ಬೆಂಗಳೂರು
ಬಹುಕೋಟಿ ವಂಚನೆ ನಡೆಸಿರುವ ಐಎಂಎ ಸಮೂಹ ಸಂಸ್ಥೆಯ ಮಾಲೀಕ ಮೊಹ್ಮದ್ ಮನ್ಸೂರ್ಖಾನ್ನನ್ನು ವಶಕ್ಕೆ ಪಡೆದುಕೊಂಡಿರುವ ವಿಶೇಷ ತನಿಖಾ ತಂಡ (ಎಸ್ಐಟಿ) ಅಧಿಕಾರಿಗಳು ನಡೆಸಿದ ವಿಚಾರಣೆಯಲ್ಲಿ ವಂಚನೆ ಸಂಬಂಧ ಮಹತ್ವದ ಮಾಹಿತಿಯನ್ನು ಬಾಯ್ಬಿಟ್ಟಿದ್ದಾನೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಮನ್ಸೂರ್ಖಾನ್ನನ್ನು ಶನಿವಾರ ಸಂಜೆ ವಶಕ್ಕೆ ಪಡೆದುಕೊಂಡ ಎಸ್ಐಟಿ ಅಧಿಕಾರಿಗಳು, ಸಿಐಡಿಯ ಕಾರ್ಲಟನ್ ಕಚೇರಿಯಲ್ಲಿ ವಿಚಾರಣೆಗೊಳಪಡಿಸಿ ದಾಗ ಮಾಜಿ ಸಚಿವರಾದ ಜಮೀರ್ ಅಹಮದ್ಖಾನ್ ಜಮೀರ್ ಅಹಮದ್ ಸೇರಿ ಕೆಲ ರಾಜಕಾರಣಿಗಳು ಅಧಿಕಾರಿಗಳ ಜೊತೆ ಹೋಂದಿದ್ದ ಹಣಕಾಸಿನ ವ್ಯವಹಾರವನ್ನು ತಿಳಿಸಿದ್ದಾನೆ ಎಂದು ಎಸ್ಐಟಿ ಮೂಲಗಳು ತಿಳಿಸಿವೆ.
ತಡರಾತ್ರಿ ವಿಚಾರಣೆ ವೇಳೆ ಎದೆ ನೋವು ಎಂದು ಮನ್ಸೂರ್ ಹೇಳಿದ್ದು, ಕೂಡಲೇ ತಜ್ಞವೈದ್ಯರನ್ನು ಕರೆಸಿ ತಪಾಸಣೆ ನಡೆಸಲಾಗಿದ್ದು, ಗಂಭೀರ ಸಮಸ್ಯೆ ಇಲ್ಲದಿರುವುದರಿಂದ ವಿಶ್ರಾಂತಿಗೆ ಅವಕಾಶ ನೀಡಿ, ಇಂದು ಬೆಳಿಗ್ಗೆಯಿಂದ ಮತ್ತೆ ವಿಚಾರಣೆ ನಡೆಸಲಾಗಿದೆ.ಸಾವಿರಾರು ಮಂದಿಗೆ ಲಾಭಾಂಶದ ಆಸೆ ತೋರಿಸಿ ಸುಮಾರು 2 ಸಾವಿರ ಕೋಟಿ ವಂಚನೆ ನಡೆಸಿರುವ ಸಂಬಂಧ ಪ್ರಶ್ನೆಗಳನ್ನಿಟ್ಟುಕೊಂಡು ಅಧಿಕಾರಿಗಳು ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ. ಮನ್ಸೂರ್ ಪರಾರಿಯಾಗುವ ಮುನ್ನ ಹಾಗೂ ತಲೆಮರೆಸಿಕೊಂಡಿದ್ದ ವೇಳೆ ಬಿಡುಗಡೆ ಮಾಡಿದ್ದ ವೀಡಿಯೊಗಳಲ್ಲಿ ಮಾಡಿದ ಆರೋಪಗಳ ಬಗ್ಗೆಯೂ ವಿಚಾರಣೆ ನಡೆಸಲಾಗಿದೆ.
ಕೆಲ ರಾಜಕಾರಣಿಗಳು ಹಾಗೂ ಅಧಿಕಾರಿಗಳಿಗೆ ನೀಡಿರುವ ಹಣಕಾಸಿನ ವಿವರಗಳು, ಚಿನ್ನಾಭರಣ ಮಳಿಗೆಗಳು, ಆಸ್ಪತ್ರೆ, ಔಷಧಿ ಮಳಿಗೆಗಳು, ಹಾಗೂ ರಿಯಲ್ಎಸ್ಟೇಟ್ ವ್ಯವಹಾರದಲ್ಲಿ ಹಣ, ಹಾಗೂ ಅದರ ವ್ಯವಹಾರದ ದಾಖಲೆಪತ್ರಗಳನ್ನು ಇಟ್ಟುಕೊಂಡು ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








