ್ಚುತ್ತಿದ್ದು ಮಹಿಳೆಯರು ಕ್ಯಾನ್ಸರ್ ರೋಗದ ಬಗ್ಗೆ ಭಯಭೀತರಾಗದೆ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ ಹಾಗೂ ಪ್ರಥಮವಾಗಿ ಪ್ರಾರಂಭದಲ್ಲೇ ಈ ರೋಗದ ಬಗ್ಗೆ ಅರಿತುಕೊಳ್ಳುವುದು ಬಹಳ ಅವಶ್ಯಕವಾಗಿದೆ ಎಂದರು.
ತಾಲ್ಲೂಕು ಪಂಚಾಯಿತಿ ಸದಸ್ಯರಾದ ಹೆಚ್.ಎನ್.ಕುಮಾರ್ ಮಾತನಾಡಿ ಕ್ಯಾನ್ಸರ್ ಬಗ್ಗೆ ತಿಳುವಳಿಕೆ ಅತ್ಯವಶ್ಯಕತೆ ಇದೆ. ಈ ಬಗ್ಗೆ ಶಿಬಿರವನ್ನು ಏರ್ಪಡಿಸಿರುವುದು ಶ್ಲಾಘನೀಯ ಕೆಲಸ. ಸಮಾಜಕ್ಕೆ ಅವಶ್ಯಕವಿರುವ ಇಂತಹ ಶಿಬಿರಗಳನ್ನು ನಿಯಮಿತವಾಗಿ ಏರ್ಪಡಿಸುವಂತೆ ತಿಳಿಸಿದ ಅವರು, ಶಿಬಿರದಲ್ಲಿ ತಜ್ಞ ವೈದ್ಯರುಗಳು ಪಾಲ್ಗೊಂಡಿದ್ದು ಗ್ರಾಮಸ್ಥರು ಇದರ ಸದುಪಯೋಗಮಾಡಿಕೊಳ್ಳಬೇಕೆಂದರು.
ಹುಳಿಯಾರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಜಯಪ್ರಕಾಶ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ದಂತ ವೈದ್ಯರಾದ ಡಾ.ದಿವ್ಯಶ್ರೀ, ಹಿರಿಯ ಪುರುಷ ಆರೋಗ್ಯ ಸಹಾಯಕರಾದ ಸಿ.ವಿ.ವೆಂಕಟರಾಮಯ್ಯ ಸೇರಿದಂತೆ ಆಶಾ ಕಾರ್ಯಕರ್ತೆಯರು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಸ್ಪತ್ರೆ ಸಿಬ್ಬಂದಿ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
