ಚಿತ್ರದುರ್ಗ:
ಶಿಕ್ಷಕರುಗಳು ಕೇವಲ ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡುವುದಕ್ಕಷ್ಟೆ ಸೀಮಿತವಾಗದೆ ಸಹಪಠ್ಯ ಚಟುವಟಿಕೆಗಳಲ್ಲಿ ತೊಡಗಿಕೊಂಡು ತಮ್ಮಲ್ಲಿರುವ ಕಲೆ ಮತ್ತು ಪ್ರತಿಭೆಯನ್ನು ಪ್ರದರ್ಶಿಸಿದಾಗ ಎಲ್ಲೆಡೆ ಮಾನ್ಯತೆ ಸಿಗುತ್ತದೆ ಮಕ್ಕಳು ನಿಮ್ಮನ್ನು ಪ್ರೀತಿಸುತ್ತಾರೆ ಎಂದು ಡಯಟ್ ಉಪಪ್ರಾಚಾರ್ಯರಾದ ರಮೇಶ್ ತಿಳಿಸಿದರು.
ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಬೆಂಗಳೂರು ಉಪನಿರ್ದೇಶಕರ ಕಾರ್ಯಾಲಯ, ಸಾರ್ವಜನಿಕ ಶಿಕ್ಷಣ ಇಲಾಖೆ ಚಿತ್ರದುರ್ಗ ಇವುಗಳ ಸಂಯುಕ್ತಾಶ್ರಯದಲ್ಲಿ 2018-19 ನೇ ಸಾಲಿನ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ತರಳಬಾಳು ವಿದ್ಯಾಸಂಸ್ಥೆಯಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಸಹಪಠ್ಯ ಚಟುವಟಿಕೆ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಹಪಠ್ಯ ಚಟುವಟಿಕೆಗಳ ಬಗ್ಗೆ ಎಲ್ಲಾ ಶಿಕ್ಷಕರಲ್ಲಿಯೂ ಆಸಕ್ತಿ ಇರಬೇಕು. ಸಂಗೀತ, ಸಾಹಿತ್ಯ, ಜನಪದ, ಚಿತ್ರಕಲೆ, ರಸಪ್ರಶ್ನೆ, ಭಾಷಣ ಹೀಗೆ ವಿವಿಧ ಹಂತಗಳಲ್ಲಿ ಭಾಗವಹಿಸುವ ಮೂಲಕ ಜ್ಞಾನವನ್ನು ಹೆಚ್ಚಿಸಿಕೊಳ್ಳಿ. ಮಕ್ಕಳನ್ನು ಕೇವಲ ಪಠ್ಯಪುಸ್ತಕ ಅಂಕಗಳಿಕೆಗಷ್ಟೆ ಮೀಸಲಿರಿಸಬಾರದು. ತನ್ನಲ್ಲಿರುವ ಕಲೆಯಿಂದ ತಾನೇ ತೃಪ್ತಿಕೊಟ್ಟುಕೊಳ್ಳುವುದು ನಿಜವಾದ ಸಂತೋಷ ಎಂದು ಹೇಳಿದರು.
2009 ರಿಂದ 2013 ರವರೆಗೆ ಚಿತ್ರದುರ್ಗದಲ್ಲಿ ರಾಜ್ಯಮಟ್ಟದ ಸಹಪಠ್ಯ ಸ್ಪರ್ಧಾಕಾರ್ಯಕ್ರಮ ನಡೆದಿತ್ತು. ಸ್ಪರ್ಧೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ ಭಾಗವಹಿಸುವುದು ಅತ್ಯವಶ್ಯಕ. ಪ್ರತಿ ಹಂತದಲ್ಲಿಯೂ ಪ್ರಥಮ ಸ್ಥಾನ ಪಡೆಯುವವರಿಗೆ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಅವಕಾಶ ಸಿಗುತ್ತದೆ. ಬಳಸಿಕೊಳ್ಳಿ ಎಂದು ಶಿಕ್ಷಕರುಗಳಿಗೆ ಕರೆ ನೀಡಿದರು.
ಕಾರ್ಯಕ್ರಮದ ನೋಡಲ್ ಅಧಿಕಾರಿ ಗೋವಿಂದಪ್ಪ ಪ್ರಾಸ್ತಾವಿಕವಾಗಿ ಮಾತನಾಡುತ್ತ ಜಿಲ್ಲೆಯಾದ್ಯಂತ 78 ಶಿಕ್ಷಕರುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಹೊಳಲ್ಕೆರೆಯಿಂದ ಯಾವೊಬ್ಬ ಶಿಕ್ಷಕ-ಶಿಕ್ಷಕಿಯೂ ಭಾಗವಹಿಸದಿರುವುದು ಬೇಸರದ ಸಂಗತಿ. ಅಂತಹ ಶಿಕ್ಷಕರುಗಳ ಮೇಲೆ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಇಂತಹ ಸ್ಪರ್ಧೆಯಲ್ಲಿ ತಪ್ಪಿಸಿಕೊಳ್ಳುವುದು ನಿಜಕ್ಕೂ ತಮಗೆ ತಾವೆ ವಂಚನೆ ಮಾಡಿಕೊಂಡಂತೆ ಎಂದು ಹೇಳಿದರು.
ಹತ್ತೊಂಬತ್ತು ಮಂದಿ ತೀರ್ಪುಗಾರರು ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಪಾರದರ್ಶಕವಾಗಿ ತೀರ್ಪು ನೀಡುವಂತೆ ತಿಳಿಸಿದರು.ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಾನಂದ್ ಮಾತನಾಡಿ ತಾಲೂಕು ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಜಿಲ್ಲಾ ಮಟ್ಟಕ್ಕೆ ಬಂದಿದ್ದೀರ. ಶಿಕ್ಷಕರುಗಳಲ್ಲಿರುವ ಕಲೆ ಮತ್ತು ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಲು ಪ್ರತಿ ವರ್ಷವೂ ಸಹಪಠ್ಯ ಚಟುವಟಿಕೆಗಳನ್ನು ಏರ್ಪಡಿಸುತ್ತ ಬರಲಾಗುತ್ತಿದೆ. ಇದರಲ್ಲಿ ಭಾಗವಹಿಸದ ಶಿಕ್ಷಕರುಗಳು ಅನ್ಯಾಯ ಮಾಡಿಕೊಳ್ಳುತ್ತಾರೆ. ಸಿಕ್ಕ ಅವಕಾಶವನ್ನು ಕಳೆದುಕೊಳ್ಳದೆ ರಾಜ್ಯ ಮಟ್ಟಕ್ಕೆ ಹೋಗಿ ತಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಿ ಎಂದರು.
ಸಿ.ಎಂ.ತಿಪ್ಪೇಸ್ವಾಮಿ, ಸಾರ್ವಜನಿಕ ಶಿಕ್ಷಣ ಇಲಾಖೆ ವಿಷಯ ಪರಿವೀಕ್ಷಕರುಗಳಾದ ಎಸ್.ಡಿ.ಸವಿತ, ಮಹಲಿಂಗಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಮಹಂತೇಶ್ ವೇದಿಕೆಯಲ್ಲಿದ್ದರು.
