ಹಿರಿಯೂರು :
ಮಕ್ಕಳಿಗೆ ಬೆಲೆ ಬಾಳುವ ಆಸ್ತಿ ಮಾಡುವ ಬದಲು ಪೋಷಕರು ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಮಕ್ಕಳನ್ನೇ ದೇಶಕ್ಕೆ ಒಳ್ಳೆಯ ಆಸ್ತಿಯನ್ನಾಗಿ ಮಾಡಿ ಎಂಬುದಾಗಿ ಗುಲ್ಬರ್ಗವಿಶ್ವವಿದ್ಯಾಲಯದ ಉಪಕುಲಸಚಿವ ಡಾ.ಎಸ್.ಆರ್.ನಿರಂಜನ್ ಹೇಳಿದರು.
ನಗರದ ಗಂಗಾಸೆಂಟ್ರಲ್ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಶಾಲಾವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಪೂರ್ವದಲ್ಲಿ ಮತ್ತು ಸ್ವಾತಂತ್ರ್ಯ ಪಡೆದ ಆರಂಭದ ದಶಕಗಳಲ್ಲಿ ಜ್ಞಾನಾರ್ಜನೆಗೆಂದು ಓದು ಕಲಿತರೆ ಸಾಕು ಎಂಬಂತಿತ್ತು ಆದರೆ ಈಗ ಓದಿಗೆ ಮಿತಿ ಎಂಬುದಿಲ್ಲ. ಮಕ್ಕಳನ್ನು ರಾಷ್ಟ್ರೀಯ,ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವ ರೀತಿಯಲ್ಲಿ ತಯಾರುಮಾಡಬೇಕು ಎಂಬ ಕನಸು ಹೊತ್ತವರ ಸಂಖ್ಯೆ ಹೆಚ್ಚುತ್ತಿದೆ. ಇದು ತಪ್ಪಲ್ಲ. ಆದರೆ ಕನಸು ಕಾಣುವ ಜತೆಗೆ ಸರಿಯಾದ ಮಾರ್ಗದರ್ಶನವೂ ಬೇಕಾಗುತ್ತದೆ. ಮಕ್ಕಳನ್ನು ಮೊಬೈಲ್ ಮತ್ತು ಕಂಪ್ಯೂಟರಗಳಿಂದ ಮಕ್ಕಳನ್ನು ದೂರವಿಡದೆ, ಆಧುನಿಕ ವಿಜ್ಞಾನ, ತಂತ್ರಜ್ಞಾನದ ಬಗ್ಗೆ, ಬದಲಾಗುತ್ತಿರುವ ಶಿಕ್ಷಣ ವ್ಯವಸ್ಥೆಯ ಬಗ್ಗೆ ಅರಿಯಲು ಬಿಡಿ ಎಂದು ಸಲಹೆ ನೀಡಿದರು.
ಮೈಸೂರು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ.ಆರ್. ರಾಜಣ್ಣ ಮಾತನಾಡಿ, ಮಕ್ಕಳಿಗೆ ಲಕ್ಷಗಟ್ಟಲೆ ಹಣ ಪಡೆಯುವ ಹೈಟೆಕ್ ಶಾಲೆಗಳಲ್ಲಿ ಶಿಕ್ಷಣ ಕೊಡಿಸುತ್ತಿದ್ದೇವೆ ಎಂಬ ಮನೋಭಾವಕ್ಕಿಂತ, ಅವರ ಆಸಕ್ತಿಗೆ ತಕ್ಕಂತಹ ಶಿಕ್ಷಣ ಕೊಡಿಸುತ್ತಿದ್ದೇವೆಯೇ ಎಂಬುದು ಮುಖ್ಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಓಬಯ್ಯ ವಹಿಸಿದ್ದರು. ಶಿಕ್ಷಕರುಗಳಾದ ಸಿದ್ದಗಂಗಮ್ಮ, ಶೈಲಜಾ, ಸಿದ್ಧನಾಯಕ, ಲಕ್ಷ್ಮೀಪ್ರಶಾಂತ್,ದಿವಾಕರ ಇತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
